ಬೆಳ್ಳಿ ತಟ್ಟೆಯಲ್ಲಿ ಹೋಳಿಗೆ ಊಟ ಸವಿದ ಕೇಂದ್ರ ಸಚಿವ ಅಮಿತ್ ಶಾ

Update: 2022-05-03 15:30 GMT

ಬೆಂಗಳೂರು, ಮೇ 3: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಅವರ ಗೌರವಾರ್ಥ ಆಯೋಜಿಸಿದ್ದ ಭೋಜನಕೂಟದಲ್ಲಿ ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರು ಬೆಳ್ಳಿ ತಟ್ಟೆಯಲ್ಲಿ ಭೋಜನದ ಸೇವಿಸಿದರು.

ಮಂಗಳವಾರ ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ರೇಸ್‍ವ್ಯೂ ಕಾಟೇಜ್‍ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏರ್ಪಡಿಸಿರುವ ಭೋಜನ ಕೂಟದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಶಿ ಒಂದೇ ಟೇಬಲ್‍ನಲ್ಲಿ ಕುಳಿತು ಭೋಜನ ಸೇವಿಸಿದ್ದು ವಿಶೇಷವಾಗಿತ್ತು.

ಭೋಜನ ಕೂಟದಲ್ಲಿ ಬಸವ ಜಯಂತಿ ಪ್ರಯುಕ್ತ ವಿಶೇಷ ಹೋಳಿಗೆ ಊಟ ಏರ್ಪಾಡು ಮಾಡಲಾಗಿತ್ತು. ದಕ್ಷಿಣ ಭಾರತ ಹಾಗೂ ಉತ್ತರ ಭಾರತ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಹಾಗೂ ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆಂದು ಗೊತ್ತಾಗಿದೆ.

ಸಿಎಂ ಭೋಜನ ಕೂಟದಲ್ಲಿ ಮುಖಂಡರಾದ ಜಿ.ಎಸ್.ಬಸವರಾಜ್, ಸದಾನಂದ ಗೌಡ, ಜಿ.ಎಂ.ಸಿದ್ದೇಶ್, ಶೋಭಾ ಕರಂದ್ಲಾಜೆ, ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಬಿ.ಸಿ.ನಾಗೇಶ್, ಡಾ.ಅಶ್ವತ್ಥ್ ನಾರಾಯಣ, ಶಾಸಕರಾದ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್, ರವಿ ಸುಬ್ರಹ್ಮಣ್ಯ, ರೇಣುಕಾಚಾರ್ಯ, ಕುಮಾರ್ ಬಂಗಾರಪ್ಪ, ರವಿಕುಮಾರ್, ವಿಶ್ವನಾಥ್, ಸಿ.ಪಿ.ಯೋಗೇಶ್ವರ್ ಸೇರಿದಂತೆ ಐವತ್ತಕ್ಕೂ ಹೆಚ್ಚು ನಾಯಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News