ತುಳುಭಾಷೆಯ ಅಭಿವೃದ್ಧಿಗಾಗಿ ಶ್ರಮಿಸಬೇಕು: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ಬೆಂಗಳೂರು, ಮೇ 15: ಸಂಘ-ಸಂಸ್ಥೆಗಳು ಸೇರಿದಂತೆ ಎಲ್ಲರೂ ತುಳು ಭಾಷೆಯ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕರೆ ನೀಡಿದ್ದಾರೆ.
ರವಿವಾರ ತುಳುವೆರೆಂಕುಲು ಬೆಂಗಳೂರು ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬೆಂಗ್ಳೂರು ತುಳುಪರ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಳು ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಾಗಬೇಕು. ತುಳುವೆರೆಂಕುಲು ಸಂಘವು ತುಳು ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಏರ್ಪಡಿಸಿ, ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕರ್ನಾಟಕ ತುಳು ಸಾಹಿತ್ಯಾ ಅಕಾಡೆಮಿಯ ಅಧ್ಯಕ್ಷ ದಯಾನಂದ್ ಜಿ.ಕತ್ತಲ್ಸಾರ್ ಮಾತನಾಡಿ, ತುಳು ನಾಡಿನಿಂದ ಪ್ರಭಾವಿ ರಾಜಕಾರಣಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮಹಾನ್ ಸಾಧಕರಿದ್ದರೂ, ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರ್ಪಡೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇನ್ನೂ ಮುಂದೆಯಾದರೂ ಭಾಷೆಗಾಗಿ ಹೋರಾಟ ಮಾಡಬೇಕು. ಹಾಗೆಯೇ ತುಳುವನ್ನು ರಾಜ್ಯ ಭಾಷೆಯನ್ನಾಗಿ ಮಾಡುವುದರಿಂದ ಕನ್ನಡಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದರು.
ಸರಕಾರವು ಕರ್ನಾಟಕ ತುಳು ಸಾಹಿತ್ಯಾ ಅಕಾಡೆಮಿಗೆ ಜಮೀನು ನೀಡಿದ್ದು, ಅದನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು. ಹಾಗೆಯೇ ಅಕಾಡೆಮಿಗೆ ಅನುದಾನವನ್ನು ಕಡಿತ ಮಾಡಬಾರದು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ 28 ಸಾಧಕರನ್ನು ಗೌರವಿಸಲಾಯಿತು. ಸರ್ವೋತ್ತಮ ಶೆಟ್ಟಿ, ಸಿ.ಲಕ್ಷ್ಮಣ್ ಪೂಜಾರಿ, ಮಾಧವ ಕುಲಾಲ್, ಡಾ.ಕೆ.ಎನ್.ಅಡಿಗ, ಪುರುಷೋತ್ತಮ ಚೇಂಡ್ಲ ಹಾಗೂ ಗೌರಿ ಸಾಸ್ತಾನ ಅವರಿಗೆ ಬಲೀಯೇಂದ್ರ ಪುರಸ್ಕಾರವನ್ನು ನೀಡಲಾಯಿತು.