ಬಿಜೆಪಿ '1991ರ ಪೂಜಾ ಸ್ಥಳಗಳ ಕಾಯ್ದೆ' ವಿರುದ್ಧ ಕೆಲಸ ಮಾಡುತ್ತಿದೆ: ಬಿ.ಕೆ.ಹರಿಪ್ರಸಾದ್

Update: 2022-05-27 09:37 GMT

ಬೆಂಗಳೂರು, ಮೇ 27: '1991ರ ಪೂಜಾ ಸ್ಥಳಗಳ ಕಾಯ್ದೆ’ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ‘ಧಾರ್ಮಿಕ ಸ್ವರೂಪ'ವನ್ನು ಬದಲಿಸುವಂತಿಲ್ಲ. ಅಂದರೆ ದೇಶದ ಸ್ವಾತಂತ್ರ್ಯ ಬಂದ ದಿನ, ಅಂದರೆ 1947ರ ಆಗಸ್ಟ್‌ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರಿಯಬೇಕು. 1990ರಲ್ಲಿ ಸಂಸತ್ತಿನಲ್ಲಿ ಚರ್ಚೆ ನಡೆಸಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ ಈ ಕಾನೂನಿನ ವಿರುದ್ಧ ಬಿಜೆಪಿ ಇಂದು ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಪಂಡಿತ್ ಜವಹರಲಾಲ್ ನೆಹರೂ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಸಂವಿಧಾನ ವಿರೋಧಿಗಳು,ಪ್ರಜಾಪ್ರಭುತ್ವ ವಿರೋಧಿಗಳು ಈಗ ಆಡಳಿತ ನಡೆಸುತ್ತಿದ್ದಾರೆ. ಜಗಳ, ಹೊಡೆದಾಟ, ದ್ವೇಷದಿಂದ ಇತಿಹಾಸ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಸೇಡಿನ ಭಾವನೆಯಿಂದ ಇತಿಹಾಸ ಮರಳಿಸಬಾರದು. ದ್ವೇಷ ರಾಜಕೀಯದ ವಿರುದ್ಧ, ಪಂಡಿತ್ ನೆಹರೂ ಅವರು ಕಟ್ಟಿದ ಸೌಹಾರ್ದದ ಆಲೋಚನೆಯ ಪರವಾಗಿ ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮನನ ಮಾಡಿಕೊಳ್ಳಬೇಕಿದೆ. ಈ ದೇಶದ ಬಹುತ್ವದ ಆಶಯವನ್ನು ಉಳಿಸಬೇಕಿದೆ ಎಂದವರು ಕರೆ ನೀಡಿದರು.

ಗಾಂಧೀಜಿಯವರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದ್ದವರು ಪಂಡಿತ್ ನೆಹರೂ ಅವರು. ಸ್ವಾತಂತ್ರಕ್ಕಾಗಿ ಒಂಬತ್ತು ವರ್ಷಗಳ ಕಾಲ ಜೈಲುವಾಸ ಅನುಭವಿಸಿದವರೇ ಹೊರತು, ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದವರಲ್ಲ. ಮೂಢನಂಬಿಕೆಯ ವಿರುದ್ಧ ನವ ಭಾರತವನ್ನ ಕಟ್ಟಲು ಶ್ರಮಿಸಿದರು. ಹದಿನೇಳು ವರ್ಷಗಳ ಕಾಲ ಭಾರತವನ್ನ ಮುನ್ನೆಡೆಸಿದ ಫಲವಾಗಿ ಇಂದು ದೇಶದ ಶೈಕ್ಷಣಿಕ, ತಾಂತ್ರಿಕ, ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತ ಮುನ್ನಡೆ ಸಾಧಿಸಲು ಸಾಧ್ಯವಾಗಿದೆ ಎಂದರು.

ನೆಹರೂ ಅವರು ಬಡತನ ನಿರ್ಮೂಲನೆ ಹಾಗೂ ಆರೋಗ್ಯ ಕ್ಷೇತ್ರದ ಉತ್ತೇಜನಕ್ಕೆ ಹೆಚ್ಚು ಒತ್ತು ನೀಡಿದರು. ಸೋಮನಾಥ್ ದೇವಾಲಯ ಕಟ್ಟಲು ನೆಹರೂ ಅವ್ರು ಬೆಂಬಲ ನೀಡಲಿಲ್ಲ ಎಂಬ ಆರೋಪವಿರಬಹುದು, ಆದ್ರೆ ಸ್ವಾತಂತ್ರ್ಯ ನಂತರದ ಭಾರತಕ್ಕೆ ಅಭಿವೃದ್ಧಿ ಮಾಡಲು ದೇವಸ್ಥಾನ, ಮಸೀದಿ, ಚರ್ಚು ಧಾರ್ಮಿಕ ಸ್ಥಳಗಳನ್ನ ಕಟ್ಟುವ ಬದಲಾಗಿ, ಆಸ್ಪತ್ರೆ, ಆಣೆಕಟ್ಟು, ಶಾಲೆಗಳನ್ನ ಕಟ್ಟಲು ಶ್ರಮಿಸಿದರು. ನಿರುದ್ಯೋಗವನ್ನ ಹೋಗಲಾಡಿಸಲು ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆಗಳನ್ನ ಕಟ್ಟಿದರು.

ತಮ್ಮ ಆಡಳಿತದಲ್ಲಿ ಧರ್ಮನಿರಪೇಕ್ಷಿತವಾಗಿ ಬದುಕಿದವರು, ಧರ್ಮ ಖಾಸಗಿಯಾದದ್ದು, ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ನಡೆಯಬೇಕು ಎಂದು ಸಾರಿದವರು. ದೇಶದಲ್ಲಿರುವ ಏಳು ಧರ್ಮಗಳು, ಸಾವಿರಾರು ಭಾಷೆಗಳಿಗೆ ಉತ್ತೇಜನ ನೀಡಿ ವೈವಿಧ್ಯತೆಯಲ್ಲಿ ಏಕತೆಯನ್ನ ಕಂಡರು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಸಂವಿಧಾನ ಅಳವಡಿಸಿಕೊಂಡವರು ಪಂಡಿತ್ ನೆಹರೂ.

ಭಾರತಕ್ಕೆ 1947ರಲ್ಲಿ ಸ್ವಾತಂತ್ರ ಸಿಕ್ಕಿದರೂ ಕೂಡ, ಲಾಹೋರ್ ಅಧಿವೇಶ 1929ರಲ್ಲಿಯೇ ನೆಹರೂ ಅಧ್ಯಕ್ಷತೆಯಲ್ಲಿ ಪೂರ್ಣ ಸ್ವರಾಜ್ಯದ ಕಲ್ಪನೆ ನೀಡಿದರು. ನವ ಭಾರತ ನಿರ್ಮಾಣಕ್ಕೆ ಪಂಚವಾರ್ಷಿಕ ಯೋಜನೆ ಸೇರಿದಂತೆ ಜಗತ್ತಿಗೆ ಮಾದರಿಯಾದಂತ ವಿದೇಶಾಂಗ ಅಲಿಪ್ತ ನೀತಿಯನ್ನ ಅಳವಡಿಸಿಕೊಂಡಿದ್ದರು. ಆದರೆ ಇಂದಿನ ಪ್ರಧಾನಿಗಳಿಗೆ ವಿದೇಶಾಂಗ ನೀತಿಯ ತಿಳುವಳಿಕಯೇ ಇಲ್ಲ. ವಿದೇಶದಲ್ಲಿ ಭಾರತ ಇಂದು ತಲೆ ತಗ್ಗಿಸುವಂತಾಗಿದೆ.

ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲೀಂ ಅಹ್ಮದ್, ಹಿರಿಯ ನಾಯಕರಾದ ಜೈರಾಂ ರಮೇಶ್ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News