ಮನಸ್ಸುಗಳ ಸಾಮರಸ್ಯ ಇಂದಿನ ಅಗತ್ಯ

Update: 2022-05-09 08:11 GMT

ಸದ್ಯ ತುರ್ತಾಗಿ ಮನಸ್ಸು ಬೆಸೆಯುವ, ಮನಸ್ಸು ಕಟ್ಟುವ, ತಪ್ಪು ಕಲ್ಪನೆಯನ್ನು ನಿವಾರಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಾಗಿದೆ. ಪ್ರತಿ ಮನೆ ಮನೆಗೆ ಹೋಗಿ ಮನದ ಬಾಗಿಲನ್ನು ತಟ್ಟಿ ಅರಿವಿನ ಬೆಳಕು ಚೆಲ್ಲಬೇಕಿದೆ. ಮನುಷ್ಯತ್ವದ ಅಂತರ್ಜಲ ಬತ್ತಿ ಹೋಗದಂತೆ ನೋಡಿಕೊಳ್ಳಬೇಕಿದೆ. ಇದು ಒಂದು ದಿನ, ವಾರ, ತಿಂಗಳಿನ ಕೆಲಸವಲ್ಲ. ಮುಂದಿನ ಮೂವತ್ತು ವರ್ಷಗಳ ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ಬರುವ ಪೀಳಿಗೆ ನೆಮ್ಮದಿಯಿಂದ ಉಸಿರಾಡಬಹುದು.


ಜನರನ್ನು ಧರ್ಮ, ಜಾತಿಯ ಹೆಸರಿನಲ್ಲಿ ವಿಭಜಿಸುವ ಎಲ್ಲರನ್ನೂ ವಿರೋಧಿಸಬೇಕು. ಆದರೆ, ನಮ್ಮ ಪ್ರಗತಿಪರರ ವಿರೋಧ ಅನೇಕ ಬಾರಿ ಗೊಂದಲಮಯವಾಗುತ್ತದೆ. ಫ್ಯಾಶಿಸ್ಟ್ ಶಕ್ತಿಗಳನ್ನು ವಿರೋಧಿಸಬೇಕಾದ ನಾವು ಅನೇಕ ಬಾರಿ ಬ್ರಾಹ್ಮಣ ವಿರೋಧಕ್ಕೆ ನಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತೇವೆ. ಧಾರವಾಡದ ಧನಂಜಯ ಕುಲಕರ್ಣಿ ಹವ್ಯಾಸಿ ರಂಗಕರ್ಮಿ. ಅವರು ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಮನೆಯೊಂದನ್ನು ಖರೀದಿಸಿ ಬಾಡಿಗೆಗೆ ಕೊಟ್ಟಿದ್ದಾರೆ. ಬಾಡಿಗೆದಾರರು ಅತ್ಯಂತ ಸಂಭಾವಿತರು. ಅವರ ಮನೆಯಲ್ಲಿ ಇರುವುದು ಗಂಡ, ಹೆಂಡತಿ ಮತ್ತು ಮಗಳು. ಯಾರ ತಂಟೆಗೆ ಹೋದವರಲ್ಲ. ಹೆಚ್ಚು ಮಾತು ಕೂಡ ಇಲ್ಲ. ತಮ್ಮ ಪಾಡಿಗೆ ತಾವಿರುವವರು. ಇಂಥ ಸಂಪನ್ನರ ನೆಮ್ಮದಿಯ ಬದುಕಿಗೆ ಅಡ್ಡಿಯಾಗಿದ್ದು ಅವರು ಅರ್ಜಿ ಹಾಕಿಕೊಳ್ಳದೇ ಜನಿಸಿದ ಧರ್ಮ. ಅವರು ಅನ್ಯ ಧರ್ಮದವರು ಎಂಬ ಕಾರಣಕ್ಕಾಗಿ ಅಪಾರ್ಟ್‌ಮೆಂಟ್‌ನಲ್ಲಿದ್ದ ಇತರರು ಅವರಿಗೆ ಕಿರಿ ಕಿರಿ ಕೊಡಲಾರಂಭಿಸಿದರು. ಮನೆ ಖಾಲಿ ಮಾಡಿಸಲು ಮಾಲಕರಿಗೆ ಹೇಳಿದರು ಅವರು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಮನೆಯಲ್ಲಿ ದೆವ್ವವಿದೆ ಎಂದು ಗಾಳಿ ಸುದ್ದಿ ಹರಡಿದರು. ಅದಕ್ಕೆ ಬಾಡಿಗೆದಾರರು ಸೊಪ್ಪು ಹಾಕಲಿಲ್ಲ.

ಮನೆ ಖಾಲಿ ಮಾಡಲು ಮುಸ್ಲಿಮ್ ಕುಟುಂಬ ನಿರಾಕರಿಸಿತು. ಮಾಲಕ ಧನಂಜಯ ಕುಲಕರ್ಣಿ ತಮ್ಮ ಬಾಡಿಗೆದಾರರ ಪರವಾಗಿ ನಿಂತರು. ಇದರಿಂದ ಹತಾಶರಾದ ಪುಂಡ ಪೋಕರಿಗಳು ನಾನಾ ವಿಧದ ಕಿರಿ ಕಿರಿ ಕೊಡಲಾರಂಭಿಸಿದರು. ಮುಸ್ಲಿಮ್ ಗಂಡ, ಹೆಂಡತಿ ಮನೆಯಲ್ಲಿ ಇಲ್ಲದಾಗ, ಹರೆಯದ ಮಗಳು ಒಬ್ಬಳೇ ಮನೆಯಲ್ಲಿ ಇದ್ದಾಗ ಬಂದು ಬಾಗಿಲು ಬಡಿಯತೊಡಗಿದರು. ಇದರಿಂದ ಕಂಗಾಲಾದ, ಹೆದರಿದ ಮುಸ್ಲಿಮ್ ಕುಟುಂಬ ಮನೆ ಖಾಲಿ ಮಾಡಿ ಬೇರೆ ಕಡೆ ಹೋಯಿತು. ಇದನ್ನು ಧನಂಜಯ ಕುಲಕರ್ಣಿ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ. ಬಾಡಿಗೆ ಕೊಟ್ಟ ಧನಂಜಯ ಕುಲಕರ್ಣಿ ಅರ್ಜಿ ಹಾಕದೇ ಜನಿಸಿದ್ದು ಬ್ರಾಹ್ಮಣ ಜಾತಿಯಲ್ಲಿ. ಬಾಡಿಗೆಗೆ ಇರುವವರು ಮುಸಲ್ಮಾನ ಕುಟುಂಬ. ಕಾಟ ಕೊಡುವವರು ಕರಾವಳಿ ಭಾಗದ ಬಹುತೇಕ ಶೂದ್ರ ಸಮುದಾಯಗಳ ಕುಟುಂಬಸ್ಥರು.

ಎಲ್ಲ ಜಾತಿ ಮತಗಳ ಜನ ಒಂದೇ ಕಡೆ ಸೌಹಾರ್ದಯುತವಾಗಿ ಬದುಕಲಿ ಎಂದು ಸ್ವಾತಂತ್ರಾ ನಂತರ ಸರಕಾರ ಗೃಹ ನಿರ್ಮಾಣ ಮಂಡಲಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಎಲ್ಲ ಸಮುದಾಯಗಳ ಜನರಿಗೆ ಆದ್ಯತೆಯ ಮೇಲೆ ಮನೆ ಮತ್ತು ನಿವೇಶನಗಳನ್ನು ಹಂಚಿಕೆ ಮಾಡುತ್ತ ಬಂದಿದೆ.ಆದರೆ, ದೇಶದಲ್ಲಿ ಕೋಮುವಾದಿ ಮತ್ತು ಮನುವಾದಿ ಶಕ್ತಿಗಳು ಪ್ರಬಲವಾದ ನಂತರ ಜಾತಿ ಮತದ ಹೆಸರಿನಲ್ಲಿ ಖಾಸಗಿ ಬಡಾವಣೆಗಳು ತಲೆ ಎತ್ತುತ್ತಿವೆ.

ಇದು ಒಂದು ಉದಾಹರಣೆ ಮಾತ್ರ. ದಲಿತರು ಮತ್ತು ಅಲ್ಪಸಂಖ್ಯಾತರಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ನಗರದಲ್ಲಿ ಉತ್ತಮ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಸಿಗುವುದು ಸುಲಭವಲ್ಲ.ಅದರಲ್ಲೂ ಮುಸಲ್ಮಾನರನ್ನಂತೂ ಭಯೋತ್ಪಾದಕರಂತೆ ಕಾಣಲಾಗುತ್ತದೆ.

 ಮುಸಲ್ಮಾನರನ್ನು ಪ್ರತ್ಯೇಕಿಸಿ ಟಾರ್ಗೆಟ್ ಮಾಡುವುದು ಗುಜರಾತ್ ಮಾದರಿ. ಅಲ್ಲಿ ಮುಸ್ಲಿಮರು ವಾಸಿಸುವ ಪ್ರದೇಶಗಳನ್ನು ಪಾಕಿಸ್ತಾನ ಎಂದು ಕರೆದು ಉಳಿದವರು ಅಲ್ಲಿ ಹೋಗದಂತೆ ಅಘೋಷಿತ ನಿರ್ಬಂಧ ಹೇರ ಲಾಗಿದೆ. ಈಗ ಕರ್ನಾಟಕ ಎರಡನೇ ಗುಜರಾತ್ ಆಗುವ ದಾರಿಯಲ್ಲಿ ಇದೆ. ನಗರ ಪ್ರದೇಶ ಮಾತ್ರವಲ್ಲ ಹಳ್ಳಿಗಳಲ್ಲಿ ಕೂಡ ಮನಸ್ಸುಗಳನ್ನು ಅತ್ಯಂತ ವ್ಯವಸ್ಥಿತವಾಗಿ ಒಡೆಯಲಾಗಿದೆ. ಅದರಲ್ಲೂ ಎಳೆಯ ಮಕ್ಕಳ ಮೆದುಳಿಗೆ ದ್ವೇಷದ ವಿಷ ಮೆತ್ತಲಾಗಿದೆ.ಇದು ಒಂದು ದಿನದಲ್ಲಿ ಆಗಿರುವ ಬೆಳವಣಿಗೆಯಲ್ಲ. ಕಳೆದ ಏಳು ದಶಕಗಳಿಂದ ಅದರಲ್ಲೂ ತೊಂಬತ್ತರ ದಶಕದಿಂದ ಪ್ರತಿ ನಿತ್ಯ ತಲೆಯಲ್ಲಿ ವಿಷ ತುಂಬಿದ ಪರಿಣಾಮವಿದು.

ನಮ್ಮ ಪ್ರಾಥಮಿಕ ಶಾಲೆಗಳು ಮತ್ತು ಮಾಧ್ಯಮಿಕ ಶಾಲೆಗಳ ಬಹುತೇಕ ಶಿಕ್ಷಕರು ಮಕ್ಕಳ ಮೆದುಳಿಗೆ ನಿತ್ಯವೂ ಜನಾಂಗ ದ್ವೇಷದ ವಿಷ ತುಂಬುವ ಕೆಲಸವನ್ನು ಅತ್ಯಂತ ಯೋಜನಾಬದ್ಧವಾಗಿ ಮಾಡುತ್ತಾರೆ. ಬಹುತೇಕ ಮನೆ ಗಳಲ್ಲೂ ಅದೇ ಉಪದೇಶ. ಮಕ್ಕಳು ಅದನ್ನೇ ತಲೆಯಲ್ಲಿ ತುಂಬಿ ಕೊಂಡು ಗಾಂಧಿ ವಿಲನ್, ಸಾಬರನ್ನು ಕೊಲ್ಲಬೇಕು ಎಂಬಂಥ ಮಾತನ್ನು ಆಡುತ್ತಾರೆ .

ಹತ್ತು ವರ್ಷದ ಬಾಲಕನಿಂದ ಇಂಥ ಮಾತನ್ನು ಕೇಳಿ ಇತ್ತೀಚೆಗೆ ನನಗೆ ದಿಗಿಲುಂಟಾಯಿತು. ನಮ್ಮ ಸಭೆ, ಸಮಾವೇಶ, ಗೋಷ್ಠಿಗಳ ಸಂದೇಶಗಳು ನಮಗೆ ಖುಷಿ ಕೊಡುತ್ತವೆ. ಕೆಲಸ ಮಾಡಿದೆವೆಂಬ ತೃಪ್ತಿ ಕೊಡುತ್ತವೆ.
ಆದರೆ ನಮ್ಮ ಮಾತುಗಳು ಯಾರಿಗೆ ತಲುಪಬೇಕೋ ಅವರಿಗೆ ತಲುಪಿರು ವುದಿಲ್ಲ. ಇದು ಕಟುವಾದರೂ ಸತ್ಯ. ಈ ಮನಸ್ಸು ಒಡೆಯುವುದನ್ನು ತಡೆಯಬೇಕಾದ ನಾವು ಅಂದರೆ ಜಾತ್ಯತೀತರು ಮತ್ತು ಪ್ರಗತಿಪರರು ವರ್ಷವಿಡೀ ಬೇರೆ ಕೆಲಸಗಳಲ್ಲಿ ಮುಳುಗಿ ಪರಿಸ್ಥಿತಿ ಕೈ ಮೀರಿದಾಗ ಒಂದು ದಿನ ಕಾಟಾಚಾರಕ್ಕೆ ಸೌಹಾರ್ದ ಸಮಾವೇಶ ಮಾಡಿ, ಶಾಂತಿ ಯಾತ್ರೆ ಮಾಡಿ ಮಠಾಧೀಶರನ್ನು ವೇದಿಕೆಗೆ ಕರೆ ತಂದು ಅವರಿಂದ ಭಾಷಣ ಮಾಡಿಸುತ್ತೇವೆ.ಈ ಮಠಾಧೀಶರು ನಮ್ಮ ಬಳಿ ಬಂದು ನಮ್ಮಂತೆ ಮಾತಾಡಿ ನಂತರ ಕೋಮುವಾದಿ ಗಳ ವೇದಿಕೆಗಳಿಗೆ ಹೋಗಿ ಅವರಂತೆ ಮಾತನಾಡುತ್ತಾರೆ.

ಕೋವಿಡ್‌ನಂಥ ಸಾಂಕ್ರಾಮಿಕ ಇಡೀ ವಿಶ್ವವನ್ನು ಆತಂಕದ ಮಡಿಲಿಗೆ ಚೆಲ್ಲಿದಾಗಲೂ ಕೋಮುವಾದಿ ಮನಸ್ಸುಗಳು ಬದಲಾಗಲಿಲ್ಲ. ಆಗ ತಬ್ಲೀಗಿನ ಕತೆ ಕಟ್ಟಿದರು. ಕೊರೋನ ಹರಡಲು ಮುಸಲ್ಮಾನರೇ ಕಾರಣ. ಅವರು ಮಾರಾಟ ಮಾಡುವ ತರಕಾರಿ, ಹಣ್ಣುಗಳಲ್ಲಿ ಉಗುಳು ಹಾಕುತ್ತಾರೆ. ರಾಸಾಯನಿಕ ಹಾಕುತ್ತಾರೆ ಎಂದು ವ್ಯವಸ್ಥಿತ ಪ್ರಚಾರ ಮಾಡಿದರೂ ಕೆಲವು ಕಡೆ ಜನರು ಅದನ್ನು ನಂಬಿದರು. ಆದರೆ ಕೋವಿಡ್ ಉಲ್ಬಣಗೊಂಡು ಸಾವುಗಳು ಸಂಭವಿಸತೊಡಗಿದಾಗ ಅನೇಕ ಬ್ರಾಹ್ಮಣರ ಮನೆಗಳಲ್ಲೂ ತಮ್ಮ ಸಂಬಂಧಿಕರ ಕಳೇಬರ ಮುಟ್ಟಲು ಹೆದರಿದರು .ಆಗ ಮುಸ್ಲಿಮ್ ಯುವಕರೇ ವೈದಿಕ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಿದರು.ಆಗಲೂ ಕೋಮು ವ್ಯಾಧಿಗಳ ಮನಸ್ಸು ಬದಲಾಗಲಿಲ್ಲ.ನಂಜು ಕಡಿಮೆಯಾಗಲಿಲ್ಲ.

ಜನರನ್ನು ಧರ್ಮ, ಜಾತಿಯ ಹೆಸರಿನಲ್ಲಿ ವಿಭಜಿಸುವ ಎಲ್ಲರನ್ನೂ ವಿರೋಧಿಸಬೇಕು. ಆದರೆ, ನಮ್ಮ ಪ್ರಗತಿಪರರ ವಿರೋಧ ಅನೇಕ ಬಾರಿ ಗೊಂದಲಮಯವಾಗುತ್ತದೆ. ಫ್ಯಾಶಿಸ್ಟ್ ಶಕ್ತಿಗಳನ್ನು ವಿರೋಧಿಸಬೇಕಾದ ನಾವು ಅನೇಕ ಬಾರಿ ಬ್ರಾಹ್ಮಣ ವಿರೋಧಕ್ಕೆ ನಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತೇವೆ. ಬಿಜೆಪಿ ಎಂಬ ಕೋಮುವಾದಿ, ನಾಝಿವಾದಿ ಪಕ್ಷ ಬರೀ ಶೇ.2ರಷ್ಟಿರುವ ಬ್ರಾಹ್ಮಣರ ಮತಗಳಿಂದ ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ? ಬಾಯಿಯಲ್ಲಿ ಬಸವಣ್ಣನವರ ಸ್ಮರಣೆ ಮಾಡುವ ಮಠಾಧೀಶರು, ಬಹುದೊಡ್ಡ ಶೂದ್ರ ಸಮುದಾಯಗಳು ಬಿಜೆಪಿಗೆ ಓಟ್ ಬ್ಯಾಂಕ್ ಆಗಿವೆ ಎಂಬ ಕಟುವಾದ ಕಹಿಸತ್ಯವನ್ನು ನಾವು ಒಪ್ಪಿಕೊಳ್ಳಬೇಕು.

ಹಿಂದೆ ಲಂಕೇಶ್, ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ್, ಚಂಪಾ, ಜಿ.ಕೆ.ಗೋವಿಂದರಾವ್ ಅವರಂಥ ಘಟಾನುಘಟಿಗಳಿದ್ದರು. ಏನೇ ಘಟಿಸಿದರೂ ಇವರೆಲ್ಲರೂ ಟೌನ್ ಹಾಲ್ ಮುಂದೆ ನವ ತರುಣರಂತೆ ಪ್ರತಿಭಟನೆ ಗೆ ಬರುತ್ತಿದ್ದರು.ಈಗ ಅವರೂ ಇಲ್ಲ. ನಮ್ಮ ಅಸ್ತ್ರಗಳೆಲ್ಲ ಸವೆದು ಹೋಗಿವೆ. ಹೊಸ ದಾರಿಯ ಹುಡುಕಾಟ ಇಂದಿನ ಅನಿವಾರ್ಯತೆ ಯಾಗಿದೆ.

ನಾನು ನನ್ನ ಹನ್ನೆರಡನೇ ವಯಸ್ಸಿನಲ್ಲೇ ಇದರ ಅಪಾಯ ಅರಿತು ಅಂದಿನಿಂದ ಬರೆಯುತ್ತ ,ಮಾತಾಡುತ್ತ ಬಂದಿದ್ದೇನೆ. ಅನೇಕರು ಹೇಳುತ್ತಾರೆ. ನೀವು ಕೋಮುವಾದದ ಬಗೆಗೇ ಬರೆಯುತ್ತೀರಿ ಎಂದು. ಆದರೂ ಈ ದ್ವೇಷದ ಹುಚ್ಚು ಹೊಳೆಯನ್ನು ತಡೆಯಲು ಆಗಲೇ ಇಲ್ಲ.

ಮುಂಚೆ ಪರಸ್ಪರ ಬೆಸೆದುಕೊಂಡಿದ್ದ ನಮ್ಮ ಸಾಮಾಜಿಕ ಬದುಕು ಈಗ ಸಂಪೂರ್ಣ ಹದಗೆಟ್ಟಿದೆ. ತುಂಬಾ ತಾಳ್ಮೆಯಿಂದ ಕಾಯ್ದು ಹೊಸ ಪೀಳಿಗೆಯ ಹುಡುಗರ ಮೆದುಳಿಗೆ ವಿಷ ಲೇಪನ ಮಾಡುವಲ್ಲಿ ಫ್ಯಾಶಿಸ್ಟ್ ಶಕ್ತಿಗಳು ಯಶಸ್ವಿಯಾಗಿವೆ. ಸಭೆ, ಸಮಾವೇಶಗಳೆಂಬ ನಮ್ಮ ಹಳೆಯ ತಂತ್ರದ ಬದಲಾಗಿ ಹೊಸ ತಂತ್ರಗಳ ಮೂಲಕ ಹೊಸ ದಾರಿ ಕಂಡು ಕೊಳ್ಳಬೇಕಿದೆ. ಪ್ರತಿ ನಿತ್ಯ ಜನಸಾಮಾನ್ಯರ ಜೊತೆ ಬೆರೆತು ಅವರಲ್ಲಿ ಮಾನಸಿಕ ಪರಿವರ್ತನೆ ಸಾಧ್ಯವೇ ಎಂಬ ಬಗ್ಗೆ ಯೋಚಿಸಬೇಕಿದೆ.

ನಮ್ಮ ವೇದಿಕೆಗೆ ಬಂದು ಕಾಟಾಚಾರಕ್ಕೆ ಸೌಹಾರ್ದದ ಮಾತನ್ನಾಡುವ ಮಠಾಧೀಶರು ಮತ್ತು ಸ್ವಾಮಿಗಳಿಗಿಂತ ಸಾವಿರ ಪಟ್ಟು ಹೆಚ್ಚು ಸ್ವಾಮಿಗಳು ಸಂಘ ಪರಿವಾರದಲ್ಲಿ ಇದ್ದಾರೆ. ಡಿಸೆಂಬರ್‌ನಲ್ಲಿ ಹರಿದ್ವಾರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಘಾಝಿಯಾಬಾದ್‌ನ ದೇವಾಲಯವೊಂದರ ಮುಖ್ಯ ಅರ್ಚಕ ನರಸಿಂಹಾನಂದ ಸರಸ್ವತಿ ಎಂಬಾತ ಮುಸಲ್ಮಾನರ ಸಾಮೂಹಿಕ ಹತ್ಯೆಗೆ ಬಹಿರಂಗ ವೇದಿಕೆಯಿಂದ ಕರೆ ಕೊಟ್ಟ. ಪೊಲೀಸರು ತಕ್ಷಣ ಇವನನ್ನು ಬಂಧಿಸಲಿಲ್ಲ. ಕೊನೆಗೆ ಅನಿವಾರ್ಯವಾಗಿ ಬಂಧಿಸಿದರು.

ಆದರೆ, ಜಾಮೀನು ಪಡೆದು ಹೊರಗೆ ಬಂದ ಈತ ಹೊಡಿ, ಬಡಿ, ಕಡಿ ಎಂದು ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಲೇ ಇದ್ದಾನೆ. ಈತ ಒಬ್ಬನೇ ಅಲ್ಲ. ಇಂಥ ಅನೇಕರಿದ್ದಾರೆ. ಕರ್ನಾಟಕದಲ್ಲೂ ಇಂಥವರ ಸಂಖ್ಯೆ ಸಾಕಷ್ಟಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದೆ. ಇಂಥ ಭಾಷಣಗಳನ್ನು ತಡೆಯಲು ಏನು ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಸರಕಾರಗಳನ್ನು ಕೇಳಿದೆ.

ಸದ್ಯ ತುರ್ತಾಗಿ ಮನಸ್ಸು ಬೆಸೆಯುವ, ಮನಸ್ಸು ಕಟ್ಟುವ, ತಪ್ಪು ಕಲ್ಪನೆಯನ್ನು ನಿವಾರಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಾಗಿದೆ. ಪ್ರತಿ ಮನೆ ಮನೆಗೆ ಹೋಗಿ ಮನದ ಬಾಗಿಲನ್ನು ತಟ್ಟಿ ಅರಿವಿನ ಬೆಳಕು ಚೆಲ್ಲಬೇಕಿದೆ. ಮನುಷ್ಯತ್ವದ ಅಂತರ್ಜಲ ಬತ್ತಿ ಹೋಗದಂತೆ ನೋಡಿಕೊಳ್ಳಬೇಕಿದೆ. ಇದು ಒಂದು ದಿನ, ವಾರ, ತಿಂಗಳಿನ ಕೆಲಸವಲ್ಲ. ಮುಂದಿನ ಮೂವತ್ತು ವರ್ಷಗಳ ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ಬರುವ ಪೀಳಿಗೆ ನೆಮ್ಮದಿಯಿಂದ ಉಸಿರಾಡಬಹುದು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News