×
Ad

ಮೋದಿ ನಾಟಕ ನಂಬಲು ಯುವಕರು ಮೂರ್ಖರಲ್ಲ: ದಿನೇಶ್ ಗುಂಡೂರಾವ್

Update: 2022-06-17 17:16 IST

ಬೆಂಗಳೂರು, ಜೂ. 17: ‘ಸೇನೆಯ ಅಲ್ಪಾವಧಿ ನೇಮಕ ಯೋಜನೆ ‘ಅಗ್ನಿಪಥ್' ವಿರುದ್ಧ ದೇಶಾದ್ಯಂತ ಯುವಕರ ಆಕ್ರೋಶ ಭುಗಿಲೆದ್ದಿದೆ. ಯುವಕರ ಆಕ್ರೋಶ ಸಹಜವಾದದ್ದೆ. ಕಳೆದ ಎರಡು ವರ್ಷಗಳಿಂದ ಸೇನೆಗೆ ನೇಮಕಾತಿ ನಡೆದಿಲ್ಲ. ಈಗ ಅಗ್ನಿಪಥ್ ಯೋಜನೆಯ ಮೂಲಕ ನೇಮಕಾತಿಯಾದರೂ ಅದು ಅಲ್ಪಾವಧಿಯಷ್ಟೇ. ಕೇವಲ ನಾಲ್ಕು ವರ್ಷಕ್ಕೆ ಕಡ್ಡಾಯ ನಿವೃತ್ತಿಯಾಗಬೇಕು. ಆ ನಂತರ ಯುವಕರ ಭವಿಷ್ಯವೇನು?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವುದೇ ಬಡ ಮಧ್ಯಮ ವರ್ಗದ ಯುವಕರು. ಹೊಟ್ಟೆ ತುಂಬಿದ ಶ್ರೀಮಂತರ ಮಕ್ಕಳಾಗಲಿ, ನಕಲಿ ದೇಶಪ್ರೇಮದ ಭಾಷಣ ಬಿಗಿಯುವ ಸಂಘ ಪರಿವಾರದ ಹೆತ್ತ ಕುಡಿಗಳಾಗಲಿ ಸೈನ್ಯ ಸೇರುವುದಿಲ್ಲ. ಇದು ಕಟು ವಾಸ್ತವ. ಸೈನ್ಯಕ್ಕೆ ಸೇರಿದ ಬಡ ಮಧ್ಯಮ ವರ್ಗದ ಯುವಕರಿಗೆ ಸೇವಾ ಭದ್ರತೆ ಅತಿ ಅಗತ್ಯ. ಇದನ್ನು ಕೇಂದ್ರ ಅರಿಯಬೇಕು' ಎಂದು ಸಲಹೆ ನೀಡಿದ್ದಾರೆ.

‘ಸೈನಿಕರ ಪಿಂಚಣಿ ಹೊರೆ ತಪ್ಪಿಸಿಕೊಳ್ಳಲು ಕೇಂದ್ರ ‘ಅಗ್ನಿಪಥ್ ಯೋಜನೆ' ಜಾರಿಗೆ ಮುಂದಾಗಿದೆ. ದೇಶದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಸೇವೆ ಮಾಡಿದ ಸೈನಿಕರಿಗೆ ಪಿಂಚಣಿ ಕೊಡದಷ್ಟು ದೇಶ ನಿರ್ಗತಿಕವೇ? ತಮ್ಮ ರಾಜಕೀಯ ಲಾಭಕ್ಕೆ ಯೋಧರ ತ್ಯಾಗವನ್ನು ದುರ್ಬಳಕೆ ಮಾಡಿಕೊಳ್ಳುವ ಮೋದಿಗೆ, ಸೈನಿಕರಿಗೆ ಪಿಂಚಣಿ ಕೊಡುವುದು ಬೇಕಿಲ್ಲವೆ?' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಮೋದಿ ಮಾತು ತಪ್ಪಿದ್ದಾರೆ. ಈಗ ಸಾರ್ವತ್ರಿಕ ಚುನಾವಣೆ ಹತ್ತಿರವಿರುವುದರಿಂದ ಮತ್ತೊಂದು ನಾಟಕಕ್ಕೆ ತಾಲೀಮು ನಡೆಸುತ್ತಿದ್ದಾರೆ. ಅಗ್ನಿಪಥ್ ಯೋಜನೆ ಮೂಲಕ ಸೇನೆಯಲ್ಲಿ ಕಾಲ್ಪನಿಕ ಹುದ್ದೆ ಸೃಷ್ಟಿಸುವುದು ಈ ನಾಟಕದ ಒಂದು ಭಾಗ. ಆದರೆ, ಮೋದಿಯವರ ಈ ನಾಟಕ ನಂಬಲು ಯುವಕರು ಮೂರ್ಖರಲ್ಲ' ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News