×
Ad

ಇಂಪೆಲ್ಸಿಸ್- ಲಾರ್ಡಲ್ ಕಂಪೆನಿಗಳ ಸಂಶೋಧನೆ, ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರ ಉದ್ಘಾಟನೆ

Update: 2022-06-14 20:53 IST

ಬೆಂಗಳೂರು, ಜೂ. 14: ‘ಉದ್ಯಾನನಗರಿ ಬೆಂಗಳೂರು ಭಾರತದ ಐಟಿ-ಬಿಟಿ ಮತ್ತು ಸಂಶೋಧನೆ ಹಾಗೂ ನಾವೀನ್ಯತೆಗಳ ರಾಜಧಾನಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇಂಪೆಲ್ಸಿಸ್-ಲಾರ್ಡಲ್ ಕಂಪೆನಿಗಳು ಮನುಷ್ಯನ ದೇಹಾರೋಗ್ಯದ ಅಧ್ಯಯನ ಮತ್ತು ಕಂಡುಬರುವ ಅನಾರೋಗ್ಯಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಂಶೋಧನೆಯ ಮೂಲಕ ಡಿಜಿಟಲ್ ಸೇವೆಗಳ ನೆರವು ನೀಡಲಿದೆ’ ಎಂದು ಐಟಿ-ಬಿಟಿ ಸಚಿವ ಡಾ.ಆಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಮಂಗಳವಾರ ಆರೋಗ್ಯ ಸೇವೆಗಳ ಕ್ಷೇತ್ರ ಸೇರಿ ಹಲವು ವಲಯಗಳಿಗೆ ಡಿಜಿಟಲ್ ಸೇವೆಗಳನ್ನು ಒದಗಿಸುವ ಜಾಗತಿಕ ಮಟ್ಟದ `ಇಂಪೆಲ್ಸಿಸ್’ ಮತ್ತು `ಲಾರ್ಡಲ್ ಮೆಡಿಕಲ್’ ಕಂಪೆನಿಗಳು ನಗರದಲ್ಲಿ ಸ್ಥಾಪಿಸಿರುವ ವಿಶ್ವದರ್ಜೆಯ ಅತ್ಯಾಧುನಿಕ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, `ಆರೋಗ್ಯ ಸೇವೆಗಳಿಗೆ ಆಧುನಿಕ ಜಗತ್ತಿನಲ್ಲಿ ಅತ್ಯಂತ ಮಹತ್ತ್ವವಿದೆ' ಎಂದರು.

`ಹೃದಯಾಘಾತ, ರಕ್ತದೊತ್ತಡ, ಪಾಶ್ರ್ವವಾಯು ಮುಂತಾದ ಅನಾರೋಗ್ಯಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ, ಕ್ಷಿಪ್ರಗತಿಯಲ್ಲಿ ಸೂಕ್ತ ಚಿಕಿತ್ಸೆಯ ಮಾರ್ಗದರ್ಶನ ನೀಡುವುದು ಜರೂರಾಗಿ ನಡೆಯಬೇಕಾಗಿದೆ. ಇಂಪೆಲ್ಸಿಸ್ ಮತ್ತು ಲಾರ್ಡಲ್ ಕಂಪೆನಿಗಳು ಇವುಗಳನ್ನು ಸಾಧ್ಯವಾಗಿಸಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಸಾಫ್ಟ್‍ವೇರ್ ಅಭಿವೃದ್ಧಿಪಡಿಸುವುದು ರೋಗಿಗಳಿಗೆ ವರದಾನವಾಗಲಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

`ಅಮೆರಿಕ ಮೂಲದ ಇಂಪೆಲ್ಸಿಸ್ ಕಂಪೆನಿಯು ಬೆಂಗಳೂರು ಮತ್ತು ಮಂಗಳೂರು ನಗರದಲ್ಲಿ ಕಚೇರಿ ಹೊಂದಿರುವುದು ಸ್ವಾಗತಾರ್ಹವಾಗಿದೆ. ಈ ಅತ್ಯಾಧುನಿಕ ಸಂಶೋಧನಾ ಕೇಂದ್ರದ ಮೂಲಕ ಆರೋಗ್ಯ ಸೇವೆಗಳ ಜತೆಗೆ ಇ-ಕಲಿಕೆ, ಕಂಟೆಂಟ್ ಎಂಜಿನಿಯರಿಂಗ್, ಡಿಜಿಟಲ್ ಮಾರ್ಕೆಟಿಂಗ್ ಮುಂತಾದ ಕ್ಷೇತ್ರಗಳಿಗೂ ನೆರವು ಸಿಗಲಿದೆ' ಎಂದು ಅವರು ನುಡಿದರು.

`ಮಾಹಿತಿ ತಂತ್ರಜ್ಞಾನ ಮೂಲಸೌಲಭ್ಯ, ಸುರಕ್ಷತೆ ಮತ್ತು ಅಭಿವೃದ್ಧಿಯ ಸುಸ್ಥಿರ ಮಾದರಿಗಳನ್ನು ಈ ಕೇಂದ್ರಗಳು ಅಳವಡಿಸಿಕೊಂಡಿವೆ. 20 ವರ್ಷಗಳ ಅನುಭವ ಹೊಂದಿರುವ ಇಂಪೆಲ್ಸಿಸ್ ಕಂಪೆನಿಯಲ್ಲಿ ಸಾವಿರಕ್ಕೂ ಹೆಚ್ಚು ಪರಿಣತ ತಂತ್ರಜ್ಞರಿರುವುದು ಒಳ್ಳೆಯದು. ಕರ್ನಾಟಕವು ಇದರ ಲಾಭವನ್ನು ಪಡೆದುಕೊಳ್ಳಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಲಾರ್ಡಲ್ ಮೆಡಿಕಲ್ ಸಂಸ್ಥೆಯ ಸಿಇಒ ಆಲ್ಫ್ ಕ್ರಿಶ್ಚಿಯನ್ ಡೈಡಲ್ ಮತ್ತು ಇಂಪೆಲ್ಸಿಸ್ ಸ್ಥಾಪಕ ಹಾಗೂ ಸಿಇಒ ಸಮೀರ್ ಷರೀಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News