ಡಾ.ಎಂ.ಎನ್. ರಾಜೇಂದ್ರ ಕುಮಾರ್‌ಗೆ ’ಔಟ್ ಸ್ಟಾಂಡಿಂಗ್ ಲೀಡರ್‌ಶಿಪ್ ಅವಾರ್ಡ್’ ಪ್ರದಾನ

Update: 2022-05-20 16:36 GMT

ಮಂಗಳೂರು : ಇನ್‌ಸ್ಟಿಟ್ಯೂಟ್ ಅಫ್ ಇಕನಾಮಿಕ್ ಸ್ಟಡೀಸ್ ಹೊಸದಿಲ್ಲಿ ಇದರ ವತಿಯಿಂದ ಹೊಸದಿಲ್ಲಿಯಲ್ಲಿ ಗುರುವಾರ  ನಡೆದ ’ ನೆಟ್ ವರ್ಕಿಂಗ್ ನೆಕ್ಸ್ಟ್ - ಇಂಡಸ್ಟ್ರಿ ಇನ್ ಸಿಗ್ನಿಯಾ ಕಾನ್ಫರೆನ್ಸ್’ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ, ’ಸಹಕಾರ ರತ್ನ’ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಪ್ರತಿಷ್ಠಿತ ’ ಔಟ್ ಸ್ಟಾಂಡಿಂಗ್ ಲೀಡರ್ ಶಿಪ್ ಅವಾರ್ಡ್’ನ್ನು ಪ್ರದಾನ ಮಾಡಲಾಯಿತು.

ಹೊಸದಿಲ್ಲಿಯ ಇಂಡಿಯಾ ಹಬಿಟಾಟ್ ಸೆಂಟರ್ ಸಿಲ್ವರ್ ಓಕ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಾಂ ರಾಜ್ಯಪಾಲ ಪ್ರೊ. ಎಚ್.ಇ.ಜಗದೀಶ್ ಮುಖಿ ಪ್ರಶಸ್ತಿ ಪ್ರದಾನ ಮಾಡಿದರು.

ಮುಖ್ಯ ಅತಿಥಿಗಳಾಗಿ ಇಂಡಿಯನ್ ಪೊಡಿಯಾಟ್ರಿ ಅಸೋಸಿಯೇಶನ್ ಅಧ್ಯಕ್ಷ ಡಾ.ಎ.ಪಿ.ಎಸ್.ಸುರಿ, ಸಾರ್ವಜನಿಕ ಉದ್ಯಮಗಳ ಸ್ಥಾಯಿ ಸಮ್ಮೇಳನದ ಡೈರೆಕ್ಟರ್ ಜನರಲ್ ಡಾ.ಅತುಲ್ ಸೊಬಟಿ , ಇಂಡಿಯನ್ ಇಂಧನ ಅಭಿವೃದ್ಧಿ ಏಜೆನ್ಸಿಸ್ ಅಧ್ಯಕ್ಷ ಕೆ.ಎಸ್.ಪೋಪ್ಲಿ, ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾದ ನಿರ್ದೇಶಕ ಡಾ.ಮನೋಜ್ ಕುಮಾರ್, ಅಹ್ಲುವಾಲಿಯಾ ಕಂಟ್ರಾಕ್ಟ್ ಇಂಡಿಯಾ ಇದರ ಅಧ್ಯಕ್ಷ ಬಿಕ್ರಮ್ ಜಿತ್ ಅಹ್ಲುವಾಲಿಯಾ ಹೊಸದಿಲ್ಲಿಯ ಇನ್‌ಸ್ಟಿಟ್ಯೂಟ್ ಅಫ್ ಇಕನಾಮಿಕ್ ಸ್ಟಡೀಸ್ ಸಂಸ್ಥೆಯ ಅಧ್ಯಕ್ಷೆ, ಕಾರ್ಯ ನಿರ್ವಾಹಕ ನಿರ್ದೇಶಕಿ ಸಂಗೀತಾ ಸಿಂಗ್ ಭಾಗವಹಿಸಿದ್ದರು.

ಈ ಸಂದರ್ಭ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೋಟ್ಟು, ಜಯಪ್ರಕಾಶ್ ಉಪಸ್ಥಿತರಿದ್ದರು.

ಬ್ಯಾಂಕಿನ ಪ್ರಗತಿಯ  ರೂವಾರಿ

ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೈಯಕ್ತಿಕ ಸಾಧನೆಗಾಗಿ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿಕೊಂಡಿರುವ ಡಾ.ಎಂ.ಎನ್ . ರಾಜೇಂದ್ರ ಕುಮಾರ್ ಜಿಲ್ಲೆಯ ಸಹಕಾರ ರಂಗದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿಕ ಬದಲಾವಣೆಯನ್ನು ತರುವುದರ ಜೊತೆಗೆ ಎಸ್ ಸಿಡಿಸಿಸಿ ಬ್ಯಾಂಕಿನ ಸರ್ವಾಂಗೀಣ ಪ್ರಗತಿಯ ರೂವಾರಿ ಆಗಿದ್ದಾರೆ. ೧೯೯೪ರಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ನ್ನು ಸತತ ೨೮ ವರ್ಷಗಳ ಸುದೀರ್ಘ ಅವಧಿಯಲ್ಲಿ ಮುನ್ನಡೆಸುತ್ತಿರುವ ಇವರು ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಉತ್ಕೃಷ್ಟ ಬ್ಯಾಂಕಿಂಗ್ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಅತ್ಯಂತ ಪ್ರಾಮಾಣಿಕ ರೀತಿಯಲ್ಲಿ ಶ್ರಮ ವಹಿಸಿದ್ದಾರೆ.

ಬ್ಯಾಂಕಿಂಗ್ ಸೇವೆಯಲ್ಲಿ ಹೊಸ ಆವಿಷ್ಕಾರ

ಹಲವಾರು ವಿನೂತನ ಯೋಜನೆಗಳ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕ್‌ನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೇಯಸ್ಸು ರಾಜೇಂದ್ರ ಕುಮಾರ್ ಅವರದ್ದಾಗಿದೆ. ಸಹಕಾರಿ ರಂಗದಲ್ಲಿ ಹೊಸ ಹೊಸ ಅವಿಷ್ಕಾರ ದೊಂದಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಾ ,  ಎಸ್‌ಸಿಡಿಸಿಸಿ ಬ್ಯಾಂಕ್‌ನ್ನು ಜನಸಾಮಾನ್ಯರ ಬ್ಯಾಂಕನ್ನಾಗಿ ರೂಪಿಸುವ ಮೂಲಕ ಸಹಕಾರಿ ರಂಗಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿದ್ದಾರೆ. ಕೋರ್ ಬ್ಯಾಂಕಿಂಗ್‌ ನಂತಹ ಉತ್ಕೃಷ್ಟ ತಂತ್ರಜ್ಞಾನವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ಶ್ರೇಯಸ್ಸು ಇವರದ್ದಾಗಿದೆ. ಮೊಬೈಲ್ ಬ್ಯಾಂಕ್‌ನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ  ಪರಿಚಯಿಸಿದ ಹೆಗ್ಗಳಿಕೆ ಕೂಡ ಇವರದ್ದು.

ಪ್ರಶಸ್ತಿಗಳ ಸರಮಾಲೆ

ರಾಜೇಂದ್ರ ಕುಮಾರ್ ಅಧ್ಯಕ್ಷ ಬಳಿಕ ಎಸ್‌ಸಿಡಿಸಿಸಿ ಬ್ಯಾಂಕಿಗೆ ೧೯ನೆ ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಹಾಗೂ ೧೮ ಬಾರಿ ನಬಾರ್ಡ್ ಪ್ರಶಸ್ತಿ, ೨ ಬಾರಿ ಬ್ಯಾಂಕಿಂಗ್ ಪ್ರೊಂಟಿಯರ್ಸ್ ಪ್ರಶಸ್ತಿ ಹಾಗೂ ೨ ಬಾರಿ ಬ್ಯಾಂಕೊ ಬ್ಲೂ ರಿಬ್ಬನ್ ಪ್ರಶಸ್ತಿ ಕೂಡ ಲಭಿಸಿದೆ. ಮಾತ್ರವಲ್ಲ  ಇವರ ಸಾಮಾಜಿಕ ಸ್ಪಂದನೆಯ ಕಾರ್ಯಗಳನ್ನು ಪರಿಗಣಿಸಿ ಇವರಿಗೆ ಹಲವಾರು ರಾಷ್ಟ್ರೀಯ - ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ಮುಖ್ಯವಾಗಿ ಶ್ರೀಲಂಕಾದ ಕೊಲಂಬೊ ಮುಕ್ತ ವಿಶ್ವವಿದ್ಯಾಲಯ ಱಗೌರವ ಡಾಕ್ಟರೇಟ್’ ಪದವಿ, ಕರ್ನಾಟಕ ಸರಕಾರದಿಂದ ಸಹಕಾರ ರತ್ನ’ ಪ್ರಶಸ್ತಿಯೂ ಲಭಿಸಿದೆ.

ಅಲ್ಲದೆ ʼಸಹಕಾರ ವಿಶ್ವ ಬಂಧುಶ್ರೀ’, ’ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ’, ’ಮಹಾತ್ಮಾ ಗಾಂಧಿ ಸಮ್ಮಾನ್ ಪ್ರಶಸ್ತಿ’, ಬೆಸ್ಟ್ ಚೇರ್ ಮೆನ್ ನ್ಯಾಷನಲ್ ಅವಾರ್ಡ್’, ’ನ್ಯಾಷನಲ್ ಎಕ್ಸ್‌ಲೆನ್ಸ್ ಅವಾರ್ಡ್’, ’ ಔಟ್ ಸ್ಟೆಂಡಿಂಗ್ ಗ್ಲೋಬಲ್ ಲೀಡರ್ ಶಿಪ್ ಅವಾರ್ಡ್ -೨೦೧೯ ’ , ’ ಬಹು ಪ್ರಭಾವಶಾಲಿ ಸಹಕಾರ ನಾಯಕ -೨೦೧೯ರ ಪ್ರಶಸ್ತಿ ಇಂಟರ್ ನ್ಯಾಷನಲ್ ಐಕಾನ್ ಅವಾರ್ಡ್ - ೨೦೨೧’  ದಿ ನ್ಯೂಸ್ ಪೇಪರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ ನೀಡಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಸಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News