ಎಸಿಬಿ ದಾಳಿ ಹೆಸರಿನಲ್ಲಿ ಅಧಿಕಾರಿಗೆ ಬೆದರಿಕೆ: ದೂರು

Update: 2022-05-27 15:19 GMT

ಬೆಂಗಳೂರು, ಮೇ 27: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಹೆಸರಿನಲ್ಲಿ ದುಷ್ಕರ್ಮಿಗಳು ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗೆ ಕರೆ ಮಾಡಿ ದಾಳಿಯ ಬೆದರಿಕೆ ಒಡ್ಡಿದಲ್ಲದೆ, ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.

ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಧನಂಜಯ್ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತ ನಕಲಿ ಅಧಿಕಾರಿ ವಿರುದ್ಧ ವಿಧಾನಸೌಧ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಧನಂಜಯ್ ಅವರಿಗೆ ಕರೆ ಮಾಡಿದ ವ್ಯಕ್ತಿಯೋರ್ವ ತಾನೂ ಎಸಿಬಿ ಡಿವೈಎಸ್ಪಿ ಎಂದು ಉಲ್ಲೇಖಿಸಿದ್ದಲ್ಲದೆ, ನಿಮ್ಮ ವಿರುದ್ಧ ಡಿಡಿಪಿಐ, ಬಿಇಒಗಳು ಭ್ರಷ್ಟಾಚಾರ ಎಸಗಿರುವುದಾಗಿ ಆರೋಪಿಸಿ ಎಸಿಬಿಗೆ ದೂರು ನೀಡಿದ್ದಾರೆ. 

ನಮ್ಮ ಅಧಿಕಾರಿಗಳು ನಿಮ್ಮ ಕಚೇರಿ ಹಾಗೂ ಮನೆ ಬಳಿ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆ ನಂತರ, ಮತ್ತೆ ಕರೆ ಮಾಡಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಜತೆ ಮಾತನಾಡಿದ್ದು, ದಾಳಿ ನಡೆಯುವುದಿಲ್ಲ. ನಿಮ್ಮ ಒಳ್ಳೆತನ ನೋಡಿ ನಿಮಗೆ ಸಹಾಯ ಮಾಡುತ್ತಿದ್ದೇನೆ. 

ನಮ್ಮ ಎಸಿಬಿ ತನಿಖಾಧಿಕಾರಿಗಳು ಶ್ರೀಲಂಕಾ ಪ್ರವಾಸ ಹೋಗುತ್ತಿದ್ದು, ಹಣ ಕೊಡುವಂತೆ ಬೇಡಿಕೆಯಿಟ್ಟಿದ್ದಾನೆ. ಇದೇ ರೀತಿ ಇತರೆ ಅಧೀನ ಕಾರ್ಯದರ್ಶಿಗಳಾದ ಶರಣಪ್ಪ ಹಾಗೂ ಪದ್ಮಿನಿ ಎಂಬುವರಿಗೂ ಕರೆ ಮಾಡಿದ್ದಾನೆ. ಆರೋಪಿಯ ಬಗ್ಗೆ ಅನುಮಾನಗೊಂಡ ಇವರು ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News