11 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಕಳಪೆ; ಗುತ್ತಿಗೆದಾರನಿಗೆ ಮೂರು ಲಕ್ಷ ರೂ. ದಂಡ ವಿಧಿಸಿದ ಬಿಬಿಎಂಪಿ
Update: 2022-06-25 15:43 GMT
ಬೆಂಗಳೂರು, ಜೂ.25: ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಭೇಟಿ ವೇಳೆಯಲ್ಲಿ ಡಾಂಬರೀಕರಣಗೊಂಡಿದ್ದ ರಸ್ತೆಯು ಕಳಪೆ ಆಗಿದ್ದು, ಮೂರು ದಿನಗಳಲ್ಲಿ ಗುಂಡಿ ಬಿದ್ದಿತ್ತು. ಇದರಿಂದ ದೇಶವ್ಯಾಪಿ ಮುಜುಗರಕ್ಕೆ ಒಳಗಾಗಿದ್ದ ಬಿಬಿಎಂಪಿ ಭ್ರಷ್ಟಾಚಾರವನ್ನು ಮರೆ ಮಾಚಲು ಮೂವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಶನಿವಾರ ರಸ್ತೆಯನ್ನು ಗುತ್ತಿಗೆಗೆ ಪಡೆದಿದ್ದ ಗುತ್ತಿಗೆದಾರ ರಮೇಶ್ಗೆ ದಂಡವನ್ನು ವಿಧಿಸಿದೆ.
ಕೇವಲ 9 ಕಿ.ಮೀ. ರಸ್ತೆ ಮಾಡಲು 11.50 ಕೋಟಿ ರೂ. ವೆಚ್ಚ ಮಾಡಿರುವುದಾಗಿ ಬಿಬಿಎಂಪಿ ತಿಳಿಸಿದ್ದು, ರಸ್ತೆಯನ್ನು ಕಳಪೆಯಾಗಿ ನಿರ್ಮಿಸಿದ್ದಕ್ಕೆ ಗುತ್ತಿಗೆದಾರ ರಮೇಶ್ಗೆ ಕೇವಲ 3 ಲಕ್ಷ ರೂ. ದಂಡ ವಿದಿಸಿದೆ. ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಬಿಜೆಪಿ ಸರಕಾರವು ತೀವ್ರ ಟೀಕೆಗಳಿಗೆ ಒಳಗಾಗಿತ್ತು. ಅದನ್ನು ಮರೆಮಾಚಲು ಕಡಿಮೆ ದಂಡವನ್ನು ವಿಧಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.