ಆ್ಯಸಿಡ್ ದಾಳಿ ಪ್ರಕರಣ | ಇನ್ನೂ ಸಿಕ್ಕಿಲ್ಲ ಆರೋಪಿ ನಾಗೇಶ್ ಸುಳಿವು: ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದೇನು?
Update: 2022-05-11 11:48 GMT
ಬೆಂಗಳೂರು, ಮೇ 11: ಯುವತಿಯ ಮೇಲೆ ಆ್ಯಸಿಡ್ ದಾಳಿ ಪ್ರಕರಣ ಸಂಬಂಧ ಆರೋಪಿ ನಾಗೇಶ್ ಬಾಬು ಪತ್ತೆಗೆ ತನಿಖೆ ಮುಂದುವರೆಸಲಾಗಿದ್ದು, ಆತ ಎಲ್ಲೇ ಇದ್ದರೂ, ಸಿಕ್ಕಿ ಬೀಳುತ್ತಾನೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿ ನಾಗೇಶ್ ಯಾವುದೇ ಸುಳಿವು ಸಿಗದೆ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ನಮ್ಮ ತಂಡ ಅವಿರತ ಶ್ರಮಪಡುತ್ತಿದೆ. ಈತ ಯಾವುದೇ ಸಾಕ್ಷಿ ಬಿಡದೆ ಪರಾರಿಯಾಗಿದ್ದಾನೆ ಎಂದರು.
ನಮ್ಮ ಕಡೆಯಿಂದ ಈಗಾಗಲೇ ಬಹಳ ಪ್ರಯತ್ನ ನಡೆದಿದ್ದು, ಆತ ವ್ಯವಸ್ಥಿತವಾಗಿ ಸಂಚು ರೂಪಿಸಿ ಕೃತ್ಯ ಎಸಗಿ ಪರಾರಿ ಆಗಿದ್ದು, ಮಾತ್ರವಲ್ಲದೆ, ಮನೆಯವರಿಗೆ ಮನೆ ಖಾಲಿ ಮಾಡಲು ತಿಳಿಸಿದ್ದ ಎಂದು ತಿಳಿದು ಬಂದಿದೆ ಎಂದು ಆಯುಕ್ತರು ನುಡಿದರು.
ಈಗಾಗಲೇ ಬೇರೆ ಬೇರೆ ರಾಜ್ಯಗಳಿಗೂ ವಿಶೇಷ ತಂಡಗಳನ್ನ ರವಾನೆ ಮಾಡಲಾಗಿದೆ. ಎಲ್ಲ ದೇವಸ್ಥಾನದಲ್ಲಿ ಸಹ ಹುಡುಕಾಟ ನಡೆಸುತ್ತಿದ್ದೇವೆ ಎಂದು ಕಮಲ್ ಪಂತ್ ಹೇಳಿದರು.