ತಲ್ಲೂರು: 15ನೆ ಶತಮಾನದ ಅಪ್ರಕಟಿತ ಶಾಸನ ಪತ್ತೆ

Update: 2022-06-20 12:14 GMT

ಕುಂದಾಪುರ: ತಾಲೂಕಿನ ತಲ್ಲೂರು ಗ್ರಾಮದಲ್ಲಿ 15ನೇ ಶತಮಾನಕ್ಕೆ ಸೇರಿದ ಅಪ್ರಕಟಿತ ಶಿಲಾ ಶಾಸನವೊಂದು ಇತ್ತೀಚೆಗೆ ಪತ್ತೆಯಾಗಿದೆ. ಈ ಶಿಲಾ ಶಾಸಕ ಕನ್ನಡ ಲಿಪಿ ಹಾಗೂ ಭಾಷೆಯಲ್ಲಿದೆ.

ತಲ್ಲೂರಿನ ಖಾಸಗಿಯವರ ಜಾಗದಲ್ಲಿದ್ದ ಈ ಶಾಸನದ ಬಗ್ಗೆ ಹೆಮ್ಮಾಡಿಯ ಶರತ್ ಭಟ್ ಮಾಹಿತಿ ನೀಡಿದ್ದು, ಈ ಶಾಸನದ ಅಧ್ಯಯನವನ್ನು ಉಡುಪಿಯ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ.ಎಸ್.ಎ.  ಕೃಷ್ಣಯ್ಯ ಮತ್ತು ಯು. ಕಮಲಬಾಯಿ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಕೆ. ಶ್ರೀಧರ ಭಟ್ ಇವರ ನೇತೃತ್ವದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ನಡೆಸಿದ್ದರು.

ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಅಪರಿಪೂರ್ಣವಾಗಿದ್ದು, ಕನ್ನಡ ಲಿಪಿ ಮತ್ತು ಭಾಷೆಯ 10 ಸಾಲುಗಳನ್ನು ಒಳಗೊಂಡಿದೆ. ಶಾಸನವು 4 ಅಡಿ ಎತ್ತರ ಮತ್ತು 2.5 ಅಡಿ ಅಗಲವಿದ್ದು, ಮೇಲ್ಭಾಗದಲ್ಲಿ ಶಿವಲಿಂಗ ಇದರ ಇಕ್ಕೆಲಗಳಲ್ಲಿ ನಂದಿ, ದೀಪಕಂಬ ಹಾಗೂ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ. 

‘ಶ್ರೀ ಗಣಾಧಿಪತಯೆಂ ನಮಃ’ ಎಂಬ ಶ್ಲೋಕದೊಂದಿಗೆ ಪ್ರಾರಂಭವಾಗುವ ಈ ಶಾಸನವು ಶಕವರುಷ ೧೪೬೭ ಸಂದು ಸಲುವ ವರ್ತಮಾನ ವಿಶ್ವಾವಸು ಸಂವತ್ಸರದ ವಯಿಶಾಖ ಮಾಸಕ್ಕೆ ಸೇರಿದ್ದು ಅಂದರೆ ಇದು ಕ್ರಿ.ಶ.೧೫೪೫ರ ಕಾಲಮಾನಕ್ಕೆ ಸರಿ ಹೊಂದುತ್ತದೆ. 

ಹೊಸಅಂಗಡಿಯ ಶ್ರೀವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ಬಾರಕೂರ ಮೂರುಕೇರಿಯ ಚೊಕಣಪ ಸೆಟ್ಟಿಯ ಮಗನಾದ ಉಪ್ಪಿನಕುದಿರ ನಾರಾಣ ಸೆಟ್ಟಿಯು ಶ್ರೀವೀರಯ್ಯನವರ ಮೂಲಿ ಮುರಿದು ಅರಮನೆಯ ಧರ್ಮಕ್ಕೆ ನೀಡಿದ ದಾನದ ಬಗ್ಗೆ ಹಾಗೂ ಈ ಸಂದರ್ಭದಲ್ಲಿ ಗುರುತಿಸದ ಚತುಸ್ಸೀಮೆಯ ಗಡಿಯ ಉಲ್ಲೇಖವನ್ನು ಶಾಸನವು ಮಾಡುತ್ತದೆ.

ಶಾಸನವು ಅಪರಿಪೂರ್ಣವಾಗಿರುವುದರಿಂದ ಮುಂದಿನ ಯಾವುದೇ ವಿವರಗಳು ಕಂಡು ಬರುವುದಿಲ್ಲ. ಶಾಸನದಲ್ಲಿ ಉಲ್ಲೇಖಗೊಂಡ ‘ಹೊಸ ಅಂಗಡಿ’ ಮತ್ತು  ಉಪ್ಪಿನಕುದಿರ’ ಎಂಬ ಹೆಸರುಗಳು ಪ್ರಸ್ತುತವಾಗಿ ಕರೆಯಲ್ಪಡುವ ‘ಹೊಸಂಗಡಿ’ ಮತ್ತು ‘ಉಪ್ಪಿನಕುದ್ರು’ ಇದರ ಪ್ರಾಚೀನ ಹೆಸರಾಗಿರಬಹುದೆಂದು ಸಂಶೋಧನಾರ್ಥಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ರವಿ ಸಂತೋಷ್ ಆಳ್ವ, ಕೆ. ನಾಗರಾಜ್ ಮತ್ತು ಸಂದೇಶ್ ಅವರು ಸಹಕಾರ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News