ಎಸೆಸೆಲ್ಸಿ ಫಲಿತಾಂಶದಲ್ಲಿ ದ.ಕ.ಜಿಲ್ಲೆಗೆ ಹಿನ್ನಡೆ; ಡಬಲ್ ಇಂಜಿನ್ ಸರಕಾರದ ಗೊಂದಲವೇ ಕಾರಣ: ಎಂ.ಬಿ. ಸದಾಶಿವ ಆರೋಪ

Update: 2022-05-20 15:19 GMT

ಮಂಗಳೂರು, ಮೇ 20: 2021-22ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ದ.ಕ.ಜಿಲ್ಲೆಯು 20ನೆ ಸ್ಥಾನಕ್ಕೆ ಕುಸಿಯಲು ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿಯ ಡಬಲ್ ಇಂಜಿನ್ ಸರಕಾರವು ಶೈಕ್ಷಣಿಕ ಕ್ಷೇತ್ರದಲ್ಲಿ ಸೃಷ್ಟಿಸಿದ ಗೊಂದಲವೇ ಕಾರಣ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತೀ ವರ್ಷ ದ.ಕ.ಜಿಲ್ಲೆಯು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನದಲ್ಲಿರುತ್ತಿತ್ತು. ಆದರೆ ಈ ಬಾರಿ ೨೦ನೆ ಸ್ಥಾನಕ್ಕೆ ಸಮಾಧಾನಪಟ್ಟು ಕೊಳ್ಳುವಂತಾಗಿದೆ. ಈ ಬಗ್ಗೆ ದ.ಕ.ಜಿಲ್ಲೆಯ ವಿದ್ಯಾರ್ಥಿಗಳ ಹೆತ್ತವರು, ಪೋಷಕರು ಗಮನಹರಿಸಬೇಕಿದೆ ಎಂದರು.

ಶೈಕ್ಷಣಿಕ ಕ್ಷೇತ್ರದಲ್ಲಿ ದ.ಕ.ಜಿಲ್ಲೆಯ ಸಾಧನೆಗೆ ದೇಶ-ವಿದೇಶಗಳಲ್ಲಿ ಒಳ್ಳೆಯ ಹೆಸರಿದೆ. ಪ್ರಶಂಸೆಯೂ ವ್ಯಕ್ತವಾಗಿದೆ. ಜಗತ್ತಿನ ೧೨ ಬೃಹತ್ ಕಂಪೆನಿಗಳ ಸಿಇಒಗಳು ಕನ್ನಡಿಗರಾಗಿದ್ದಾರೆ. ಆದರೆ ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರಕಾರಗಳು ವಿದ್ಯಾರ್ಥಿಗಳ ಮಧ್ಯೆ ಮತೀಯ ಭಾವನೆ ಸೃಷ್ಟಿಸುತ್ತಲೇ ಇದೆ. ಜೆಡಿಎಸ್ ಸರಕಾರವಿದ್ದಾಗ ಮಕ್ಕಳ ಕೈಗೆ ಲ್ಯಾಪ್‌ಟಾಪ್, ಟ್ಯಾಬ್ ಕೊಟ್ಟಿದ್ದರೆ ಬಿಜೆಪಿ ಸರಕಾರವು ತ್ರಿಶೂಲ, ಬಂದೂಕು ಕೊಟ್ಟು ದಾರಿ ತಪ್ಪಿಸುತ್ತಿದೆ ಎಂದು ಎಂ.ಬಿ.ಸದಾಶಿವ ಆರೋಪಿಸಿದರು.

ಸರಕಾರದ ವೈಫಲ್ಯವನ್ನು ಮರೆಮಾಚಲು ಬಿಜೆಪಿಯು ವಿದ್ಯಾರ್ಥಿಗಳ ಮಧ್ಯೆ ಹಿಜಾಬ್ ಸಮಸ್ಯೆಯನ್ನು ಹುಟ್ಟು ಹಾಕಿ ಜಾತಿ, ಧರ್ಮಗಳ ಆಧಾರದ ಮೇಲೆ ವಿಭಜಿಸಿದೆ. ಮಕ್ಕಳ ಏಕಾಗ್ರತೆಗೆ ಭಂಗ ತಂದಿವೆ. ಚಕ್ರತೀರ್ಥರಂತಹವರ ನೇತೃತ್ವದ ಸಮಿತಿಯನ್ನು ರಚಿಸಿ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಅನ್ಯಾಯ ಎಸಗಿದೆ. ನಾರಾಯಣಗುರು, ಭಗತ್ ಸಿಂಗ್, ಸ್ವಾಮಿ ವಿವೇಕಾನಂದ, ಪೆರಿಯಾರ್‌ರಂತಹ ವಿಶ್ವಮನ್ನಣೆಯ ನಾಯಕರ ವಿಷಯವುಳ್ಳ ಪಠ್ಯವನ್ನು ಕೈ ಬಿಟ್ಟಿದೆ. ಬ್ರಿಟಿಷ್ ಪರವಿರುವಂತಹವರ ವಿಷಯವನ್ನು ಪಠ್ಯದಲ್ಲಿ ಸೇರಿಸಿ ಅನ್ಯಾಯ ಎಸಗಿದೆ ಎಂದು ಎಂ.ಬಿ. ಸದಾಶಿವ ಆರೋಪಿಸಿದರು.

ಪಠ್ಯಪುಸ್ತಕ ಪರಿಷ್ಕರಣೆ ಸಂದರ್ಭ ಯಾರಿಗೂ ಅನ್ಯಾಯವಾಗಿಲ್ಲ. ನಾರಾಯಣ ಗುರುವಿನ ಬಗ್ಗೆಗಿನ ಪಠ್ಯವನ್ನು ಕೈಬಿಟ್ಟಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿರುವುದು ಖಂಡನೀಯ. ಹಾಗಿದ್ದರೆ ಅವರು ಈ ಬಗ್ಗೆ ಸಿಎಂರನ್ನು ಯಾಕೆ ಭೇಟಿ ಮಾಡಿದ್ದು ಎಂದು ಪ್ರಶ್ನಿಸಿದ ಎಂ.ಬಿ.ಸದಾಶಿವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ನೀಡಿದ ವರದಿಯನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ವಿಟ್ಲ ಮುಹಮ್ಮದ್ ಕುಂಞಿ, ವಸಂತ ಪೂಜಾರಿ, ಸುಶೀಲ್ ನೊರೊನ್ಹಾ, ಪ್ರವೀಣ್ ಜೈನ್ ಉಪಸ್ಥಿತರಿದ್ದರು.

ಎಸೆಸೆಲ್ಸಿ ಫಲಿತಾಂಶ; ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಪಟ್ಟಿ

೨೦೨೧-೨೨ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟಗೊಂಡ ಬೆನ್ನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾವಾರು ಸಾಧನೆಯ ಪಟ್ಟಿಯೊಂದು ಹರಿದಾಡುತ್ತಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ಜೆಡಿಎಸ್ ನಾಯಕರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಇದಕ್ಕೆ ಡಬಲ್ ಇಂಜಿನ್ ಸರಕಾರವೇ ಕಾರಣ ಎಂದು ಆರೋಪಿಸಿದ್ದಾರೆ.

ಆದರೆ ಇದು ನಕಲಿ ಪಟ್ಟಿ ಎಂದು ಹೇಳಲಾಗುತ್ತಿದೆ. ಈ ಪಟ್ಟಿಯ ಪ್ರಕಾರ ಸದಾ ಒಂದು ಅಥವಾ ಎರಡನೆ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದ್ದ ದ.ಕ.ಜಿಲ್ಲೆಯು ೨೦ನೆ ಸ್ಥಾನಕ್ಕೆ ತಳ್ಳಲ್ಪಟ್ಟಿವೆ. ಉಡುಪಿಗೆ ೧೩ನೆ ಸ್ಥಾನ ನೀಡಲಾಗಿದೆ.  ಪ್ರಥಮ ಸ್ಥಾನವು ಹಾಸನದ ಪಾಲಾದರೆ, ದ್ವಿತೀಯ ಸ್ಥಾನವು ಚಿಕ್ಕಬಳ್ಳಾಪುರ, ಮೂರನೆ ಸ್ಥಾನವು ಮಂಡ್ಯಕ್ಕೆ ನೀಡಲಾಗಿದೆ.

ಶೇ.೭೮.೨೦ ಮೂಲಕ ಎ ಗ್ರೇಡ್ ಪಡೆದಿರುವ ದ.ಕ.ಜಿಲ್ಲೆಗೆ ಶೇ.೮೭.೧೫ ನೀಡುವ ಮೂಲಕ ೨೦ನೆ ಸ್ಥಾನಕ್ಕೆ ತಳ್ಳಲಾಗಿದೆ. ಇದು ಕಿಡಿಗೇಡಿಗಳ ಕೃತ್ಯವಾದರೂ ಕೂಡ ದ.ಕ.ಜಿಲ್ಲಾಡಳಿತ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಬಗ್ಗೆ ಸ್ಪಷ್ಟನೆ ನೀಡದಿರುವುದು ವಿಪರ್ಯಾಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News