ದೀನ ದಲಿತರಿಗೆ ನೆರವು ಒದಗಿಸುವಲ್ಲಿ ರಾಜಿ ಇಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-05-02 12:22 GMT

ಬೆಂಗಳೂರು, ಮೇ 2: ‘ದೀನದಲಿತರ ಶ್ರೇಯೋಭಿವೃದ್ಧಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರನ್ನು ಒರೆಸುವುದು ನನಗೆ ಮುಖ್ಯ. ಅವರು ಸ್ವಾಭಿಮಾನದ ಬದುಕು ನಡೆಸುವುದು ಬಹಳ ಮುಖ್ಯ. ಇದರಲ್ಲಿ ಯಾವುದೇ ರೀತಿಯ ರಾಜಿ ಹಾಗೂ ಮುಲಾಜೂ ಇಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ‘ಕಲ್ಯಾಣ ಮಿತ್ರ' ಸಹಾಯ ವಾಣಿ ಹಾಗೂ ಅಧಿಕಾರಿಗಳಿಗೆ ‘ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ' ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾನೂನುಗಳಿವೆ, ಆ ಪ್ರಕಾರ ನಡೆದುಕೊಳ್ಳಲು ಏನು ತೊಂದರೆ? ನೀವು ಸರಿಯಾಗಿ ಕೆಲಸ ಮಾಡಿದರೆ ಇಡೀ ಕರ್ನಾಟಕದ ದೀನದಲಿತರು ಸಂತೋಷಪಡುತ್ತಾರೆ. ಅವರ ಆಕಾಂಕ್ಷೆಗಳಿಗೆ ರೆಕ್ಕೆಪುಕ್ಕ ಬರುತ್ತವೆ, ಆ ಸಂಕಲ್ಪವನ್ನು ತೊಡಬೇಕು. ಕೇವಲ ನಿಮ್ಮ ಕೆಲಸ ಮಾಡುವುದಷ್ಟೇ ಅಲ್ಲ, ಅಧಿಕಾರವನ್ನು ಜನರ ಪರವಾಗಿ ಬಳಕೆ ಮಾಡುವ ಕರ್ತವ್ಯ ನಿಮ್ಮದು' ಎಂದು ತಾಕೀತು ಮಾಡಿದರು.

‘ಸರಕಾರದ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಲು ಸಾಮಥ್ರ್ಯ ಮತ್ತು ಬದ್ಧತೆ ಅಗತ್ಯ. ಜನ ಕಲ್ಯಾಣಕ್ಕಾಗಿ ಸರಕಾರ ಜಾರಿಗೊಳಿಸುವ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಬೇಕು ಹಾಗೂ ಅವನ ಜೀವನದ ಗುಣಮಟ್ಟ ಹೆಚ್ಚಿಸಬೇಕು ಎನ್ನುವ ಕಲ್ಪನೆ ಸಾಕಾರಗೊಳ್ಳಲು ಮೊದಲು ಇಲಾಖೆಗೆ ಸಾಮಥ್ರ್ಯ ಇರಬೇಕು. ಅದರ ಜೊತೆಗೆ ಬದ್ಧತೆ ಇರಬೇಕು' ಎಂದು ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು. 

‘ಆಡಳಿತದ ವ್ಯಾಖ್ಯಾನ ಹಾಗೂ ಪ್ರಜಾಪ್ರಭುತ್ವದ ಆಕಾಂಕ್ಷೆಗಳು ಬದಲಾಗಿವೆ. ಬದಲಾವಣೆಯ ಈ ಪರ್ವ ಕಾಲದಲ್ಲಿ ನಾವೂ ಬದಲಾವಣೆಗೆ ಹೊಂದಿಕೊಂಡರೆ ಮಾತ್ರ ಪ್ರಸ್ತುತವಾಗುತ್ತೇವೆ. ಪ್ರಸ್ತುತವಾಗುವುದರ ಜೊತೆಗೆ ನಮ್ಮನ್ನು ನಂಬಿದ ಜನರಿಗೆ ನ್ಯಾಯವನ್ನು ಕೊಡಲು ಸಾಧ್ಯ. ಇದನ್ನು ನಾವು ಮಾಡದಿದ್ದರೆ, ಎಲ್ಲವೂ ಇದ್ದು ಇಲ್ಲದಂತಾಗುತ್ತದೆ. ಸರಕಾರ ಪ್ರತಿವರ್ಷ ಅನುದಾನವನ್ನು ಕೊಡುತ್ತಿರುತ್ತದೆ. ಅದರ ಸದುಪಯೋಗ ಆಗಬೇಕು. ಅದು ಸರಿಯಾದ ಸಮಯದಲ್ಲಿ ಆಗಬೇಕು. ಆಗ ಕಾರ್ಯಕ್ರಮದ ಉದ್ದೇಶ ಈಡೇರುತ್ತದೆ' ಎಂದು ನುಡಿದರು.

‘ಕಷ್ಟದಲ್ಲಿರುವವರಿಗೆ, ಬಡವರಿಗೆ, ಅವಮಾನಕ್ಕೆ ಒಳಗಾದವರಿಗೆ ಕೈಹಿಡಿದು ಮೇಲೆತ್ತುವ ಸೌಭಾಗ್ಯ ಒದಗಿದೆ. ಇದನ್ನು ನಾನು ಪ್ರಾಮಾಣಿಕವಾಗಿ ಮಾಡಬೇಕು ಎನ್ನುವ ಬದ್ಧತೆ ಬಂದರೆ ಈ ಸಮಾಜ ಖಂಡಿತ ಉದ್ಧಾರವಾಗುತ್ತದೆ. ನೀವು ನಿಮ್ಮ ಕರ್ತವ್ಯ, ಸರಕಾರದ ಧ್ಯೇಯೋದ್ದೇಶಗಳು ಹಾಗೂ ಕಟ್ಟಕಡೆಯ ಮನುಷ್ಯನ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು. ಟೀಕೆ-ಟಿಪ್ಪಣಿಗಳು ಬಂದರೂ ಕರ್ತವ್ಯದಿಂದ ವಿಮುಖರಾಗಬಾರದು ಕರ್ತವ್ಯದಲ್ಲಿ ತಲ್ಲೀನರಾದವರಿಗೆ ಯಾವುದೂ ಬಾಧಕವಾಗುವುದಿಲ್ಲ. ಕರ್ತವ್ಯ ಮಾಡದೆ ಗತಿಸಿ ಹೋದ ಕಾಲ ಮರಳಿ ಬರುವುದಿಲ್ಲ. ಅದರ ಬಗ್ಗೆ ಮಾತನಾಡುವುದರಿಂದ ಪ್ರಯೋಜನವಿಲ್ಲ. ಪ್ರಸ್ತುತವಾಗಿರುವ ನಮ್ಮ ಗುರಿ ಸಾಧನೆಯ ಛಲ ಮುಖ್ಯ. ವರ್ತಮಾನದಲ್ಲಿ ಮಾಡುವ ಕೆಲಸ ಭವಿಷ್ಯ ನಿರ್ಮಿಸುತ್ತದೆ. ಸಮಯಕ್ಕೆ ತಕ್ಕ ಹಾಗೆ ಕಾರ್ಯಕ್ರಮಗಳನ್ನು ಮುಟ್ಟಿಸಬೇಕು. ಸರಿಯಾದ ಮಾರ್ಗಸೂಚಿಗಳು ಇಲ್ಲದೆ ಕೆಲವು ಕಾರ್ಯಕ್ರಮಗಳು ಮುಟ್ಟುವುದಿಲ್ಲ' ಎಂದು ಹೇಳಿದರು. 

ವಿಳಂಬ ಧೋರಣೆ ಒಪ್ಪಲು ಸಾಧ್ಯವಿಲ್ಲ: ‘ಅನುದಾನ ಒದಗಿಸಿದರೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತದೆ. ಸರಕಾರ ವಿಳಂಬ ಧೋರಣೆ, ಅಸಡ್ಡೆ, ಅಸಹಕಾರವನ್ನು ಎಂದೂ ಒಪ್ಪಲು ಸಾಧ್ಯವಿಲ್ಲ. ದಾಖಲೆಗಳ ಸರಳೀಕರಣವಾಗಬೇಕು. ಇಲಾಖೆಗಳ ಸಮನ್ವಯ, ನೌಕರರಲ್ಲಿ ತಾಳಮೇಳ ಇವೆಲ್ಲವುಗಳ ಆಮೂಲಾಗ್ರ ಬದಲಾವಣೆಯ ಅವಶ್ಯಕತೆ ಇದೆ. ಅತ್ಯಂತ ಸರಳವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಮಾಡಬೇಕು' ಎಂದು ಸೂಚಿಸಿದರು.

‘ಸ್ವಾತಂತ್ರ್ಯ ಬಂದ ಮೇಲೆ 75 ವರ್ಷಗಳಾಗಿವೆ. ಸರಕಾರದ ಸಹಾಯವಿಲ್ಲದೆ ಅವರು ಏನೂ ಮಾಡಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ಅವರಿಗೆ ನ್ಯಾಯ ಸಿಕ್ಕಿರುವುದಿಲ್ಲ. ಸರಕಾರವೇ ನ್ಯಾಯ ಕೊಡಬೇಕು. ನ್ಯಾಯ ಕೊಡುವುದಷ್ಟೇ ಅಲ್ಲ, ಈ ಸಂದೇಶವನ್ನು ಕೊಡಬೇಕು. ನಮ್ಮ ಸರಕಾರ ವಿಳಂಬ ಧೋರಣೆ, ಅಸಡ್ಡೆ ಅಸಹಕಾರವನ್ನು ಎಂದೂ ಒಪ್ಪಲು ಸಾಧ್ಯವಿಲ್ಲ' ಎಂದು ಅವರು ಎಚ್ಚರಿಸಿದರು.

ನೌಕರರಿಗೆ ರಕ್ಷಣೆ: ‘ಈ ವ್ಯವಸ್ಥೆಯಲ್ಲಿ ಸರಕಾರಿ ನೌಕರರಾಗಿ ಕೆಲಸ ಮಾಡುವುದು ಸುಲಭವಲ್ಲ. ಬಹಳಷ್ಟು ಬಾರಿ ಕ್ಲಿಷ್ಟಕರ ಸಂದರ್ಭಗಳು ಬರುತ್ತವೆ. ಸ್ಪಷ್ಟವಾದ ವಿಚಾರಗಳಿಲ್ಲದ ನಾಯಕತ್ವದಿಂದ ಈ ಸಂದರ್ಭಗಳು ಬರುತ್ತವೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ನಾಯಕತ್ವವಾಗಲಿ, ವ್ಯವಸ್ಥೆಯಾಗಲಿ ಉದ್ಧಾರ ಮಾಡಲು ಸಾಧ್ಯವಿಲ್ಲ. ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಅನುಮಾನ, ಅವಕಾಶವಿಲ್ಲ. ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗುವುದು. ಅದರಂತೆ ಕೆಲಸ ಮಾಡಬೇಕು. ನಿಮ್ಮನ್ನು ಸಂಪೂರ್ಣವಾಗಿ ಸಂರಕ್ಷಿಸುವುದು ನಮ್ಮ ಕೆಲಸ' ಎಂದು ಅವರು ಅಭಯ ನೀಡಿದರು.

‘ಜನ ಹತಾಶರಾಗಬಾರದು. ಅವರು ಬಂದಾಗ ಸ್ವಲ್ಪ ಕೋಪದಲ್ಲಿ ಮಾತನಾಡುತ್ತಾರೆ. ನಾವು ಸಮಸ್ಯೆಗಳನ್ನು ಚರ್ಚೆ ಮಾಡುತ್ತೇವೆ. ಸಮುದಾಯಗಳು ಸಮಸ್ಯೆಗಳೊಂದಿಗೆ ಬದುಕುತ್ತಾರೆ. ಸಮಸ್ಯೆಯನ್ನು ಚರ್ಚೆ ಮಾಡುವುದಕ್ಕೂ ಶ್ರಮಪಟ್ಟು ಕೆಲಸ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ನಾವು ಅವರ ಮಟ್ಟಕ್ಕೆ ಹೋಗಿ ಅವರ ಸ್ಥಾನದಲ್ಲಿದ್ದುಕೊಂಡು ಯೋಚಿಸಿದಾಗ ನ್ಯಾಯ ನೀಡಲು ಸಾಧ್ಯವಾಗುತ್ತದೆ. ಅವರ ಮಾತನ್ನು ಕೇಳಿದಾಗ ನಿಮ್ಮ ಮನಃ ಪರಿವರ್ತನೆಯಾಗಿ ನೀವೇ ಸಮಸ್ಯೆಯನ್ನು ಬಗೆಹರಿಸುತ್ತೀರಿ' ಎಂದು ಅವರು ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪರಿಷತ್ ಸದಸ್ಯರಾದ ರವಿಕುಮಾರ್, ಎ.ನಾರಾಯಣಸ್ವಾಮಿ, ಅ.ದೇವೇಗೌಡ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಚ್.ನಾಗೇಶ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಇಂಧನ ಇಲಾಖೆಯ ಜಿ.ಕುಮಾರನಾಯಕ್, ರಾಕೇಶ್ ಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವೆಚ್ಚ ಅಲ್ಲ, ಹೂಡಿಕೆ

‘ಬಡವರ ಉದ್ಧಾರಕ್ಕೆ ಒಂದು ಸಕಾರಣವನ್ನು ಹುಡುಕಿದರೆ ಸಾಕು. ಅದಕ್ಕಾಗಿ ಆಡಳಿತದಲ್ಲಿ ನಿರ್ಣಯ ಮಾಡುವ ಹಂತಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲಾಗುತ್ತದೆ. ಹಲವು ಹಂತಗಳನ್ನು ತೆಗೆಯಲಾಗುತ್ತಿದೆ. ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಗೆ ಒಂದು ಆಯಾಮ ಕೊಡಬೇಕು. ಎಲ್ಲ ವಿಷಯಗಳು ತುರ್ತಾಗಿ ಆಗಬೇಕೆಂದು ಆದೇಶಿಸಬೇಕೆಂದು ಸಚಿವರಿಗೆ ತಿಳಿಸಿದ್ದೇನೆ. ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳು ತಲುಪಿದರೆ ಬದುಕಿನಲ್ಲಿ ಬದಲಾವಣೆ ತರಬಹುದು. ಈ ಇಲಾಖೆಯ ಕಾರ್ಯಕ್ರಮಗಳು ವೆಚ್ಚ ಅಲ್ಲ, ಮಾನವ ಸಂಪನ್ಮೂಲಗಳಲ್ಲಿ ಬಂಡವಾಳ ಹೂಡಿಕೆ ಎಂದು ತಿಳಿಸಿದ್ದೇನೆ'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News