×
Ad

''ಬೆಳಗ್ಗೆಯೇ ಸ್ಪಷ್ಟವಾಗಿ ಹೇಳಿದ್ದರೂ ನೀವು ಏನೇನೋ ಬರೀತೀರಿ ಅಲ್ವಾ?''

Update: 2022-05-09 19:25 IST

ಬೆಂಗಳೂರು,ಮೇ 9: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದುಷ್ಕೃತ್ಯ ಎಸಗಿ ಇನ್ನೊಬ್ಬರ ಮೇಲೆ ಆರೋಪ ಬರುವಂತೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಲು ಯತ್ನಿಸಿದ ಕೆಲವೊಂದು ಕನ್ನಡದ ನ್ಯೂಸ್ ಚಾನೆಲ್ ಗಳ ಪ್ರತಿನಿಧಿಗಳನ್ನು ನಗರದ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್​​ ಗುಳೇದ್ ತರಾಟೆಗೆ ತೆಗೆದುಕೊಂಡಿದ್ದಾರೆ. 

ಫಯಾಝ್ ಉಲ್ಲಾ ಎಂಬುವರು 35 ಲಕ್ಷಕ್ಕೆ ಮನೆ ಮಾರಿದ್ದ, ಅಝೀಮುಲ್ಲಾ ಮನೆ ಮಾರಾಟ ಮಾಡಿಸಿದ್ದ. ಬಳಿಕ ಫಯಾಝ್ ಉಲ್ಲಾ 40 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ, ಹೀಗಾಗಿ ಇಬ್ಬರ ನಡುವೆ ದ್ವೇಷ ಸೃಷ್ಟಿಯಾಗಿತ್ತು. ಆ ನಂತರ ಫಯಾಝ್ ಉಲ್ಲಾ ಸಂಚು ಮಾಡಿ ಅಝೀಮುಲ್ಲಾನನ್ನು ಗಲಭೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಸೈಯದ್ ಅಸ್ಗರ್, ಫಯಾಜ್ ಉಲ್ಲಾ ಮತ್ತು ಮುನಾವರ್ ಎಂಬವರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದೀಗ ಈ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚುವ ಸುದ್ದಿಗಳು ಕೆಲವೊಂದು ಕನ್ನಡದ ನ್ಯೂಸ್ ಚಾನೆಲ್ ಗಳಲ್ಲಿ  ಪ್ರಸಾರಗೊಂಡಿದ್ದು, ಈ ಬಗ್ಗೆ ಡಿಸಿಪಿ ಭೀಮಾಶಂಕರ್​​ ಗುಳೇದ್ ಅವರು ಸುದ್ದಿಗೋಷ್ಠಿ ವೇಳೆ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

'ಫಯಾಝ್ ಉಲ್ಲಾ ಸೈಯದ್ ಅಸ್ಗರ್ ಎಂಬಾತನಿಗೆ ದುಡ್ಡು ಕೊಟ್ಟು ಮಾಡಿರು ಕೃತ್ಯ ಇದು. ಪಟ್ರೋಲ್ ಬಾಂಬ್ ರೆಡಿ ಮಾಡಿಟ್ಟಿರುವುದು ನಿಜ ಆದರೆ ಅದನ್ನೇ ಇನ್ನೊಬ್ಬನ ವಿರುದ್ಧ ಗೂಬೆ ಕೂರಿಸುವ ಪ್ಲಾನ್ ಇತ್ತು.  ಆದರೆ ಕೊಲೆಗೆ ಸಂಚು ಮಾಡಿದ್ದಾರೆ ಮತ್ತು ಯಾವುದೋ ದೇವಸ್ತಾನವನ್ನು ಧ್ವಂಸ ಮಾಡಲು ಸಂಚು ಮಾಡಿದ್ದಾರೆ ಎಂಬುದು ಸುಳ್ಳು ಸುದ್ದಿ. ನಾನು ಬೆಳಗ್ಗೆಯೇ ಸ್ಪಷ್ಟವಾಗಿ ಹೇಳಿದ್ದರೂ ನೀವು ಏನೇನೋ ಬರೀತೀರಿ ಅಲ್ವಾ? ಒಬ್ಬ ಮುಸ್ಲಿಮ್ ವ್ಯಕ್ತಿ ಮಾಡಿದ್ದಾನೆ ಎಂದು ಬರೆದರೆ ಸಮಾಜದಲ್ಲಿ ಅಶಾಂತಿಗೆ ಕಾರಣ ಆಗುವುದಿಲ್ವಾ? ಬಾಯಿಗೆ ಬಂದಂತೆ ಬರೀತೀರಿ ಅಲ್ವಾ ನೀವು' ಎಂದು ಮಾಧ್ಯಮ ಪ್ರತಿನಿಧಿಗಳನ್ನು  ತರಾಟೆಗೆ ತೆಗೆದುಕೊಂಡಿದ್ದಾರೆ. 

ಆರೋಪಿಗಳ ಬಂಧನ ನಡೆಯುತ್ತಿದ್ದಂತೆ ಪಬ್ಲಿಕ್ ಟಿವಿ ತನ್ನ ಒಂದು ವಿಡಿಯೊ ಸುದ್ದಿಯಲ್ಲಿ, “ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಸಂಚು..!,  ಹನುಮಾನ್ ಚಾಲಿಸಾಗೆ ಪ್ರತಿಯಾಗಿ ಪೆಟ್ರೋಲ್ ಬಾಂಬ್. ಹಿಂದೂ ದೇವಸ್ಥಾನಗಳ ಮೇಲೆ ಪೆಟ್ರೋಲ್ ಬಾಂಬ್ ಹುನ್ನಾರ. ಹತ್ತು ಬಿಯರ್‌ ಬಾಟಲಿಗಳಲ್ಲಿ ಪೆಟ್ರೋಲ್ ದಾಳಿಗೆ ಪ್ಲಾನ್ ಮಾಡಿದ್ದಾರೆ” ಎಂದು ಕಪೋಲಕಲ್ಪಿತ ಸುಳ್ಳು ವರದಿ ಮಾಡಿದೆ.

ಕನ್ನಡ ಮತ್ತೊಂದು ಸುದ್ದಿ ಮಾಧ್ಯಮ ಬಿಟಿವಿ ನ್ಯೂಸ್ ಕೂಡಾ ''ದೇವಾಲಯ ಟಾರ್ಗೆಟ್ ಮಾಡಿ ಹತ್ಯೆಗೆ ಸ್ಕೆಚ್...?" ಎಂದು ವರದಿ ಮಾಡಿತ್ತು. 

ಆಝಾನ್ ವಿರುದ್ಧ ಸೋಮವಾರ ಶ್ರೀ ರಾಮ ಸೇನೆ ಸೇರಿ ಸಂಘಪರಿವಾರದ ಕಾರ್ಯಕರ್ತರು ಭಜನೆ ಇತ್ಯಾದಿ ಅಭಿಯಾನಗಳು ನಡೆಸುತ್ತಿದ್ದು, ಈ ಮಧ್ಯೆ  ಕೆಲವೊಂದು ಮಾಧ್ಯಮಗಳಲ್ಲಿ ಬೆಳಗ್ಗೆಯಿಂದ ''ದೇವಾಲಯ ಟಾರ್ಗೆಟ್ ಮಾಡಿ ಹತ್ಯೆಗೆ ಸ್ಕೆಚ್?" ಹಾಗೂ ''ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದ ಮೂವರು ಅರೆಸ್ಟ್'' ಎಂಬ ಸುದ್ದಿ ಪ್ರಸಾರಗೊಂಡಿತ್ತು. ಇದೀಗ ಅಂಥ ಸುದ್ದಿ  ಸುಳ್ಳು ಎಂದು ಬೆಂಗಳೂರು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್​​ ಗುಳೇದ್ ಸ್ಪಷ್ಟನೆ ನೀಡಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News