ಗಿಡ ನೆಡುವುದರ ಜೊತೆಗೆ ಸಂರಕ್ಷಿಸಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು, ಮೇ 24: ಪ್ರಸ್ತುತ ದಿನಗಳಲ್ಲಿ ಭೂಮಿ ಮೇಲಿನ ತಾಪಮಾನ ಹೆಚ್ಚಾಗುತ್ತಿದ್ದು, ನೈಸರ್ಗಿಕ ಸಂಪನ್ಮೂಲದ ಮೇಲೆ ಇದು ಪರಿಣಾಮ ಬೀರುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಮರ ಮತ್ತು ಜಲ ಸಂರಕ್ಷಣೆಗೆ ಮುಂದಾಗುವ ಮೂಲಕ ಪರಿಸರ ಕಾಪಾಡಿಕೊಳ್ಳಬೇಕು' ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.
ಮಂಗಳವಾರ ಗೊಟ್ಟಿಗೆರೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಆಯೋಜಿಸಿದ್ದ 75ನೆ ಸ್ವಾತಂತ್ರ್ಯ ಅಮೃತ ಮಹೋತ್ಸವದಿಂದ ಸುವರ್ಣ ಭಾರತದತ್ತ ಹೆಜ್ಜೆಯಾಗಿ ಬ್ರಹ್ಮಕುಮಾರಿಯರ ರಾಷ್ಟ್ರೀಯ ಕಲ್ಪತರು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಸುಸ್ಥಿರ ಕೃಷಿ, ನೀರಿನ ಸಂಸ್ಕರಣೆ, ಮರ ನೆಡುವಿಕೆ, ಸರಳ ಮತ್ತು ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವುದು ಸೇರಿದಂತೆ ಬ್ರಹ್ಮ ಕುಮಾರಿಯರು ಕಲ್ಪತರು ಎಂಬ ಪ್ರಮುಖ ಮರ ನೆಡುವ ಯೋಜನೆ ಪ್ರಾರಂಭಿಸಿದ್ದಾರೆ, ಇದು ವ್ಯಕ್ತಿಗಳು ತಮ್ಮ ಪರಿಸರದ ಜವಾಬ್ದಾರಿ ಅರ್ಥಮಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದರು.
ಗಿಡಗಳನ್ನು ನೆಡುವುದರ ಜೊತೆಗೆ ಸಂರಕ್ಷಣೆ ಮಾಡಬೇಕು. ಅಲ್ಲದೇ ಪ್ರತಿಯೊಬ್ಬರು ನೀರಿನ ಮಹತ್ವವನ್ನು ಅರಿತು ಹಿತಮಿತವಾಗಿ ಬಳಸಬೇಕು. ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಬ್ರಹ್ಮ ಕುಮಾರೀಸ್ ವಿಶ್ವಾದ್ಯಂತ ಆಧ್ಯಾತ್ಮಿಕ ಸಂಸ್ಥೆಯಾಗಿದ್ದು, ವೈಯಕ್ತಿಕ ರೂಪಾಂತರ ಮತ್ತು ವಿಶ್ವ ನವೀಕರಣಕ್ಕೆ ಮೀಸಲಾಗಿದೆ. ಇವರ ನಿಜವಾದ ಬದ್ಧತೆಯು ಭೌತಿಕದಿಂದ ಆಧ್ಯಾತ್ಮಿಕವಾಗಿ ತನ್ನ ದೃಷ್ಟಿಕೋನದಲ್ಲಿ ಬದಲಾವಣೆಯನ್ನು ಮಾಡಲು ವ್ಯಕ್ತಿಯನ್ನು ಪ್ರೇರೇಪಿಸುತ್ತದೆ. ಪ್ರತಿ ಆತ್ಮವು ಶಾಂತಿ ಮತ್ತು ವೈಯಕ್ತಿಕ ಘನತೆಯ ಆಳವಾದ ಸಾಮೂಹಿಕ ಪ್ರಜ್ಞೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಬ್ರಹ್ಮಾಕುಮಾರೀಸ್ ಮಹಿಳೆಯರಿಂದ ನಡೆಸಲ್ಪಡುವ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಂಸ್ಥೆಯಾಗಿದೆ. ಈ ಸಂಸ್ಥೆಯ ಸಂಸ್ಥಾಪಕರಾದ ಪ್ರಜಾಪಿತ ಬ್ರಹ್ಮ ಬಾಬಾ ಅವರು ಮೊದಲಿನಿಂದಲೂ ತಾಯಂದಿರು ಮತ್ತು ಸಹೋದರಿಯರನ್ನು ಮುಂಚೂಣಿಯಲ್ಲಿರಿಸಲು ನಿರ್ಧರಿಸಿದರು ಮತ್ತು ಇದರಿಂದಾಗಿ ಬ್ರಹ್ಮಕುಮಾರಿಯರು ವಿಶ್ವದ ಇತರ ಎಲ್ಲಾ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಬ್ರಹ್ಮಕುಮಾರಿಯವರ ಧೈರ್ಯ, ಕ್ಷಮಿಸುವ ಸಾಮಥ್ರ್ಯ ಮತ್ತು ಏಕತೆಗೆ ಅವರ ಆಳವಾದ ಬದ್ಧತೆಯನ್ನು ಸತತವಾಗಿ ಸಾಬೀತುಪಡಿಸಿದೆ. ಬ್ರಹ್ಮಬಾಬಾ ಕಲಿಸಿದ ಜೀವನ ಕೌಶಲ್ಯಗಳು ಸಮಯದ ಪರೀಕ್ಷೆಯಾಗಿ ನಿಂತಿವೆ. ಅವರು ಮುಂಚೂಣಿಯಲ್ಲಿಟ್ಟ ಯುವ ಸಹೋದರಿಯರು ಈಗ ತಮ್ಮ 80-90 ವರ್ಷಗಳಲ್ಲಿ ಶಾಂತಿ, ಪ್ರೀತಿ ಮತ್ತು ಜ್ಞಾನದ ಜ್ಯೋತಿಯಾಗಿ ಮುನ್ನಡೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.
ಬ್ರಹ್ಮಕುಮಾರಿಗಳ ಜಂಟಿ ಮುಖ್ಯಸ್ಥ ಡಾ.ನಿರ್ಮಲಾ, ಮೌಂಟ್ ಅಬುವಿನ ಬ್ರಹ್ಮಕುಮಾರಿಗಳ ಕಾರ್ಯನಿರ್ವಾಹಕ ಕಾರ್ಯದರ್ಶಿ ರಾಜಯೋಗಿ ಡಾ.ಮೃತ್ಯುಂಜಯ್, ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜಯೋಗಿನಿ ಬ್ರಹ್ಮಕುಮಾರಿ ಅಂಬಿಕಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.