ಬಿಡಿಎ ಅಧ್ಯಕ್ಷರ ಪಿಎಗೆ 3 ಲಕ್ಷ ರೂ. ವೇತನ ಆರೋಪ; ಹಿಂತಿರುಗಿಸದಿದ್ದರೆ ಉಗ್ರ ಹೋರಾಟ: ಆಪ್ ಎಚ್ಚರಿಕೆ

Update: 2022-05-17 12:55 GMT

ಬೆಂಗಳೂರು, ಮೇ 17: ನಿಯಮಗಳನ್ನು ಗಾಳಿಗೆ ತೂರಿ ಬಿಡಿಎ ಅಧ್ಯಕ್ಷರ ಆಪ್ತ ಸಹಾಯಕ ಹುದ್ದೆಗೆ ನೇಮಕಾತಿ ಮಾಡಿದ್ದಲ್ಲದೇ, ಮೂರು ಲಕ್ಷ ರೂಪಾಯಿಗೂ ಅಧಿಕ ವೇತನ ನೀಡುತ್ತಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ವಿರೋಧ ವ್ಯಕ್ತಪಡಿಸಿದೆ.

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಎಎಪಿ ಮುಖಂಡ ಹಾಗೂ ಮಾಜಿ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು ಮಾತನಾಡಿ, ಬಿಡಿಎ ಹಾಗೂ ಕರ್ನಾಟಕ ಸರಕಾರದ ನಿಯಮಾವಳಿಯನ್ನು ಉಲಂಘಿಸಿ ಸೋಮಶೇಖರ್ ಎಂಬುವವರನ್ನು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರ ಆಪ್ತ ಸಹಾಯಕ ಹುದ್ದೆಗೆ ನೇಮಕ ಮಾಡಲಾಗಿದೆ. ಕೆಎಎಸ್ ಜೂನಿಯರ್ ಸ್ಕೇಲ್ ಹುದ್ದೆಗೆ ಕೆಎಎಸ್ ಅಲ್ಲದವರನ್ನು ನೇಮಿಸಲಾಗಿದೆ. ಈ ಹುದ್ದೆಗೆ ತಿಂಗಳಿಗೆ 50 ಸಾವಿರದಿಂದ 60 ಸಾವಿರ ರೂಪಾಯಿ ವೇತನವಿದ್ದರೂ ಬರೋಬ್ಬರಿ 3,12,002 ರೂಪಾಯಿ ಸಂಬಳವನ್ನು ಸೋಮಶೇಖರ್ ಅವರಿಗೆ ನೀಡಲಾಗುತ್ತಿದೆ. ವಿಪರ್ಯಾಸ ಎಂದರೆ ಬಿಡಿಎ ಕಮಿಷನರ್ ಹಾಗೂ ಆಯುಕ್ತರಿಗೇ ಇಷ್ಟು ಸಂಬಳ ನೀಡುತ್ತಿಲ್ಲ ಎಂದು ಹೇಳಿದರು.

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಬಿಜೆಪಿ ಶಾಸಕರಾಗಿದ್ದು, ಬಿಡಿಎ ಆಯುಕ್ತರ ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯ ನಿರ್ದೇಶನದಂತೆ ಸೋಮಶೇಖರ್ ನೇಮಕವಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಈ ಕಾನೂನುಬಾಹಿರ ನೇಮಕಾತಿಗೆ ಅನುಮೋದನೆ ನೀಡಿದೆ. ಬಿಡಿಎ ಹಲವು ವರ್ಷಗಳಿಂದ ನಷ್ಟದಲ್ಲಿದ್ದರೂ, ಆಪ್ತ ಸಹಾಯಕ ಹುದ್ದೆಗೆ ದುಬಾರಿ ವೇತನ ನೀಡುತ್ತಿರುವುದರ ಹಿಂದಿನ ಉದ್ದೇಶ ಏನು ಎಂದು ಅವರು ಪ್ರಶ್ನಿಸಿದರು.

ಶೀಘ್ರವೇ ಸೋಮಶೇಖರ್ ಅವರನ್ನು ಅಮಾನತು ಮಾಡಿ, ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಬೇಕು. ನಿಯಮಾವಳಿ ಅನ್ವಯ ವೇತನ ನೀಡಬೇಕು. ದುಬಾರಿ ವೇತನ ನೀಡಿದ್ದರಿಂದ ಈವರೆಗೆ ಬಿಡಿಎಗೆ ಆದ ನಷ್ಟವನ್ನು ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಸಂಬಳದಿಂದ ಭರಿಸಿಕೊಳ್ಳಬೇಕು. ಇಲ್ಲದಿದ್ದರೆ ವಿಧಾನಸೌಧದ ಎದುರು ಆಮ್ ಆದ್ಮಿ ಪಾರ್ಟಿಯು ಧರಣಿ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News