ಹರ್ಯಾಣ: ನಾಲ್ವರು ಶಂಕಿತ ಉಗ್ರರ ಬಂಧನ, ಸ್ಫೋಟಕಗಳ ವಶ
ಚಂಡೀಗಢ: ನಾಲ್ವರು ಶಂಕಿತ ಖಾಲಿಸ್ತಾನಿ ಭಯೋತ್ಪಾದಕರನ್ನು ಹರ್ಯಾಣದ ಟೋಲ್ ಪ್ಲಾಝಾದಲ್ಲಿ ಬಂಧಿಸಲಾಗಿದ್ದು, ಅವರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆಂದು NDTV ವರದಿ ಮಾಡಿದೆ.
ಪ್ರಮುಖ ಆರೋಪಿ ಗುರ್ಪ್ರೀತ್ ಈ ಹಿಂದೆ ಜೈಲಿನಲ್ಲಿದ್ದು, ಅಲ್ಲಿ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ರಾಜಬೀರ್ನನ್ನು ಭೇಟಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬಂಧಿತರಾಗಿರುವ ಗುರ್ಪ್ರೀತ್ ಹಾಗೂ ಇತರ ಮೂವರು ಸ್ಫೋಟಕಗಳ ಸರಕುಗಳನ್ನು ಭಾರತದಾದ್ಯಂತ ತಲುಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ನಾಲ್ವರು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಅಥವಾ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಳಿ ಬಣ್ಣದ ಟೊಯೊಟಾ ಇನ್ನೋವಾ ಎಸ್ಯುವಿಯಲ್ಲಿ ದಿಲ್ಲಿಗೆ ತೆರಳುತ್ತಿದ್ದಾಗ ಕರ್ನಾಲ್ ನ ಬಸ್ತಾರಾ ಟೋಲ್ ಪ್ಲಾಝಾದಲ್ಲಿ ಮುಂಜಾನೆ 4 ಗಂಟೆಗೆ ನಾಲ್ವರನ್ನು ಬಂಧಿಸಲಾಯಿತು. ಇತರ ಮೂವರು ಶಂಕಿತರನ್ನು ಪಂಜಾಬ್ ನಿವಾಸಿಗಳಾದ ಭೂಪೇಂದ್ರ, ಅಮನದೀಪ್ ಹಾಗೂ ಪರ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.