ಹಸಿರುಶಾಲು ಹಾಕಿ ರೈತರ ಹೆಸರಿನಲ್ಲಿ ದ್ರೋಹ ಮಾಡಿದರೆ, ಹೆತ್ತ ತಾಯಿಗೆ ದ್ರೋಹ ಬಗೆದಂತೆ: ಕುರುಬೂರು ಶಾಂತಕುಮಾರ್
Update: 2022-05-28 17:21 GMT
ಬೆಂಗಳೂರು, ಮೇ 28: ಯಾರೇ ಆಗಲಿ ಹಸಿರುಶಾಲು ಹಾಕಿ ರೈತ ಚಳವಳಿಯ ಮುಖವಾಡ ಧರಿಸಿ ರೈತರಿಗೆ ದ್ರೋಹ ಬಗೆಯುವ ಕಾರ್ಯ ನಡೆಸುವುದು ಹೆತ್ತ ತಾಯಿಗೆ ದ್ರೋಹ ಬಗೆದಂತೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಶನಿವಾರ ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಬಂದಿರುವ ಭ್ರಷ್ಟಾಚಾರ ಆರೋಪ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದರು.
ಹೊಸದಿಲ್ಲಿಯಲ್ಲಿ ನಡೆದ ರೈತ ಹೋರಾಟದ ಶಕ್ತಿಯನ್ನು ಸಹಿಸಲಾಗದೆ, ಕೆಲ ದುರ್ಬಲ ವ್ಯಕ್ತಿಗಳು, ಕಾಣದ ಕೈಗಳು ರೈತರನ್ನು ಗುರಿಯಾಗಿಸಿಕೊಂಡು ಪಿತೂರಿ ಮಾಡುತ್ತಿರುವುದು ಇದೆ. ಹೀಗಾಗಿ, ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸತ್ಯಾಸತ್ಯತೆ ಹೊರಬರಬೇಕು ಎಂದು ಹೇಳಿದರು.