ದ.ಕ.ಜಿಲ್ಲೆಯಲ್ಲಿ ಮತ್ತೆ ಬಿರುಸು ಪಡೆದ ಮಳೆ

Update: 2022-05-22 16:54 GMT

ಮಂಗಳೂರು : ದ.ಕ. ಜಿಲ್ಲೆಯಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಮಳೆ ಮತ್ತೆ ಬಿರುಸು ಪಡೆದು ಕೊಂಡಿದೆ. ಮೋಡ ಕವಿದ ವಾತಾವರಣದೊಂದಿಗೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಮುಂಜಾನೆ ಮೋಡದ ವಾತಾವರಣವಿತ್ತು, ಬಳಿಕಕೆಲಕಾಲ ಬಿಸಿಲು ಕಾಣಿಸಿತು. ನಂತರ ದಟ್ಟ ಮೋಡ ಕವಿಯಲು ಆರಂಭವಾಗಿ ಮಧ್ಯಾಹ್ನದ ಬಳಿಕ ಬಿರುಸಿನ ಮಳೆಯಾಗಿದೆ.

ಮಧ್ಯಾಹ್ನ ಸುಮಾರು ೧ರಿಂದ ೩ ಗಂಟೆಯ ಮಧ್ಯೆ ಸುರಿದ ಭಾರಿ ಮಳೆಗೆ ನಗರದ ವಿವಿಧೆಡೆ ರಸ್ತೆಗಳಲ್ಲಿ ತೋಡಿನಂತೆ ನೀರು ಹರಿದಿದೆ. ರಾಜಕಾಲುವೆಗಳ್ಲಲಿಯೂ ಭಾರೀ ಪ್ರಮಾಣದಲ್ಲಿ ನೀರು ಹರಿದಿದೆ. ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಮತ್ತಿತರ ಕಡೆಗಳಲ್ಲಿ  ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ರಸ್ತೆಯಲ್ಲೇ ನೀರು ಸಂಗ್ರಹಗೊಂಡಿವೆ. ಕೆಲವು ಅಂಗಡಿಯೊಳಗೂ ನೀರು ನುಗ್ಗಿವೆ. ನಗರದ ಅತ್ತಾವರ ಕೆಎಂಸಿ ಆಸ್ಪತ್ರೆಯ ಆವರಣದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು  ಆಸ್ಪತ್ರೆಗೆ ಬರುವವರು, ಹೋಗುವವರು ಮತ್ತು ಆ್ಯಂಬುಲೆನ್ಸ್ ಸಹಿತ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಫೋರ್ಥ್ ಮೈಲ್ ರಾಜಕಾಲುವೆ ಕಾಮಗಾರಿ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಕೊಟ್ಟಾರ ಚೌಕಿ ಬಳಿಯೂ ನೀರು ತುಂಬಿತ್ತು. ಮಾಹಾಕಾಳಿ ಪಡ್ಪುವಿನಿಂದ ಜಪ್ಪಿನಮೊಗರು ಕಡೆಗೆ ಸಾಗುವ ರಸ್ತೆಯಲ್ಲಿ ಸುಮಾರು ಒಂದುವರೆ ಅಡಿಗೂ ಹೆಚ್ಚು ನೀರು ಸಂಗ್ರಹಗೊಂಡಿತ್ತು. ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ ಅಮ್ಟಾಡಿಯಲ್ಲಿ ಅತ್ಯಧಿಕ ೭೬.೫ ಮಿ.ಮೀ. ಮಳೆಯಾಗಿದೆ. ಇಡ್ಕಿದು ೬೩,  ಕೆದಿಲ ೫೨, ಕೇಪು ೫೦, ಉಳಿ ೪೮ ಮಿ.ಮೀ. ಸಹಿತ ಸುಳ್ಯದ ಬಾಳಿಲ, ಪುತ್ತೂರಿನ ಮುಡ್ನೂರು, ನೆಕ್ಕಿಲಾಡಿ, ಬಲ್ನಾಡು, ಉಳ್ಳಾಲದ ತಲಪಾಡಿ, ಕೊಣಾಜೆ, ಪಾವೂರು, ದೇರಳಕಟ್ಟೆ ಮತ್ತಿತರ ಭಾರೀ ಮಳೆಯಾಗಿದೆ.

ಸೋಮವಾರಕ್ಕೆ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೊಷಿಸಲಾಗಿದ್ದು, ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಅರಬ್ಬಿ ಸಮುದ್ರಲ್ಲಿ ಗಂಟೆಗೆ  ೪೦ರಿಂದ ೫೦ ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರಿಕೆ ನಡೆಸದಂತೆ ಸೂಚನೆ ನಿಡಲಾಗಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ ೨೭.೪ ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ ೨೩.೬ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News