ಇಂಧನ ಇಲಾಖೆ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಕ್ರಮ: ಸಚಿವ ಸುನಿಲ್ ಕುಮಾರ್

Update: 2022-06-09 16:09 GMT

ಬೆಂಗಳೂರು, ಜೂ.9: ಇಂಧನ ಇಲಾಖೆಯ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದರು.

ಗುರುವಾರ ನಗರದಲ್ಲಿ ಕರ್ನಾಟಕ ಇವಿ ಜಾಗೃತಿ ಪೋರ್ಟಲ್ ಮತ್ತು ಬೆಂಗಳೂರು ನಗರವನ್ನು ಜಾಗತಿಕ ಇವಿ ವಲಯವನ್ನಾಗಿ ಪರಿವರ್ತಿಸುವ ದಿಕ್ಸೂಚಿ ವರದಿ ಬಿಡುಗಡೆ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಇಂಧನ ಇಲಾಖೆ ಅಧೀನದಲ್ಲಿ ಬರುವ ಎಲ್ಲ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಮೂರು ತಿಂಗಳ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದು ಅವರು ತಿಳಿಸಿದರು. 

ವಿದ್ಯುತ್ ಚಾಲಿತ ವಾಹನಗಳ ಬೆಲೆ, ಪೆಟ್ರೋಲ್ ಹಾಗು ಡಿಸೆಲ್ ವಾಹನಗಳ ಬೆಲೆಗಿಂತ ದುಬಾರಿ ಇರುವುದರಿಂದ, ಇಲೆಕ್ಟ್ರಿಕ್ ವಾಹನ ಬಳಕೆಗೆ ಇನ್ನೂ ಒಪ್ಪಿಗೆ ದೊರೆತಿಲ್ಲ. ಇಲೆಕ್ಟ್ರಿಕ್ ವಾಹನ ಬಳಸುವುದು ನಮ್ಮ ಇಲಾಖೆಯ ಆದ್ಯತೆ ಆಗಿದ್ದು, ಹಣಕಾಸು ಇಲಾಖೆ ಸಮ್ಮತಿಸಿದರೆ, ಮುಂದಿನ ದಿನಗಳಲ್ಲಿ ಇಂಧನ ಇಲಾಖೆಯ ಎಲ್ಲ ಕಚೇರಿಗಳಲ್ಲಿ ಇಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುವುದು ಎಂದು ಸುನೀಲ್ ಕುಮಾರ್ ತಿಳಿಸಿದರು. 

ಇದಕ್ಕೂ ಮೊದಲು ಇವಿ ಜಾಗೃತಿ ಪೋರ್ಟಲ್ ಮತ್ತು ದಿಕ್ಸೂಚಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಇಲೆಕ್ಟ್ರಿಕ್ ವಾಹನ ಬಳಕೆಗೆ ಸರಕಾರ ಉತ್ತೇಜನ ನೀಡುತ್ತಿದ್ದು, ಜೂ.23 ರಿಂದ 30ರವರೆಗೆ ರಾಜ್ಯದಲ್ಲಿ ಇವಿ ಚಾಜಿರ್ಂಗ್ ಸೆಂಟರ್‍ಗಳ ಕುರಿತು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 

ರಾಜ್ಯದಲ್ಲಿ 1000ಕ್ಕೂ ಹೆಚ್ಚು ಇವಿ ಚಾಜಿರ್ಂಗ್ ಸ್ಟೇಷನ್‍ಗಳಿದ್ದು, 3000 ಚಾಜಿರ್ಂಗ್ ಸ್ಟೇಷನ್‍ಗಳ ಗುರಿ ಹೊಂದಲಾಗಿದೆ. ನಗರದಲ್ಲಿ ಚಾಜಿರ್ಂಗ್ ಸ್ಟೇಷನ್‍ಗಳ ನಿರ್ಮಾಣಕ್ಕೆ ಟೆಂಡರ್ ಕರೆಯುವ ಹೊಣೆಯನ್ನು ಬೆಸ್ಕಾಂಗೆ ನೀಡಲಾಗಿದೆ. ಚಾಜಿರ್ಂಗ್ ಸ್ಟೇಷನ್‍ಗಳ ನಿರ್ಮಾಣಕ್ಕೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು. 

ಭಾರತದ ಬ್ರಿಟಿಷ್ ಹೈಕಮಿಷನರ್ ಆಲೆಕ್ಸ್ ಇಲ್ಲಿಸ್ ಮಾತನಾಡಿ, ಭಾರತ, ಅಮೆರಿಕ ಮತ್ತು ಚೀನಾ ದೇಶಗಳು ಯುಕೆ ಜತೆ ಸಹಭಾಗಿತ್ವದ ವಹಿವಾಟುವಿನಲ್ಲಿ ತೊಡಗಿಕೊಂಡಿವೆ. ಭಾರತದ ಸುಮಾರು 22 ಕೋಟಿ ಜನರು ನಗರ ಪ್ರದೇಶಕ್ಕೆ ಮುಂದಿನ ದಿನಗಳಲ್ಲಿ ವಲಸೆ ಹೋಗಲಿದ್ದಾರೆ ಈ ನಿಟ್ಟಿನಲ್ಲಿ ನಗರ ಪ್ರದೇಶಗಳ ಸಮರ್ಥ ಅಭಿವೃದ್ದಿ ಮುಖ್ಯ ಎಂದು ತಿಳಿಸಿದರು. 

ಭಾರತದಲ್ಲಿ ಇಲೆಕ್ಟ್ರಾನಿಕ್ ವಾಹನಗಳ ಬಳಕ ಕುರಿತು ಪ್ರಧಾನಿ ನರೇಂದ್ರ ಮೋದಿ ಜತೆ ನಾನು ಮಾತನಾಡಿದ್ದೇನೆ. ಅವರು ಈ ಕುರಿತು ಧನಾತ್ಮಕ ಧೋರಣೆ ಹೊಂದಿದ್ದು, ಭಾರತ ಸರಕಾರ ಎಲ್ಲ ರೀತಿಯ ಸಹಕಾರ ನೀಡುವ ಭರವಸೆಯನ್ನು ಮೋದಿ ನೀಡಿದ್ದಾರೆ. ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಇವಿ ಚಲನಶೀಲತೆ ಬಗ್ಗೆ ಭಾಗಿತ್ವ ಹೊಂದಲು ಬ್ರಿಟನ್ ಉತ್ಸುಕತೆ ಹೊಂದಿದೆ ಎಂದು ಆಲೆಕ್ಸ್ ತಿಳಿಸಿದರು. 

ನಮ್ಮ ಇತಿಹಾಸ ಪಠ್ಯದಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟನ್ ಜತೆ ಹೋರಾಟ ಮಾಡಿದೆ, ನಾವು ಅದನ್ನು ಮರೆತು ಪ್ರಸ್ತುತ ನಮ್ಮ ದೇಶಗಳ ಅಭಿವೃದ್ದಿಗಾಗಿ ಕೈಜೋಡಿಸಬೇಕಾಗಿದೆ. ಬೆಂಗಳೂರು ಬಹಳ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿ ಇಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಅವಕಾಶ ಇದೆ ಎಂದು ಅವರು ಉಲ್ಲೇಖಿಸಿದರು. 

ಬೆಸ್ಕಾಂ ಆಡಳಿತ ನಿರ್ದೇಶಕ ಪಿ.ರಾಜೇಂದ್ರ ಚೋಳನ್ ಪ್ರಸ್ತಾವಿಕ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಬೆಸ್ಕಾಂ ಸಾರ್ವಜನಿಕರಿಗಾಗಿ ಇವಿ ಚಾಜಿರ್ಂಗ್ ಸ್ಟೇಷನ್‍ಗಳನ್ನು ತೆರೆದಿದ್ದು, ಎರಡು ಚಾಜಿರ್ಂಗ್ ಸ್ಟೇಷನ್‍ಗಳನ್ನು ಬೆಸ್ಕಾಂನ ನಿಗಮ ಕಚೇರಿಗಳಲ್ಲಿ ತೆರಯಲಾಗಿದೆ ಎಂದರು. 

ಪ್ರಸ್ತುತ ವಿರುವ ಬೆಸ್ಕಾಂ ಚಾಜಿರ್ಂಗ್ ಸ್ಟೇಷನ್‍ಗಳಿಂದ ತಿಂಗಳಿಗೆ 6000 ಕ್ಕೂಹೆಚ್ಚು ವಹಿವಾಟು ನಡೆಯುತ್ತಿದ್ದು, ಸುಮಾರು 30,000 ಕಿ.ವ್ಯಾಟ್ ಇಂಧನ ಮಾರಾಟ ಮಾಡಿ, 2.5 ಲಕ್ಷ ರೂ. ಆದಾಯಗಳಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. 

ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಉಪ ಹೈಕಮಿಷನರ್ ಅನ್ನಾ ಶೋಟ್ ಬೋಲ್ಟ್, ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್ ನಾಯಕ್ ಮತ್ತು ಕೆಪಿಟಿಸಿಎಲ್ ಆಡಳಿತ ನಿರ್ದೇಶಕಿ ಡಾ. ಎನ್. ಮಂಜುಳಾ ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News