ಮಳೆ ಹಾನಿ ವೀಕ್ಷಣೆ ನೆಪದಲ್ಲಿ ಫೋಟೊ ಶೂಟ್ ಬೇಡ: ಮಾಜಿ ಸಿಎಂ ಕುಮಾರಸ್ವಾಮಿ

Update: 2022-05-21 11:05 GMT

ಬೆಂಗಳೂರು: ಫೋಟೊ ಶೂಟ್ ಗೆ ಬಂದು ಹೋಗುವುದು ಬೇಡ, ಮಳೆಹಾನಿ ಪ್ರದೇಶಗಳಲ್ಲಿ ಪರಿಹಾರ ಕೊಡುವು ದಕ್ಕೆ ಮಾಹಿತಿಯನ್ನೇ ಇದುವರೆಗೂ ಸರಕಾರ ತೆಗೆದುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ದೂರಿದರು.

ಬ್ಯಾಟರಾಯನಪುರ ಕ್ಷೇತ್ರದ ನಾಗವಾರ ರಿಂಗ್ ರೋಡ್ ಜಂಕ್ಷನ್, ಥಣಿಸಂದ್ರ, ಹೆಬ್ಬಾಳ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಲ್ಲಿ ಇಂದು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಲ್ಲಿ ಏಳು ಜನರು ಮಂತ್ರಿ ಇದ್ದರೂ ಏನು ಪ್ರಯೋಜನ ಹೇಳಿ?  ಸರ್ಕಾರ ಹಾಗೂ ಕಾರ್ಪೊರೇಷನ್ ನಲ್ಲಿ ಹಣದ ಕೊರತೆ ಇಲ್ಲ. ಆದರೆ, ಹಣ ಲೂಟಿಯಾಗುತ್ತಿದೆ ಅಷ್ಟೇ ಎಂದು ಆರೋಪಿಸಿದರು.

ಕಾಮಗಾರಿ ನೋಡಿದರೆ ಅದು ಗುಣಾತ್ಮಕವಾಗಿ ಆಗಿಲ್ಲ ಅನ್ನಿಸುತ್ತದೆ. ರಾಜಕಾರಣದಲ್ಲಿ ಶ್ರೀಮಂತಿಕೆ ಇರುವವರು ಇದ್ದಾರೆ. ಆ ರಾಜಕಾರಣಿಯಿಂದ ಜನರು ಸಮಸ್ಯೆ ಎದುರಿಸುತ್ತಾರೆ ಎಂದು ದೂರು ಬಂದಿವೆ. ಪ್ರಮುಖ ಮತ್ತು ಪ್ರಭಾವೀ ರಾಜಕಾರಣಿಗಳು ಈ ಜಾಗದಲ್ಲಿ ಕಾಂಪೌಂಡ್ ಹಾಕಿದ್ದೇ ವಸತಿ ಸಮುಚ್ಚಯಕ್ಕೆ ನೀರು ನುಗ್ಗಲು ಕಾರಣ. ಅವರು ತಮ್ಮ ಹಿತ ರಕ್ಷಣೆ ಮಾಡಿಕೊಳ್ಳುವ ಕಾರಣಕ್ಕೆ ಸಾಮಾನ್ಯ ಜನರಿಗೆ ಕಷ್ಟವಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ದೂರಿದರು.

ಜನರು ಸಾಲ  ಮಾಡಿ ಇಲ್ಲಿ ಪ್ಲ್ಯಾಟ್ ಖರೀದಿಸಿ ವಾಸ ಮಾಡ್ತಿದ್ದಾರೆ. ಅಧಿಕಾರಿಗಳು ಅನುಮತಿ, ಕೊಡುವ ಮೊದಲೇ ಯೋಚನೆ ಮಾಡಬೇಕಿತ್ತು. ಹವಾಮಾನ ಇಲಾಖೆ ಮಳೆ ಜೋರಾಗಿ ಬರುತ್ತದೆ ಅಂದಾಗ ಅಧಿಕಾರಿಗಳು ಮಳೆ ಬರಲ್ಲ ಎಂದು ನಿರ್ಲಕ್ಷ್ಯ ಮಾಡಿದರು. ಯಾವೆಲ್ಲಾ ಭಾಗದಲ್ಲಿ ನೀರು ನಿಲ್ಲುವ ಸ್ಥಳ ಗುರುತಿಸಿ ಪರಿಹಾರ ನೀಡಬೇಕು. ಮೊದಲು ಫೆಬ್ರವರಿಯಲ್ಲಿ ‌ಬರುವ ಮಳೆಗೆ ಬಹಳಷ್ಟು ತೊಂದರೆ ಆಗ್ತಿತ್ತು. ಸರ್ಕಾರ ತಾತ್ಕಾಲಿಕವಾಗಿ ಮಳೆ‌‌ ನುಗ್ಗದ ಹಾಗೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿಗೆ ಹೊಟ್ಟೆ ಉರಿ

ಬಿಜೆಪಿಯವರಿಗೆ ಹೊಟ್ಟೆ ಹುರಿ ಶುರುವಾಗಿರಬೇಕು. ಹಣ, ಅಧಿಕಾರದ ಮತ್ತಲ್ಲಿ ತೇಲಾಡುತ್ತಿದ್ದಿರಾ? ಪ್ರಧಾನಿ ನರೇಂದ್ರ ಮೋದಿ ನೋಡಿ ಮತ ತಂದು ಕೊಡುತ್ತಾರೆ ಅಂದುಕೊಂಡರೆ ಅದು ಸುಳ್ಳು. ಇಡೀ ಬೆಂಗಳೂರನ್ನು ಆವರಿಸಿಕೊಳ್ಳುತ್ತಿರಾ ಅಂದರೆ ಅದೂ ಸುಳ್ಳು. ಬನ್ನಿ ಜನರ  ಕಥೆ ನೋಡಿ, ಅಭಿವೃದ್ಧಿ ಹೆಸರಲ್ಲಿ ತಿಂದಿದ್ದು ಸಾಕು ಎಂದು ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದರು ಕುಮಾರಸ್ವಾಮಿ.

ರಾಜಕಾಲುವೆಗೆ ಹಣ ಕೊಡುತ್ತೇವೆಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರಲ್ಲಾ, ಅದನ್ನಾದರೂ ಸರಿಯಾಗಿ ಉಪಯೋಗಿಸಿಕೊಳ್ಳಿ  ಎಂದು ಬಿಜೆಪಿ ಸಚಿವರಿಗೆ ಸಲಹೆ ನೀಡಿದರು.

ಬೆಂಗಳೂರು ನಗರ ಜನತೆಗೆ ಹೊಸ ಪ್ರಣಾಳಿಕೆ ಅಂತ ಕಾಂಗ್ರೆಸ್ ಹೇಳುತ್ತೆ. ಐದು ವರ್ಷ ಹಾಗಾದ್ರೆ ಏನು ಮಾಡಿದ್ರಿ. ನಾನು ಐದು ಟೌನ್ ಶಿಪ್ ಮಾಡಲು ನೀಲಿ ನಕ್ಷೆ ತಯಾರು ಮಾಡಿದ್ದೆ. ನೀವು ಯಾರಾದರು ಸಹಕಾರ ಕೊಟ್ಟಿರಾ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಕೊರಿಯನ್ ಕಂಪನಿ ಬಂದಿತ್ತು ಇದಕ್ಕೆ. ಆದರೆ ಕ್ಲಿಯರೆನ್ಸ್ ಕೊಡಲು ಮುಂದಾಗಿದ್ದೆ. ಬಿಜೆಪಿ ಸರ್ಕಾರ ಏನು ಮಾಡಿತು. ನಮ್ಮ ಬಗ್ಗೆ ಚರ್ಚೆ ಮಾಡ್ತೀರಾ?. ಕೆರೆ ಕಟ್ಟೆ ನುಂಗಿರುವವರು ನೀವು. ಇದರ ಬಗ್ಗೆ ಜನ ಹೇಳುತ್ತಿದ್ದಾರೆ. ಒಂದು ಕಾಂಪೌಂಡ್ ತೆಗೆಸಲು ಯೋಗ್ಯತೆ ಇದೆಯೇ? ಕಾಟಾಚಾರಕ್ಕೆ ನಾನು ಪ್ರದಕ್ಷಿಣೆ ಹಾಕುತ್ತಿಲ್ಲ. ಜನ ತೀರ್ಮಾನ ಮಾಡುತ್ತಾರೆ ಎಂದರು.

1994 ರಲ್ಲಿ ದೇವೇಗೌಡರು ಸಿಎಂ ಆದಾಗ ಏಳು ನಗರ ಸಭೆ, ಪಟ್ಟಣ ಪಂಚಾಯ್ತು ಆಯ್ತು. ದೊಡ್ಡ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದ್ದಾಗ ಮೂಲಭೂತ ಸೌಲಭ್ಯ ಇರಲಿಲ್ಲ.

ಆಗ ದೇವೇಗೌಡರು 97 ವಾರ್ಡ್ ಮಾಡಿ ಏಳು ನಗರ ಸಭೆ, ಒಂದು ಪಟ್ಟಣ ಪಂಚಾಯ್ತಿ ಮಾಡಿದರು. ನಗರ ಸಭೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ರು. ಬೇರೆ ಬೇರೆ ಹಳ್ಳಿಯಿಂದ ಬಂದ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿದರು ಎಂದು ಅವರು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ಟಿ ಎ ಶರವಣ, ರಮೇಶ್ ಗೌಡ, ಜೆಡಿಎಸ್ ನಗರ ಅಧ್ಯಕ್ಷ ಆರ್ ಪ್ರಕಾಶ್ ಮುಂತಾದವರು ಮಾಜಿ ಮುಖ್ಯಮಂತ್ರಿಗಳ ಜತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News