2,689 ಕೋಟಿ ರೂ.ಮೌಲ್ಯದ 81 ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ
ಬೆಂಗಳೂರು, ಜೂ. 17: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಿ ಉದ್ಯೋಗಗಳ ಸೃಷ್ಟಿಗೆ ಒತ್ತು ನೀಡಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಸುಮಾರು 6,825ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಸೃಷ್ಟಿಸುವ 2,689.51 ಕೋಟಿ ರೂ.ಮೌಲ್ಯದ 81 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದೆ.
ಶುಕ್ರವಾರ ಕರ್ನಾಟಕ ಉದ್ಯೋಗಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ನೇತೃತ್ವದಲ್ಲಿ ನಡೆದ 132ನೆ ರಾಜ್ಯ ಮಟ್ಟದ ಏಕಗವಾಕ್ಷಿ ತೆರವು ಸಮಿತಿ ಸಭೆಯು ಮೇಲ್ಕಂಡ ಯೋಜನೆಗಳಿಗೆ ಅನುಮೋದನೆ ನೀಡಿದೆ. ಸಮಿತಿಯು 50 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯ 7 ಪ್ರಮುಖ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳನ್ನು ಪರಿಗಣಿಸಿ ಅನುಮೋದನೆ ನೀಡಿದೆ.
1,229.43 ರೂ.ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 1,734 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಅಲ್ಲದೆ 132ನೆ ಎಸ್ಎಲ್ಎಸ್ಡಬ್ಲ್ಯುಸಿಸಿ ಸಭೆಯಲ್ಲಿ 15 ಕೋಟಿ ರೂ.ಗಿಂತ ಹೆಚ್ಚು ಹಾಗೂ 50 ಕೋಟಿ ರೂ.ಗಿಂತ ಕಡಿಮೆ ಹೂಡಿಕೆಯ 71 ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಹಾಗೂ 1,308 ಕೋಟಿ ರೂ.ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 5,091 ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂಬ ಮುರುಗೇಶ್ ನಿರಾಣಿ ವ್ಯಕ್ತಪಡಿಸಿದ್ದಾರೆ.
151.42 ಕೋಟಿ ರೂ. ಹೂಡಿಕೆಯ ಮೂರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 2,689.51 ಕೋಟಿ ರೂ.ಗಳ ಹೂಡಿಕೆಯೊಂದಿಗೆ 6,825 ಜನರಿಗೆ ಉದ್ಯೋಗಾವಕಾಶ ಇರುವ ಒಟ್ಟು 81 ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಎಂದು ಸಚಿವ ಮುರುಗೇಶ್ ನಿರಾಣಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಅನುಮೋದನೆ ನೀಡಿರುವ ಪ್ರಸ್ತಾವನೆ: ಪರ್ಪಲ್ಸ್ಟಾರ್ ಹೈಜೀನ್ ಪ್ರೈವೇಟ್ ಲಿಮಿಟೆಡ್-ಹೂಡಿಕೆ 270 ಕೋಟಿ ರೂ., ಉದ್ಯೋಗ-400, ಬೆಳಗಾವಿ ಶುಗರ್ಸ್ ಪ್ರೈವೇಟ್ 240.84 ಕೋಟಿ ರೂ., ಪರತ್ಪರ ಕಾಫಿ ಲಿಮಿಟೆಡ್-236.8 ಕೋಟಿ ರೂ., ಲಾಜಿಕಲಿ ಇನ್ಫೋಮೀಡಿಯಾ ಪ್ರೈವೇಟ್ ಲಿಮಿಟೆಡ್-228.19 ಕೋಟಿ ರೂ., ಎಎನ್ಎಸ್ ಪೇಪರ್ ಪ್ರೈವೇಟ್ ಲಿಮಿಟೆಡ್-100 ಕೋಟಿ ರೂ., ಗೋದಾವತ್ ಫುಡ್ ಪೆÇ್ರೀ ಪ್ರೈವೇಟ್ ಲಿಮಿಟೆಡ್-98.60 ಕೋಟಿ ರೂ., ಜ್ಯೋತಿಸ್ನಾ ಲೈ-ಹೈಟೆಕ್ ಪ್ರೈವೇಟ್ ಲಿಮಿಟೆಡ್-50 ಕೋಟಿ ರೂ.ಬಂಡವಾಳ ಹೂಡಿಕೆÀ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಈ ಹಿಂದೆ ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ 2022ರ ಎಪ್ರಿಲ್ 30ರಂದು ನಡೆದ 131ನೆ ಸಭೆಯಲ್ಲಿ 8,575 ಜನರಿಗೆ ಉದ್ಯೋಗಾವಕಾಶದೊಂದಿಗೆ ರೂ 2,465.94 ಕೋಟಿ ಮೌಲ್ಯದ 60 ಕೈಗಾರಿಕಾ ಯೋಜನೆಗಳಿಗೆ ಅನುಮತಿ ನೀಡಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇವಿ ರಮಣರೆಡ್ಡಿ, ಕೈಗಾರಿಕಾ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಎನ್.ಶಿವಶಂಕರ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.