ಉಪ್ಪಿನಂಗಡಿ: ಹೊಟೇಲ್‌ನಲ್ಲಿ ವ್ಯಕ್ತಿಯಿಂದ ದಾಂಧಲೆ

Update: 2022-05-02 17:47 GMT

ಉಪ್ಪಿನಂಗಡಿ : ವ್ಯಕ್ತಿಯೋರ್ವ ಹೊಟೇಲೊಂದರಲ್ಲಿ ಊಟ ಮಾಡುತ್ತಿದ್ದ ಮಹಿಳಾ ಗ್ರಾಹಕಿಯ ಮೈ ಮೇಲೆ ಕೈ ಹಾಕಿ ಚುಡಾಯಿಸಿದ್ದಲ್ಲದೆ, ಪ್ರಶ್ನಿಸಿದ ಹೊಟೇಲ್ ಮಾಲಕ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ಸೋಮವಾರ ನಡೆದಿರುವುದು ವರದಿಯಾಗಿದೆ.

ಇಲ್ಲಿನ ಬಸ್ ನಿಲ್ದಾಣದ ಪರಿಸರದಲ್ಲಿನ ಹೊಟೇಲ್‌ನಲ್ಲಿ ಈ ಘಟನೆ ಸಂಭವಿಸಿದ್ದು, ವೇಣೂರು ಪರಿಸರದ ನಿವಾಸಿ ಪ್ರಶಾಂತ್ ದಾಂಧಲೆಗೈದ ಆರೋಪಿ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ.

ಮಧ್ಯಾಹ್ನದ ವೇಳೆ  ಹೊಟೇಲಿಗೆ ಬಂದ ಆರೋಪಿ ಊಟಕ್ಕೆ ಆರ್ಡರ್ ಕೊಟ್ಟು ಸಮೀಪದ ಕುರ್ಚಿಯಲ್ಲಿ ಕುಳಿತಿದ್ದ ಮಹಿಳಾ ಗ್ರಾಹಕಿಗೆ ಚುಡಾಯಿಸಿದನೆನ್ನಲಾಗಿದೆ. ಈ ಬಗ್ಗೆ ಮಹಿಳೆ ಹೊಟೇಲ್ ಮಾಲಕರಲ್ಲಿ  ದೂರಿಕೊಂಡಾಗ ಮಧ್ಯ ಪ್ರವೇಶಿಸಿದ ಮಾಲಕರು ಆತನನ್ನು ಹೊಟೇಲಿನಿಂದ ಹೊರ ಕಳುಹಿಸಿದರು. ಇದರಿಂದ ಆಕ್ರೋಶಿತನಾದ ಆತ ಮತ್ತೆ ಹೊಟೇಲಿಗೆ ನುಗ್ಗಿ ಕಂಡ ಕಂಡವರಿಗೆ ಸೋಡಾ ಬಾಟ್ಲಿಯನ್ನು ಎಸೆಯಲಾರಂಭಿಸಿದ್ದಾನೆ. ಕುರ್ಚಿಯನ್ನು ಎತ್ತಿ ಎಸೆಯಲೆತ್ನಿಸಿದ ವೇಳೆ ನೆಲಕ್ಕೆ ಬಿದ್ದ ಆತನ ಮುಖಕ್ಕೆ ಗಾಯಗಳಾಗಿವೆ. ಆ ವೇಳೆ ಸ್ಥಳೀಯರು ಆತನನ್ನು ಹಿಡಿದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಹೊಟೇಲ್ ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News