ಮೇಕೆದಾಟು ಯೋಜನೆ | ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ ರಾಜಕೀಯ ಸ್ಟಂಟ್: ಸಿಎಂ ಬೊಮ್ಮಾಯಿ
ಬೆಂಗಳೂರು, ಜೂ.14: ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡು ಸರಕಾರ ಪ್ರಧಾನ ಮಂತ್ರಿಗೆ ಪತ್ರ ಬರೆದಿರುವುದು ಒಂದು ರಾಜಕೀಯ ಸ್ಟಂಟ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಪ್ರಧಾನಿಗೆ ಪತ್ರ ಬರೆದ ವಿಚಾರ ಇಂದು ತಿಳಿದುಬಂದಿದೆ. ಪತ್ರದ ಪ್ರತಿಯನ್ನು ತೆರೆಸಿಕೊಳ್ಳುತ್ತೇನೆ. ತಮಿಳುನಾಡಿನವರ ಬೇಡಿಕೆ ಕಾನೂನುಬಾಹಿರ. ಒಕ್ಕೂಟ ವ್ಯವಸ್ಥೆಗೆ ವಿರೋಧ. ನಮ್ಮ ನೀರಿನ ಹಕ್ಕಿನ ಮೇಲೆ ಅವರು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾವೇರಿ ನದಿ ಮೇಲ್ವಿಚಾರಾಣಾ ಮಂಡಳಿಯು ಡಿಪಿಆರ್ ಅನುಮೋದನೆ ಮಾಡಬೇಕೆಂದು ಕೇಂದ್ರ ಜಲ ಆಯೋಗವೇ ಹಿಂದೆ ಷರತ್ತು ವಿಧಿಸಿತ್ತು. ಕಾವೇರಿ ನದಿ ಮೇಲ್ವಿಚಾರಣಾ ಸಮಿತಿ ಈಗಾಗಲೇ ಹಲವಾರು ಸಭೆ ನಡೆಸಿದ್ದು, ಜೂನ್ 16ರಂದು ಅಂತಿಮ ಸಭೆ ನಡೆಯಲಿದೆ. ಕಾವೇರಿ ವಿಷಯದ ಮೇಲೆ ಈ ರೀತಿ ಹಲವಾರು ವರ್ಷಗಳಿಂದ ತಮಿಳುನಾಡು ಮಾಡಿದ್ದಾರೆ. ಇದು ಅದರ ಭಾಗವಷ್ಟೇ. ಇದು ಕಾನೂನಿನ ಚೌಕಟ್ಟಿನಲ್ಲಿ ನಿಲ್ಲುವುದೂ ಇಲ್ಲ. ಕಾನೂನುಬಾಹಿರ ಪತ್ರವನ್ನು ಕೇಂದ್ರ ಖಂಡಿತವಾಗಿಯೂ ಪರಿಗಣಿಸುವುದಿಲ್ಲ. ನ್ಯಾಯ ಸಿಗುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಜೂ.16ರಂದು ತಮಿಳುನಾಡು, ಪಾಂಡಿಚೇರಿ, ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುತ್ತಾರೆ ಎಂದರು.