ಮುಲ್ಕಿಯಲ್ಲಿ ಸರಣಿ ಅಪಘಾತ: ದ್ವಿಚಕ್ರ ವಾಹನ ಸವಾರ ಮೃತ್ಯು

Update: 2022-05-10 15:58 GMT

ಮುಲ್ಕಿ : ಸ್ಕೂಟರ್ ಮತ್ತು ಕಾರುಗಳ ಮಧ್ಯೆ‌‌ ಸರಣಿ ಅಪಘಾತ ನಡೆದು ಸ್ಕೂಟರ್ ‌ಸವಾರ ಸಾವನ್ನಪ್ಪಿರುವ ಘಟನೆ ರಾ.ಹೆದ್ದಾರಿ 66 ರ ಕಾರ್ನಾಡ್‌‌ ಬೈಪಾಸ್ ಬಳಿ‌ ಮಂಗಳವಾರ ನಡೆದಿದೆ

ಅಪಘಾತದಲ್ಲಿ ಮೃತ ಪಟ್ಟ ಸ್ಕೂಟರ್ ಸವಾರನನ್ನು ನಿಡ್ಡೋಡಿ ಮುಚ್ಚೂರು ಬಳಿಯ ನಿವಾಸಿ ಮೋಹನ್ ಗೌಡ (50) ಎಂದು ತಿಳಿದು ಬಂದಿದೆ. ಸಹಸವಾರ ಬಾಲಕ ಚರಣರಾಜ್ ಗಾಯಗೊಂಡಿದ್ದಾರೆ.

ಮೋಹನ್ ಗೌಡ‌ ಅವರು ಚಿತ್ರಾಪು ಶಾಂಭವಿ ನದಿಯಲ್ಲಿ ಮೀನು ಹಿಡಿದು ತನ್ನ ಸ್ಕೂಟರ್ ನಲ್ಲಿ ನಿಡ್ಡೋಡಿಯ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಈ ದುರ್ಘಟನೆ‌‌‌ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಈಕೊ ಕಾರು ಕಾರ್ನಾಡ್ ಬೈಪಾಸ್ ಬಳಿ ತಲುಪುತ್ತಿದ್ದಂತೆ ಏಕಾಏಕಿ ಚಿತ್ರಾಪು ಒಳ ರಸ್ತೆಯಿಂದ ಕಾರ್ನಾಡ್ ಒಳಪೇಟೆಗೆ ಹೆದ್ದಾರಿ ದಾಟುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ.‌

ಈ ಸಂದರ್ಭ ಕಾರು ಚಾಲಕ ಅಪಘಾತ ತಪ್ಪಿಸಲು ಯತ್ನಿಸಿದ್ದು, ಆದರೂ ನಿಯಂತ್ರಣ ಕಳೆದುಕೊಂಡು ಸ್ಕೂಟರ್ ಗೆ ಢಿಕ್ಕಿ ಹೊಡೆದು ಬಳಿಕ ಹೆದ್ದಾರಿ ಬದಿ ಹೈವೇ ಪ್ಯಾಟ್ರೋಲಿಂಗ್ ಮಾಡುತ್ತಿದ್ದ ನವಯುಗ ಸಂಸ್ಥೆಯ ವಾಹನಕ್ಕೆ ಢಿಕ್ಕಿ ಹೊಡೆಯಿತು ಎಂದು ತಿಳಿದು ಬಂದಿದೆ. ಈ ವೇಳೆ ಹೈವೇ ಪ್ಯಾಟ್ರೋಲಿಂಗ್ ಮಾಡುತ್ತಿದ್ದ ವಾಹನದಲ್ಲಿದ್ದ ನವಯುಗ ಸಂಸ್ಥೆಯ ನಾಲ್ವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದಿಂದಾಗಿ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಗಳೂರು ಉತ್ತರ ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News