ಕಾಂಗ್ರೆಸ್ ನಾಯಕತ್ವದ ವಿರುದ್ಧ ಮಾಜಿ ಸಚಿವ ಎಂ.ಆರ್.ಸೀತಾರಾಂ ಆಕ್ರೋಶ

Update: 2022-06-24 15:16 GMT

ಬೆಂಗಳೂರು, ಜೂ.24: ಕಾಂಗ್ರೆಸ್ ಒಳ್ಳೆಯ ಪಕ್ಷ. ಆದರೆ ಪಕ್ಷದ ಚುಕ್ಕಾಣಿ ಹಿಡಿದಿರುವವರು(ಡಿ.ಕೆ.ಶಿವಕುಮಾರ್) ಸರಿಯಿಲ್ಲ. 1984ರಿಂದ ಪಕ್ಷಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದು, ತಮಗೆ ಈವರೆಗೆ ನಾಲ್ಕು ಬಾರಿ ಅನ್ಯಾಯ ಮಾಡಲಾಗಿದೆ. ಹೀಗಾಗಿ ಇನ್ನೊಂದು ತಿಂಗಳಲ್ಲಿ ಮತ್ತೊಂದು ಬೃಹತ್ ಸಮಾವೇಶದ ಮೂಲಕ ರಾಜಕೀಯವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಾಜಿ ಸಚಿವ ಎಂ.ಆರ್.ಸೀತಾರಾಂ ಹೇಳಿದರು.

ಶುಕ್ರವಾರ ನಗರದ ಅರಮನೆ ಮೈದಾನದ ವೈಟ್ ಪೆಟಲ್ಸ್ ಗಾರ್ಡೇನಿಯಾದಲ್ಲಿ ಆಯೋಜಿಸಿದ್ದ ಹಿರಿಯ ಮುಖಂಡರು, ಸಾಮಾಜಿಕ ಸಂಘಟನೆಗಳ ಪ್ರಮುಖರು, ಕಾಂಗ್ರೆಸ್ ಪಕ್ಷದ ಮಾಜಿ ಪದಾಧಿಕಾರಿಗಳು, ಬೆಂಬಲಿಗರು ಹಾಗೂ ಹಿತೈಷಿಗಳೊಂದಿಗಿನ ಸಮಾಲೋಚನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನನ್ನ ಮಗ ರಕ್ಷಾ ರಾಮಯ್ಯ ಎದುರು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನಿಂತಿದ್ದ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಲಾಗಿತ್ತು. ಆದರೆ, ಪಕ್ಷದ ಚುಕ್ಕಾಣಿ ಹಿಡಿದಿರುವವರು ಒತ್ತಡ ಹೇರಿ ನಾಮಪತ್ರವನ್ನು ಸ್ವೀಕರಿಸುವಂತೆ ಮಾಡಿದರು. ರಕ್ಷಾ ರಾಮಯ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ರಾಜೀ ಸಂಧಾನ ನಡೆಸಿ ಒಂದು ವರ್ಷ ಅಧಿಕಾರ, ಉಳಿದ ಎರಡು ವರ್ಷ ಸೋತವರಿಗೆ ಅಧಿಕಾರ ಕೊಡಿಸಿದ್ದಾರೆ ಎಂದು ಅವರು ಹೇಳಿದರು. 

ಇದಾದ ಬಳಿಕ ಆರು ತಿಂಗಳು ಮಗನಿಗೆ ಯಾವುದೇ ಅಧಿಕಾರ ಕೊಡಲಿಲ್ಲ. ವಿಧಾನಪರಿಷತ್ ಚುನಾವಣೆಗೆ ಟಿಕೆಟ್ ದೊರೆಯದೇ ತಾವು ಅಸಮಾಧಾನಗೊಂಡಿರುವುದಾಗಿ ಮಾಧ್ಯಮಗಳಲ್ಲಿ ವರದಿ ಬಂದ ನಂತರ ಏಕಾಏಕಿ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಕ್ಷಾ ರಾಮಯ್ಯ ಅವರನ್ನು ನೇಮಕ ಮಾಡಲಾಯಿತು ಎಂದು ಸೀತಾರಾಂ ಅಸಮಾಧಾನ ವ್ಯಕ್ತಪಡಿಸಿದರು.

1999ರಲ್ಲಿ ತಾವು ಮಾಜಿ ಸಚಿವ ರಘುಪತಿ ವಿರುದ್ಧ ಮಲ್ಲೇಶ್ವರಂನಲ್ಲಿ 11 ಸಾವಿರ ಮತಗಳ ಅಂತರದಿಂದ ಗೆದ್ದು, ಮೊದಲ ಬಾರಿಗೆ ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಕಾರಣನಾದೆ. ಸತತ ಎರಡು ಬಾರಿ ಗೆದ್ದಿದ್ದ ತಮಗೆ 2008ರಲ್ಲಿ ವಿಶ್ವಾಸ ದ್ರೋಹವಾಯಿತು. ತಮ್ಮನ್ನು ಪಕ್ಷದಲ್ಲಿದ್ದವರೇ ಸೋಲಿಸಿದರು. ಮರು ಚುನಾವಣೆಯಲ್ಲಿ ಹಿರಿಯ ನಾಯಕರೊಬ್ಬರ ಸಹೋದರನಿಗೆ ಟಿಕೆಟ್ ಕೊಟ್ಟರು ಎಂದು ಅವರು ಹೇಳಿದರು.

ತಮಗೆ 2018ರಲ್ಲಿ ಚುನಾವಣೆ ಘೋಷಣೆಯಾದ ನಂತರ ಮಲ್ಲೇಶ್ವರಂನಿಂದ ಟಿಕೆಟ್ ಕೊಡುವುದಾಗಿ ಪ್ರಕಟಿಸಿದರು. ಆದರೆ ಹತ್ತು ವರ್ಷ ಕ್ಷೇತ್ರದ ಜನರಿಂದ ದೂರ ಇದ್ದ ತಮಗೆ ಏಕಾಏಕಿ ಮತದಾರರನ್ನು ಎದುರಿಸಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದೆ. ಇದರಲ್ಲಿ ತಮ್ಮ ಯಾವುದೇ ತಪ್ಪಿಲ್ಲ ಎಂದು ಸೀತಾರಾಂ ಹೇಳಿದರು.

2009ರ ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವಂತೆ ನೀಡಿದ ಸೂಚನೆಯಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆ. ಆದರೆ ಕೊನೆಗೆ ವೀರಪ್ಪ ಮೊಯ್ಲಿ ಅವರಿಗೆ ಬಿ ಫಾರಂ ಕೊಟ್ಟರು. 2012ರಲ್ಲಿ ವಿಧಾನಪರಿಷತ್ತಿನ ಚುನಾವಣೆಯಲ್ಲಿ ತಮ್ಮನ್ನು ನಾಲ್ಕನೇ ಅಭ್ಯರ್ಥಿಯಾಗಿ ಘೋಷಿಸಿದರು. ಆದರೂ ಎಲ್ಲರಿಗಿಂತ ಹೆಚ್ಚು ಮತಗಳನ್ನು ಗಳಿಸಿ ಗೆಲುವು ಸಾಧಿಸಿದೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಸರಕಾರದಲ್ಲಿ ಎರಡು ವರ್ಷ ಸಚಿವನಾಗಿ ನಾಲ್ಕು ಸಾವಿರ ಕೋಟಿ ರೂ.ಅನುದಾನ ತಂದುಕೊಟ್ಟಿದ್ದೇನೆ. ಕೊಡಗಿನಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಬುಡಕಟ್ಟು ಜನರ ಸಮಸ್ಯೆಗಳನ್ನು ಉತ್ತಮವಾಗಿ ನಿಭಾಯಿಸಿ, ಭ್ರಷ್ಟಾಚಾರ ರಹಿತವಾಗಿ ಆಡಳಿತ ನೀಡಿದ ತೃಪ್ತಿ ತಮಗಿದೆ ಎಂದು ಅವರು ಹೇಳಿದರು.

ಮೇಲ್ಮನೆ ಚುನಾವಣೆಯಲ್ಲಿ ಟಿಕೆಟ್ ದೊರೆಯದ ಕಾರಣ ತಮಗೆ ಅಸಮಾಧಾನವಾಗಿದೆ. ಇಷ್ಟಾದರೂ ಈ ತನಕ ಅವರು ತಮ್ಮ ಜೊತೆ ಸೌಜನ್ಯಕ್ಕೂ ಮಾತನಾಡಿಲ್ಲ. ಇಲ್ಲಿಯತನಕ ಸೌಮ್ಯವಾಗಿಯೇ ನಡೆದುಕೊಂಡಿದ್ದೇನೆ. ಇನ್ನು ಮುಂದೆ ಕಠಿಣವಾಗಿರಬೇಕು ಎಂದುಕೊಂಡಿದ್ದೇನೆ ಎಂದು ಸೀತಾರಾಂ ಹೇಳಿದರು.

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಮಾತನಾಡಿ, ಇತ್ತೀಚಿನ ಬೆಳವಣಿಗೆಗಳು ಎಂ.ಆರ್.ಸೀತಾರಾಂ ಅವರಿಗೆ ಅಸಮಾಧಾನ ತಂದಿದ್ದು, ಇದನ್ನು ಸರಿಪಡಿಸಬೇಕು. ಸೀತಾರಾಂ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಆಗಿರುವ ಲೋಪಗಳಿಗೆ ಹೈಕಮಾಂಡ್ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿ ನಾರಾಯಣ ಮಾತನಾಡಿ, ರಾಜಕೀಯವಾಗಿ ಹಿಂದುಳಿದ ವರ್ಗದ ಮುಖಂಡರಿಗೆ ಅನ್ಯಾಯವಾಗಬಾರದು. ಆದರೆ ಇಲ್ಲಿ ಪಿತೂರಿ ರಾಜಕಾರಣ ಕೆಲಸ ಮಾಡಿದೆ. ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಇದರ ಪ್ರತಿಫಲವನ್ನು ಕಾಂಗ್ರೆಸ್ ಅನುಭವಿಸಬೇಕಾಗುತ್ತದೆ. ಪಕ್ಷ ಮತ್ತಷ್ಟು ಅಧೋಗತಿಗಿಳಿಯಲಿದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಬಲಿಜ ಜನಾಂಗದ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಬಲಿಜ ಸಮುದಾಯ ನಿರ್ಣಾಯಕವಾಗಿದ್ದು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದೇ ಧೋರಣೆ ಮುಂದುವರೆಸಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನ ಈಗಿನ ಸಂಖ್ಯಾಬಲವನ್ನು ಅರ್ಧದಷ್ಟು ಕಡಿತಗೊಳಿಸುತ್ತೇವೆ ಎಂದು ಹೇಳಿದರು.

ಮಾಜಿ ಮೇಯರ್ ಜಿ.ಹುಚ್ಚಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಫೀಉಲ್ಲಾ, ಮಾಜಿ ಶಾಸಕಿ ಅನಸೂಯಮ್ಮ, ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಎಲ್.ಎನ್.ಮೂರ್ತಿ, ಹೆಜ್ಜೆ ವೆಂಕಟೇಶ್ ಮತ್ತಿತರರು ಮಾತನಾಡಿದರು. ಯುವ ಕಾಂಗ್ರೆಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಕ್ಷಾ ರಾಮಯ್ಯ, ಯುವ ಮುಖಂಡ ಸುಂದರ್ ರಾಂ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News