2021-22ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟ: ಶೇ.85.63 ವಿದ್ಯಾರ್ಥಿಗಳು ಉತ್ತೀರ್ಣ

Update: 2022-05-19 12:21 GMT

ಬೆಂಗಳೂರು, ಮೇ 19: ಮಾರ್ಚ್ ತಿಂಗಳಿನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಬರೆದ ಒಟ್ಟು 8,53,436 ವಿದ್ಯಾರ್ಥಿಗಳ ಪೈಕಿ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 90.29 ಫಲಿತಾಂಶವನ್ನು ಪಡೆದು, ಈ ವರ್ಷವೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.  

ಬುಧವಾರ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿ ಮಾತನಾಡಿದ ಅವರು, ಈ ವರ್ಷ ಮಾ.28ರಿಂದ ಎ.11ರವರೆಗೆ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಖಾಸಗಿ, ಪುನರಾವರ್ತಿತ ಸೇರಿ ನೂತನವಾಗಿ 8,73,859 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಪರೀಕ್ಷೆ ಬರೆದ ಒಟ್ಟು 8,53,436 ವಿದ್ಯಾರ್ಥಿಗಳ ಪೈಕಿ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವರ್ಷ ಶೇ.85.63 ಫಲಿತಾಂಶ ಬಂದಿದೆ. 20,423 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು ಎಂದು ಮಾಹಿತಿ ನೀಡಿದರು.

ಪ್ರತಿಬಾರಿಯಂತೆ ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪರೀಕ್ಷೆ ಬರೆದ 4,12,334 ವಿದ್ಯಾರ್ಥಿನಿಯರ ಪೈಕಿ 3,72,279 ಮಂದಿ ಉತ್ತೀರ್ಣರಾಗಿ ಶೇ.90.29 ಫಲಿತಾಂಶವನ್ನು ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ 4,41,199 ಬಾಲಕರ ಪೈಕಿ 3,58,602 ಮಂದಿ ತೇರ್ಗಡೆಯಾಗಿದ್ದು, ಶೇ.81.3 ಫಲಿತಾಂಶ ಪಡೆದಿದ್ದಾರೆ. ಇನ್ನೂ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಶೇ.91.32 ಫಲಿತಾಂಶ ಹಾಗೂ ನಗರದ ವಿದ್ಯಾರ್ಥಿಗಳು ಶೇ.86.64 ಫಲಿತಾಂಶ ದಾಖಲಾಗಿದೆ ಎಂದರು.

ಮಾಧ್ಯಮವಾರು ಫಲಿತಾಂಶ ಗಮನಿಸಿದರೆ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಶೇ.92.88 ಫಲಿತಾಂಶ ದಾಖಲಿಸಿದ್ದರೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಶೇ.87.65, ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಶೇ.76.09 ಫಲಿತಾಂಶ ದಾಖಲಿಸಿದ್ದಾರೆ. ರಾಜ್ಯಾದ್ಯಂತ ಒಟ್ಟು 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು, ಅವುಗಳಲ್ಲಿ 15 ಖಾಸಗಿ ಶಾಲೆಗಳು, 3 ಅನುದಾನಿತ ಹಾಗೂ ಎರಡು ಸರಕಾರಿ ಶಾಲೆಗಳಾಗಿವೆ. ಉಳಿದ 3,920 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ ಎಂದು ಅವರು ಹೇಳಿದರು. 

ಶೇ.10 ಮಾತ್ರ ಕಠಿಣ ಪ್ರಶ್ನೆಗಳನ್ನು ಪತ್ರಿಕೆಯಲ್ಲಿ ನೀಡಲಾಗಿದ್ದು, ಶೇ. 10ರಷ್ಟು ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. 175 ಅಂಕ ಪಡೆದವರು ಮಾತ್ರ ಇದಕ್ಕೆ ಎಲಿಜಬಲ್ ಆಗಿರುತ್ತಾರೆ. 35,931 ವಿದ್ಯಾರ್ಥಿಗಳಿಗೆ ಒಂದು ವಿಷಯದಲ್ಲಿ ಮಾತ್ರ ಗ್ರೇಸ್ ಮಾಕ್ರ್ಸ್ ನೀಡಿದ್ದೇವೆ. 3,940 ವಿದ್ಯಾರ್ಥಿಗಳಿಗೆ ಎರಡು ವಿಷಯದಲ್ಲಿ ಗ್ರೇಸ್ ಮಾಕ್ರ್ಸ್ ನೀಡಿದ್ದೇವೆ ಎಂದು ಅವರು ತಿಳಿಸಿದರು.

ಪ್ರಥಮ ಭಾಷೆಯಲ್ಲಿ 19,125 ವಿದ್ಯಾರ್ಥಿಗಳು, ದ್ವಿತೀಯ ಭಾಷೆಯಲ್ಲಿ 13,458 ವಿದ್ಯಾರ್ಥಿಗಳು, ತೃತೀಯ ಭಾಷೆಯಲ್ಲಿ 43,126 ವಿದ್ಯಾರ್ಥಿಗಳು, ಗಣಿತದಲ್ಲಿ 13,683 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ 6,592 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ 50,782 ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

625 ಅಂಕ ಗಳಿಸಿದ 145 ವಿದ್ಯಾರ್ಥಿಗಳು: ರಾಜ್ಯಾದ್ಯಂತ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಅದರಲ್ಲಿ 21 ಸರಕಾರಿ ಶಾಲೆಯ ವಿದ್ಯಾರ್ಥಿಗಳು, 8 ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಹಾಗೂ 119 ಖಾಸಗಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. 

ಜೂ.27ರಿಂದ ಪೂರಕ ಪರೀಕ್ಷೆ: ಉತ್ತರ ಪತ್ರಿಕೆಗಳ ಮರು ಎಣಿಕೆ, ಮರುಮೌಲ್ಯಮಾಪನಕ್ಕೆ ಆನ್‍ಲೈನ್ ಅರ್ಜಿ ಸಲ್ಲಿಸಲು ಹಾಗೂ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಪಡೆಯಲು ಮೇ 20ರಿಂದ ಮೇ 30ರವರೆಗೆ ಅವಕಾಶ ಕಲ್ಪಿಸಲಾಗಿದೆ. ಜೂ.27ರಿಂದ ಜು.4ರವರೆಗೆ ಎಸೆಸೆಲ್ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ಮೇ 20ರಿಂದ ಮೇ 30ರವರೆಗೆ ನೋಂದಾಯಿಸಿಕೊಳ್ಳಲು ಸಚಿವರು ಸೂಚಿಸಿದರು.

2020-21ನೇ ಶೈಕ್ಷಣಿಕ ವರ್ಷ ಹೊರತುಪಡಿಸಿ, 10 ವರ್ಷಗಳಲ್ಲೇ ಈ ವರ್ಷ ಅಧಿಕ ಫಲಿತಾಂಶ ಬಂದಿದೆ. ಈ ಬಾರಿ ಜಿಲ್ಲೆಗಳಿಗೆ ಗ್ರೇಡ್ ನೀಡಲಾಗಿದ್ದು, ರ್ಯಾಂಕ್ ಆಧಾರದಲ್ಲಿ ಫಲಿತಾಂಶ ವಿಂಗಡನೆ ಮಾಡಿಲ್ಲ. 34 ಶೈಕ್ಷಣಿಕ ಜಿಲ್ಲೆಗಳ ಪೈಕಿ 32 ಶೈಕ್ಷಣಿಕ ಜಿಲ್ಲೆಗಳು 'ಎ' ಗ್ರೇಡ್‍ನಲ್ಲಿದ್ದರೆ, ಬೆಂಗಳೂರು ದಕ್ಷಿಣ ಮತ್ತು ಯಾದಗಿರಿ ಶೈಕ್ಷಣಿಕ ಜಿಲ್ಲೆಗಳು 'ಬಿ' ಗ್ರೇಡ್‍ನಲ್ಲಿವೆ. 

-ಬಿ.ಸಿ.ನಾಗೇಶ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

-----------------------------------------------
ಎಸೆಸೆಲ್ಸಿ ಪರೀಕ್ಷೆ ಫಲಿತಾಂಶಗಳನ್ನು ಪಡೆದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ನನ್ನ ಶುಭಹಾರೈಕೆಗಳು. ಫಲಿತಾಂಶ ಏನೇ ಆಗಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ, ಹಿನ್ನಡೆಯಾಗಿದ್ದಲ್ಲಿ ಎದೆಗುಂದಬೇಡಿ. ನಿಮ್ಮ ತಂದೆ, ತಾಯಿ, ಗುರು-ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ, ಶುಭವಾಗಲಿ.

-ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

-------------------------------------------

ಬಾಗಲಕೋಟೆ ಜಿಲ್ಲೆಯ ಪ್ರಸಕ್ತ ಸಾಲಿನ ಎಸೆಸೆಲ್ಸಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿ ಶೇ.84.71ರಷ್ಟು ಫಲಿತಾಂಶ ದಾಖಲಿಸಿದ್ದು, ನನಗೆ ವೈಯಕ್ತಿಕವಾಗಿ ಅತ್ಯಂತ ಸಂತೋಷ ತಂದಿದೆ. ಪ್ರತಿಭಾವಂತ ಮಕ್ಕಳನ್ನು ಕೊಡುಗೆ ನೀಡಿದ ಪಾಲಕರಿಗೂ ಇಷ್ಟು ಉತ್ತಮ ಸಾಧನೆ ಮಾಡಲು ಕಾರಣಕರ್ತರಾದ ವಿದ್ಯಾರ್ಥಿಗಳಿಗೆ ಬೋಧಿಸಿದ ಶಿಕ್ಷಕ ವೃಂದಕ್ಕೂ ಮತ್ತು ಪಾಲಕರಿಗೂ ಮತ್ತು ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.

-ಗೋವಿಂದ ಕಾರಜೋಳ, ಜಲ ಸಂಪನ್ಮೂಲ ಸಚಿವ

-------------------------

ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯವು, ಹತ್ತು ವರ್ಷಗಳಲ್ಲಿ ಗರಿಷ್ಠ ಫಲಿತಾಂಶ ಶೇ.85.63ರಷ್ಟನ್ನು ಸಾಧಿಸಿದ್ದು ಹೆಮ್ಮೆಯ ಸಂಗತಿ. ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಎಲ್ಲ ವಿದ್ಯಾರ್ಥಿ ವೃಂದಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಈ ಮಹತ್ಸಾಧನೆಗೆ ಕಾರಣವಾದ ಎಲ್ಲ ಶಿಕ್ಷಕ-ಶಿಕ್ಷಕಿಯರು, ತರಬೇತುದಾರರು ಅಭಿನಂದನಾರ್ಹರು. ವಿದ್ಯಾರ್ಥಿಗಳ ವಿಜಯ ಯಾತ್ರೆ ಹೀಗೆ ಮುಂದುವರಿಯಲಿ, ನಾಡಿಗೆ ಕೀರ್ತಿ ತರುವಂತಾಗಲಿ. ಅನುತ್ತೀರ್ಣರಾದ ವಿದ್ಯಾರ್ಥಿಗಳು ನಿರಾಸೆ ಹೊಂದದೆ ಮುಂದಿನ ಭಾರಿ ಮತ್ತಷ್ಟು ಪರಿಶ್ರಮದಿಂದ ಪರೀಕ್ಷೆ ಬರೆದು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News