ಶ್ರೀ ಉಲ್ಕಾ ಮೀನು ಕಾರ್ಖಾನೆ ದುರಂತ; ಡಿವೈಎಫ್ಐ ನಿಯೋಗದಿಂದ ಸಂತ್ರಸ್ತರ ಮನೆಗಳಿಗೆ ಭೇಟಿ
ಮಂಗಳೂರು : ಇತ್ತೀಚೆಗೆ ಮಂಗಳೂರು ಸೆಝ್ ನಲ್ಲಿರುವ ಶ್ರೀ ಉಲ್ಕಾ ಮೀನು ಕಾರ್ಖಾನೆಯಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಪಶ್ಚಿಮ ಬಂಗಾಲದ ದೇಗಂಗಾ ಗ್ರಾಮದ ನಿವಾಸಕ್ಕೆ ಭೇಟಿ ನೀಡಿದ ಡಿವೈಎಫ್ಐ ರಾಜ್ಯ ಸಮಿತಿ ನಿಯೋಗ ಸಾಂತ್ವನ ನೀಡಿದೆ.
ಪರಿಹಾರ ಮೊತ್ತ ಒದಗಿಸುವ ಕೆಲಸದ ಪ್ರಗತಿಯನ್ನು ಪರಿಶೀಲಿಸಿದ ನಿಯೋಗ, ವಲಸೆ ಕಾರ್ಮಿಕರ ಸಂಘಟನೆಯ ಪ್ರಮುಖರೊಂದಿಗೆ ಚರ್ಚಿಸಿತು. ಆತ್ಮೀಯವಾಗಿ ಬರಮಾಡಿಕೊಂಡ ಗ್ರಾಮಸ್ಥರು ದುರಂತದ ಸಂದರ್ಭ ಜೊತೆ ನಿಂತು ಸಹಾಯ ಒದಗಿಸಿದ, ಕುಟುಂಬಗಳಿಗೆ ತಲಾ 15 ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಶ್ರಮಿಸಿದ ಮಂಗಳೂರಿನ ಡಿವೈಎಫ್ಐ ಮುಖಂಡರಿಗೆ ಸಣ್ಣ ಸಭೆಯ ಮೂಲಕ ಗೌರವಿಸಿತು. ಸ್ಥಳೀಯ ಡಿವೈಎಫ್ಐ, ಸಿಪಿಐ ಮುಖಂಡರು ಜೊತೆಗಿದ್ದರು.
ಕುಟುಂಬಗಳಿಗೆ ಕಂಪೆನಿ ಕಡೆಯಿಂದ ಪರಿಹಾರ ಧನ ಒದಗಿಸುವ ಕೆಲಸ ಪ್ರಗತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಸಂತ್ರಸ್ತರ ಕುಟುಂಬದ ಗುರುತು ದೃಢೀಕರಣಕ್ಕಾಗಿ 24 ಪರಗಣ ಜಿಲ್ಲಾಧಿಕಾರಿಗಳಿಗೆ ಕಳುಹಿಸಿರುವ ಪಟ್ಟಿಯ ಪರಿಶೀಲನೆ ನಡೆಯುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ದೃಢೀಕರಣಗೊಂಡ ಪಟ್ಟಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ತಲುಪಿದ ತಕ್ಷಣ ಕಂಪೆನಿ ಕುಟುಂಬಗಳ ಖಾತೆಗೆ ನಗದು ವರ್ಗಾಯಿಸಲಿದೆ ಎಂದು ನಿಯೋಗ ಪ್ರಕಟನೆಯಲ್ಲಿ ತಿಳಿಸಿದೆ.