ಮಂಗಳೂರು | ಮೊಗೇರ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ: ಬೀದಿಗಿಳಿದ ದಲಿತರು
ಮಂಗಳೂರು, ಮೇ 23: ಪರಿಶಿಷ್ಟ ಜಾತಿಗೆ ಸೇರಿದ ಮೊಗೇರರಿಗೆ ನೀಡಲಾಗುವ ಜಾತಿ ಪ್ರಮಾಣ ಪತ್ರವನ್ನು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಪಡೆದುಕೊಂಡು ಮೀಸಲಾತಿ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ವಿರೋಧಿಸಿ ಮಂಗಳೂರಿನಲ್ಲಿ ದಲಿತರು ಬೀದಿಗಿಳಿದು ಪ್ರತಿಭಟಿಸಿದರು.
ರ್ಯಾಲಿ, ಜನಾಗ್ರಹ ಸಭೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ದಲಿತರು ಕೈಯಲ್ಲಿ ನೀಲಿ ಪತಾಕೆಯೊಂದಿಗೆ 'ಜೈ ಭೀಮ್' ಘೋಷಣೆಗಳನ್ನು ಕೂಗಿದರು.
ನಗರದ ಬಲ್ಮಠದ ಶಾಂತಿ ನಿಲಯ ಸಮೀಪದ ಮೈದಾನದಿಂದ ಹೊರಟ ಮೆರವಣಿಗೆಯು ಕ್ಲಾಕ್ ಟವರ್ ಎದುರು ಸಮಾವೇಶಗೊಂಡಿತು. ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಜ್ಯ ಪರಿಶಿಷ್ಟ ಜಾತಿ ಅಧ್ಯಯನ ಸಮಿತಿಯ ಸಂಚಾಲಕ ಸುಭಾಷ್ ಕಾನಡೆ, ಮೂಲತ: ಮೊಲ ಬೇಟೆಯಾಡುವ ಸಮುದಾಯವಾದ ಪರಿಶಿಷ್ಟ ಜಾತಿಗೆ ಸೇರಿದ ಮೊಗೇರರ ಪದನಾಮ ಬಳಸಿ 1977ರಿಂದ 2010ರವರೆಗೆ ಮೀನುಗಾರ ಸಮುದಾಯದವರು ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ 2004-05ರಲ್ಲಿ ಅಧಿಕಾರದಲ್ಲಿದದ ಸರಕಾರಕ್ಕೆ ಮನವಿ ಸಲ್ಲಿಸಿದಾಗ ಕುಲಶಾಸ್ತ್ರೀಯ ಅಧ್ಯಯನಕ್ಕೆ ನಿರ್ಣಯಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ತಡೆಗೆ ಕ್ರಮ ವಹಿಸಲಾಗಿತ್ತು. ಆದರೆ ಇಂದಿಗೂ ನಕಲಿ ಜಾತಿ ಪ್ರಮಾಣ ಪತ್ರ ಬಳಸಿಕೊಂಡು ಸೌಲಭ್ಯವನ್ನು ಪಡೆಯುತ್ತಿರುವವರು ಮುಂದುವರಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲೂ ಉನ್ನತ ವ್ಯಾಸಂಗಕ್ಕಾಗಿ ಮೊಗೇರ ಜಾತಿ ಪ್ರಮಾಣವನ್ನು ಇತರ ಸಮುದಾಯದವರು ದುರುಪಯೋಗಪಡಿಸುತ್ತಿರುವ ಸಾಧ್ಯತೆ ಇದ್ದು, ಸಮುದಾಯದವರು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಪ್ರವರ್ಗ- 1ರಲ್ಲಿರುವ ಮೀನುಗಾರ ಸಮುದಾಯದವರು ನಕಲಿ ದಾಖಲೆ ಸೃಷ್ಟಿಸಿ ಪರಿಶಿಷ್ಟ ಜಾತಿಯ ಮೊಗೇರರ ಸವಲತ್ತುಗಳನ್ನು ಪಡೆಯುವ ಮೂಲಕ ಸಾಂವಿಧಾನಿಕ ಮೀಸಲಾತಿ ಹಕ್ಕನ್ನು ಕಸಿದು ಅನ್ಯಾಯವೆಸಗಿದ್ದಾರೆ. ಕೇವಲ ಮೊಗೇರ ಮಾತ್ರವಲ್ಲದೆ, ಪರಿಶಿಷ್ಟ ಜಾತಿಯ ಇತರ 101 ಜಾತಿಗಳಿಗೂ ರಾಜಕೀಯ, ಉದ್ಯೋಗ, ಶಿಕ್ಷಣ, ಸಾಮಾಜಿಕ ಸೌಲಭ್ಯದಿಂದ ವಂಚನೆಯಾಗುತ್ತಿದ್ದು, ಈ ಬಗ್ಗೆ ದಲಿತರು ಗಮನ ಹರಿಸಬೇಕಾಗಿದೆ ಎಂದು ದಲಿತ ಮುಖಂಡ ಅಶೋಕ್ ಕೊಂಚಾಡಿ ಹೇಳಿದರು.
ಬಲ್ಮಠದ ಶಾಂತಿ ನಿಲಯದ ಮೈದಾನದ ಹೊರಟ ಸಾವಿರಾರು ಸಂಖ್ಯೆಯ ದಲಿತರ ಮೆರವಣಿಗೆಯನ್ನು ಮೊಗೇರ ಸಂಘದ ಹಿರಿಯ ಮುಖಂಡ ಮೋಹನ್ದಾಸ್ ಸುಳ್ಯ ದುಡಿಯನ್ನು ಬಾರಿಸುವ ಮೂಲಕ ಚಾಲನೆ ನೀಡಿದರು.
ನಗರದ ಕ್ಲಾಕ್ ಟವರ್ ಬಳಿ ನಡೆದ ಜನಾಗ್ರಹ ಸಮಾವೇಶಕ್ಕೆ ಮೊಗೇರ ಸಂಘದ ರಾಜ್ಯ ಅಧ್ಯಕ್ಷ ವಿಶ್ವನಾಥ್ ಉಪಸ್ಥಿತಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಯೊಂದಿಗೆ ಚಾಲನೆ ನೀಡಲಾಯಿತು.
ಮೊಗೇರ ಸಂಘದ ಗೌರವಾಧ್ಯಕ್ಷ ಸುಂದರ ಮೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಭಟನೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಸೀತಾರಾಮ ಕೊಂಚಾಡಿ, ರಘು ಬೆಳ್ಳಿಪಾಡಿ, ರಮೇಶ್ ಕೋಟ್ಯಾನ್, ಜಗದೀಶ್ ಪಾಂಡೇಶ್ವರ್, ಚಂದ್ರ ಕುಮಾರ್, ಪದ್ಮನಾಭ ನರಿಂಗಾನ, ಇನ್ನಿತರರು ಭಾಗವಹಿಸಿದ್ದರು.
ಶಿಕ್ಷಣ, ಸಾಲ ಸೌಲಭ್ಯದಂತೆ, ಮೀಸಲಾತಿ ಕ್ಷೇತ್ರದಿಂದ ಸ್ಪರ್ಧಿಸುವವರಿಗೂ ಸಿಂಧುತ್ವ ಅಗತ್ಯವಾಗಿ ದೊರೆಯಬೇಕು. 1977ರಿಂದ ಮೊಗೇರ ಪದನಾಮದಲ್ಲಿ ಇತರ ಸಮುದಾಯದವರು ಪಡೆದ ನಕಲಿ ಜಾತಿ ಪ್ರಮಾಣ ಪತ್ರ ರದ್ದಾಗಬೇಕು. ಪ್ರಸ್ತುತ ಕಂಪ್ಯೂಟರೀಕೃತ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, 1977ರಿಂದ 2010ರವರೆಗೆ ಕೈಬರಹದ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ಅದನ್ನು ಸಾರಾಸಗಟಾಗಿ ರದ್ದುಪಡಿಸಬೇಕು.ವಿವಿಧ ಸೌಲಭ್ಯ, ಹುದ್ದೆಗಳಿಗಾಗಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಸೌಲಭ್ಯ ಪಡೆದವರನ್ನು ವಿಶೇಷ ಆಯೋಗ ರಚನೆ ಮಾಡಿ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು.
-ಸುಭಾಷ್ ಕಾನಡೆ,
ರಾಜ್ಯ ಪರಿಶಿಷ್ಟ ಜಾತಿ ಅಧ್ಯಯನ ಸಮಿತಿಯ ಸಂಚಾಲಕ