ಆಧುನಿಕ ರಂಗಭೂಮಿಯ ಮರ್ಮದೊಳಗೆ ಕರಗಿದ ಭೈರಪ್ಪರ ‘ಪರ್ವ’

Update: 2022-05-14 06:00 GMT

ಎಸ್.ಎಲ್. ಭೈರಪ್ಪರನ್ನು ಕಳೆದೊಂದು ದಶಕದ ಅವರ ರಾಜಕೀಯ ನಿಲುವಿನ ಹೊರತಾಗಿ ನೋಡಿದರೆ, ಕನ್ನಡದೊಳಗಿನ ಕಾದಂಬರಿ ಕ್ಷೇತ್ರವನ್ನು ತನ್ನ ಬರವಣಿಗೆಯ ಮೂಲಕ ಜಗತ್ತಿಗೆ ತೋರ್ಪಡಿಸಿದ ಒಬ್ಬ ಅಪ್ರತಿಮ ಸಾಧಕ ಎನ್ನಲು ಅವರಿಗೆ ಯಾವ ಸಮ್ಮಾನ ಅಥವಾ ಪೀಠದ ಅಗತ್ಯವಿಲ್ಲ. ಬದಲಾಗಿ ಅವುಗಳ ತಾದ್ಯಾತ್ಮದ ಓದೇ ಸಾಕು. ಒಂದರ್ಥದಲ್ಲಿ ಮೂಲ ಇಂಗ್ಲಿಷರದ್ದು ಎನ್ನಲಾಗುವ ಕಾದಂಬರಿ ರೂಪಕ್ಕೆ ಎಲ್ಲ ಸ್ತರದ ಹೊಸತನವನ್ನು ಹಳೇತನದ ಗಟ್ಟಿ ಚೌಕಟ್ಟಿನಲ್ಲಿ ನೀಡಿ ಸೃಷ್ಟಿಸಿದ ಅಪ್ರತಿಮ ಅವರು. ಇವರ ಒಟ್ಟು 30ರ ಆಸುಪಾಸಿನ ಕಾದಂಬರಿಗಳೆಲ್ಲವೂ ಒಂದು ನೆಲೆಯಲ್ಲಿ ಓದಲು ನಮಗೆ ನಿತ್ಯ ಪರ್ವವಾದರೂ, 40 ವರ್ಷ ಹಿಂದೆ ಬರೆದ ‘ಪರ್ವ’ ಮಾತ್ರ ಮಹಾಭಾರತ ಕಥಾನಕದ ಲೌಕಿಕ ಮನಸ್ಥಿತಿಯನ್ನು ಹೊರಹಾಕುವ ಒಂದು ಮಾಂತ್ರಿಕತೆಯೇ ಸರಿ. ಹೀಗಾಗಿ ಅದರ ಆಧಾರಿತ ರಂಗ ಪ್ರಯೋಗ ಮೈಸೂರು ರಂಗಾಯಣದ ನೆಲೆಯಲ್ಲಿ ಹೊರಬಂದು ಅದೂ ಮಹಾ ರಂಗ ಪ್ರಯೋಗ ಎಂದೇ ತನ್ನನ್ನು ತಾನು ಕರೆಸಿಕೊಂಡು, ಎಂಟು ಗಂಟೆಗಳ ಕಾಲ ಇಡೀ ಮಹಾಭಾರತದ ಬೀಜ ಮತ್ತು ಕ್ಷೇತ್ರದ ಪ್ರಶ್ನೆಗಳನ್ನು ಮತ್ತೆ ಮತ್ತೆ ಹೇಳುತ್ತಾ ಕೇಳುತ್ತಾ, ಹೊಸ ಸಂಚಲನವನ್ನೇ ಉಂಟು ಮಾಡುತ್ತಿದೆ.

ನಮ್ಮಲ್ಲಿ ಕನ್ನಡದ ಕಾದಂಬರಿಗಳು ಯಶಸ್ವಿ ಚಲನಚಿತ್ರವಾಗಿರುವುದಕ್ಕೆ ದೀರ್ಘ ಇತಿಹಾಸವೇ ಇದೆ. ನಾಟಕದ ಮಾತು ಬಂದಾಗ ಮಾತ್ರ ಇದು ಸ್ವಲ್ಪ ಅಪರೂಪವಷ್ಟೆ. ಅದು ಯಾವುದೇ ಇರಲಿ ಪ್ರದರ್ಶನದ ವ್ಯಾಪ್ತಿಗೆ ಕಾದಂಬರಿಯೊಂದು ಬಂದು ನಿಂತಾಗ ಅವುಗಳ ಮೂಲ ಮತ್ತು ತೆರೆಯ ಮೇಲಿನ ಸಾಧ್ಯತೆಗಳ ಇತಿಮಿತಿಯ ಚರ್ಚೆ, ನಿರಂತರ ಮತ್ತು ಅನಿವಾರ್ಯವೂ ಹೌದು. ಹೀಗಾಗಿ ಈ ನಿಟ್ಟಿನಲ್ಲಿಯೇ ಹೊರಬಂದ ಪರ್ವ ನಾಟಕ ಮತ್ತೊಮ್ಮೆ ನಮ್ಮನ್ನು ದ್ವಾಪರ ಯುಗಕ್ಕೆ ಕೊಂಡ್ಯೊಯ್ಯುವ ಪ್ರಯತ್ನ ಮಾಡಿದ್ದಂತೂ ನಿಜ. ಹಾಗೆ ನೋಡಿದರೆ ರಂಗಾಯಣಕ್ಕೆ ಮಹಾಭಾರತದ ಕಥಾನಕವನ್ನೇ ರಂಗಪ್ರಯೋಗ ಮಾಡಬೇಕೆಂದಿದ್ದರೆ ಭೈರಪ್ಪರ ಪರ್ವವೇ ಕಡ್ಡಾಯವೆಂದೇನೋ ಖಂಡಿತ ಇರಲಿಲ್ಲ, ಬದಲಾಗಿ ಮೂಲ ಮಹಾಭಾರತದ ಜತೆಗೆ ಲೋಕದಲ್ಲಿ ರೂಢಿಯಲ್ಲಿರುವ ನೂರಾರು ಮಹಾಭಾರತದ ಎಳೆಗಳನ್ನು ಸಹ ಸಮರ್ಥವಾಗಿ ಬಳಸಬಹುದಾಗಿತ್ತು. ಬಹುಶಃ ಇಲ್ಲಿ ಭೈರಪ್ಪರ ಸಾಹಿತ್ಯದ ಶಕ್ತಿ ಮತ್ತು ಇತ್ತೀಚಿನ ರಾಜಕೀಯ ಯುಕ್ತಿ ಹೆಚ್ಚು ಬಳಕೆಯಾದಂತೆ ಸ್ಪಷ್ಟವಾಗಿ ಕಾಣುತ್ತಿದೆ ಸರಕಾರಿ ಪ್ರಾಯೋಜಿತ ರಂಗಾಯಣಕ್ಕೆ.

ಮಹಾಭಾರತದ ಮೂಲದಲ್ಲೇ ಇರುವ ಮತ್ತು ಪರ್ವ ಕಾದಂಬರಿಯಲ್ಲಿ ಸಹ ಹೆಚ್ಚು ಪ್ರತಿಬಿಂಬಿತವಾಗಿರುವ ಕಾಮ ಹಾಗೂ ಅಧಿಕಾರ ಲಾಲಸೆಯ ಸುತ್ತವೇ ಗಿರಕಿ ಹೊಡೆಯುವ ಈ ಇಡೀ ನಾಟಕ ಆಧುನಿಕ ರಂಗಭೂಮಿಯ ಎಲ್ಲ ತಾಂತ್ರಿಕತೆಯನ್ನು ಸಮರ್ಥವಾಗಿ ಬಳಸಿಕೊಂಡು ಮಹಾಭಾರತದ ಬಹುತೇಕ ಎಲ್ಲ ಘಟನಾವಳಿಗಳನ್ನು ಅತ್ಯಂತ ಆಕರ್ಷಕ ಸಂಕಲಿತ (Edited) ವಿಧಾನದಲ್ಲಿ ನಮ್ಮೆದುರಿಗಿಟ್ಟಿದೆ. ಇಂದು ನಾಟಕಗಳು ಕೇವಲ ನಾಲ್ಕು ಪರದೆಗಳ ನಡುವಿನ ಮಾತುಕತೆಯಾಗಿ ಉಳಿದಿಲ್ಲ ಮತ್ತು ಪ್ರೇಕ್ಷಕರು ಸಹ ಭಾರೀ ಹೊಸತನದ ನಿರೀಕ್ಷೆಯಲ್ಲಿಯೇ ಬಂದವರಿರುತ್ತಾರೆ, ಅದು ಸಹ ರಂಗಾಯಣದಂತಹ ಸರಕಾರಿ ಕೃಪಾಪೋಷಿತ ಸಂಸ್ಥೆಯ ಹಿನ್ನೆಲೆಯ ಇಂತಹ ನಾಟಕಗಳಿಗೆ. ಹೆಚ್ಚು ಕಡಿಮೆ ಈ ನಿರೀಕ್ಷೆಗೆ ಚ್ಯುತಿ ಬರದಂತಿದ್ದ ಮಂಗಳೂರಿನ ಪ್ರದರ್ಶನ ನಡೆದದ್ದು ಒಳಾಂಗಣದಲ್ಲ್ಲಾದ ಕಾರಣ ಒಂದು ರೀತಿಯ ನಿರಾಸೆ ಮೂಡಿದ್ದು ಸಹಜ. (40ರಷ್ಟು ಕಲಾವಿದರ ವಿವಿಧ ಪ್ರಕಾರದ ಸಂಯೋಜನೆ ಇರುವ ಇದಕ್ಕೆ ಹೊರಾಂಗಣ ಹೆಚ್ಚು ಸೂಕ್ತ) ಬಹುತೇಕ ವೃತ್ತಿಪರ ಎನ್ನಬಹುದಾದ ಕಲಾವಿದರೇ ಇರುವ ಈ ರಂಗಾಯಣದ ವ್ಯವಸ್ಥೆಯೊಳಗೆ ಅದರ ಪರಿಣಾಮ ನಟನೆಯಲ್ಲಿ ಕಾಣಬೇಕಾದ್ದು ತುಂಬಾ ಅಗತ್ಯ ಮತ್ತು ಕೆಲವು ಸಂದರ್ಭ ಹೊರತು ಪಡಿಸಿ ಇದು ಸಾಕಾರವೂ ಆಗಿದೆ ನಿಜ.

ನಾಟಕದ ಇತರೆಲ್ಲ ಅಗತ್ಯದ ನಿರ್ವಹಣೆಗೆ ಸಹ ಭಾರೀ ಹೆಸರು ಮಾಡಿರುವ ವ್ಯಕ್ತಿಗಳ ತಂಡವೇ ಇದರ ಹಿಂದೆ ಇರುವಾಗ ಅವುಗಳ ಸಮ್ಮಿಶ್ರ ಫಲಿತಾಂಶ ಈ ಮಹಾ ರಂಗ ಪ್ರಯೋಗದ ಒಟ್ಟಾರೆ ಯಶಸ್ಸಿನ ಭಾಗವಾಗಿ ಕಂಡಿತು, ಕಾದಂಬರಿ ಪರ್ವದ ಮತ್ತೊಂದು ಮಜಲನ್ನು ನಮ್ಮೆದುರಿಗಿಡುತ್ತ. ಎಂಟು ಗಂಟೆಗಳ ಸತತ ಪ್ರಯೋಗದಲ್ಲಿ ನಿರಂತರವಾಗಿ ಪ್ರೇಕ್ಷಕರನ್ನು ತನ್ನೊಳಗೆ ಹಿಡಿದಿರುವುದು ಎಂತಹ ಘಟಾನುಘಟಿಗಳಿಗೂ ಸವಾಲೇ ಸರಿ. ಈ ನಿಟ್ಟಿನಲ್ಲಿ ಕೆಲವು ಬಾರಿ ರಂಗಕ್ಕೆ ಬಂದ ದೀರ್ಘ ಮತ್ತು ಕಣ್ಣು ಕೂರಿಸುವ ಒಂದೆರಡು ದೃಶ್ಯಾವಳಿಗಳು ಇದರಲ್ಲಿ ನುಸುಳಿದ್ದು ಸಹ ಇದ್ದೇ ಇದೆ. ಜತೆಗೆ ಕೆಲವು ತೀರಾ ಆಧುನಿಕತೆಯ ಲೌಕಿಕ ರೂಪದ ಕಳಪೆ ಮನರಂಜನೆಯ ವಿಧಾನವೂ ಹಾಸುಹೊಕ್ಕಾಗಿ ಬಂದು ಹೋದದ್ದು ಸಂಗೀತವೂ ಸೇರಿದಂತೆ ಅಭಿನಯದ ಹಾವಭಾವ ಮಾತುಕತೆಯೊಳಗೆ ಇಲ್ಲಿ ಖಂಡಿತ ಬೇಕಾಗಿರಲಿಲ್ಲ. (ಉಳಿದಂತೆ ಹತ್ತಾರು ಉಪಕರಣ ಉಪಯೋಗಿಸಿದ ಲೈವ್ ಮ್ಯೂಸಿಕ್ ತುಂಬಾ ಆಕರ್ಷಕ) ಹಿನ್ನೆಲೆಯ ಹಾಡುಗಳನ್ನು ಕನ್ನಡ ಮೂಲದ್ದೇ ಮಾಡಬಹುದಿತ್ತೇನೋ? ಹೀಗೆ ಕೆಲವು ಬೇಕು ಬೇಡಗಳು ಇನ್ನೂ ಇರುವ ಇಂತಹ ಒಂದು ಸಾಹಸ ಕನ್ನಡದ ವ್ಯಾಪ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸುವಲ್ಲಿ ಒಂದು ಕ್ರಾಂತಿಯನ್ನೇ ಮಾಡಿದೆ ಎಂಬುದು ನಿಸ್ಸಂಶಯ.

Writer - ಕಲ್ಲಚ್ಚು ಮಹೇಶ ಆರ್ ನಾಯಕ್

contributor

Editor - ಕಲ್ಲಚ್ಚು ಮಹೇಶ ಆರ್ ನಾಯಕ್

contributor

Similar News