ತುರ್ತು ಪರಿಸ್ಥಿತಿ ದೇಶದ ದುರ್ದೈವ: ಸಂಸದ ಡಿ.ವಿ.ಸದಾನಂದಗೌಡ

Update: 2022-06-25 15:55 GMT

ಬೆಂಗಳೂರು, ಜೂ.25: ಇಂದಿರಾ ಗಾಂಧಿ ಪ್ರಧಾನಿಯಾದ ಬಳಿಕ ಸಂವಿಧಾನದ ಯಾವುದೇ ಪರಿಚ್ಛೇದಗಳಿಗೆ ಗೌರವ ಕೊಡಲಿಲ್ಲ. ತುರ್ತು ಪರಿಸ್ಥಿತಿ ದೇಶದ ದುರ್ದೈವ. 1975ರಲ್ಲಿ ಸುಮಾರು 25 ತಿಂಗಳ ಕಾಲ ತುರ್ತು ಪರಿಸ್ಥಿತಿ ಹೇರಲಾಯಿತು ಎಂದು ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದರು.

ಶನಿವಾರ ನಗರದಲ್ಲಿ ಬಿಜೆಪಿ ಬೆಂಗಳೂರು ಮಹಾನಗರದ ವತಿಯಿಂದ ಏರ್ಪಡಿಸಿದ್ದ ‘ತುರ್ತು ಪರಿಸ್ಥಿತಿಗೆ’ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯ ದಿನಗಳು ಮತ್ತೆಂದೂ ಬರಬಾರದು ಎಂದು ದೇಶದ ಎಲ್ಲ 138 ಕೋಟಿಗೂ ಹೆಚ್ಚು ಜನರು ನಿರ್ಧರಿಸಬೇಕಿದೆ. ಅದಕ್ಕಾಗಿಯೇ ಆ ಕರಾಳ ದಿನಗಳನ್ನು ಮತ್ತೆ ನೆನಪಿಸಲಾಗುತ್ತಿದೆ ಎಂದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅನೇಕ ಹೋರಾಟಗಾರರು, ಅಂದಿನ ವಿರೋಧ ಪಕ್ಷದ ಮುಖಂಡರು ಜೈಲಿನಲ್ಲಿದ್ದರು. ಆದುದರಿಂದ, ಇಂದು ಜೈಲನ್ನು ಸಂದರ್ಶಿಸಲಾಯಿತು. ಇಂಥದ್ದನ್ನು ವಿರೋಧಿಸಲು ಪ್ರೇರಣೆ ಇಲ್ಲಿ ಲಭಿಸಿದೆ. ಸ್ವಾತಂತ್ರ್ಯ ನಂತರ ಪ್ರಧಾನಿ ಜವಾಹರಲಾಲ್ ನೆಹರು ನಡೆಸಿದ ಆಡಳಿತದಲ್ಲಿ ರಾಷ್ಟ್ರೀಯ ಸಂಸ್ಕøತಿಗೆ ವಿರುದ್ಧವಾಗಿ ಮತ್ತು ದೇಶೀಯ ವಿಚಾರಕ್ಕೆ ಒತ್ತು ಕೊಡಲಿಲ್ಲ ಎಂದು ಸದಾನಂದಗೌಡ ತಿಳಿಸಿದರು.

ವಿದೇಶೀಯರ ವಿಚಾರದ ಆಧಾರದಲ್ಲಿ ಆಡಳಿತ ನಡೆಸಲಾಯಿತು. ಇದನ್ನು ಆಕ್ಷೇಪಿಸಿ ಅಂದಿನ ದಿನಗಳಲ್ಲಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇಂದಿರಾ ಗಾಂಧಿ ಅಧಿಕಾರ ಲಾಲಸೆಯಿಂದ ಇಲ್ಲಸಲ್ಲದ ಕಾರಣ ನೀಡಿ ತುರ್ತು ಪರಿಸ್ಥಿತಿ ಹೇರಿದ್ದರು. ಪ್ರತಿರೋಧ ತೋರದಂತೆ ಅನೇಕರನ್ನು ಜೈಲಿಗೆ ಕಳುಹಿಸಲಾಯಿತು. ಅಂದಿನ ರಾಷ್ಟ್ರಪತಿಯಾಗಿ ಫಕ್ರುದ್ದೀನ್ ಅಲಿ ಇದ್ದದ್ದೂ ದೇಶದ ದುರ್ದೈವ ಎಂದು ಅವರು ಹೇಳಿದರು.

ಕಾನೂನಿಗೂ ತಿದ್ದುಪಡಿ ತರಲಾಯಿತು. ಆರೆಸ್ಸೆಸ್ ಸೇರಿ ದೇಶಪ್ರೇಮಿ ಸಂಘಟನೆಗಳಿಗೆ ನಿಷೇಧ ಹೇರಲಾಗಿತ್ತು. ತುರ್ತು ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳೂ ವಿರೋಧಿಸಿದ್ದರು. 1977ರಲ್ಲಿ ಅನಿವಾರ್ಯವಾಗಿ ಚುನಾವಣೆ ಘೋಷಿಸಿದಾಗ ಜೈಲಿನಲ್ಲಿದ್ದ ಎಲ್ಲ ಹಿರಿಯರು ಹೊರಬಂದು ಒಂದು ಒಕ್ಕೂಟ ರಚಿಸಿ ಜನತಾ ಪಕ್ಷದ ರಚನೆ ಮಾಡಿದರು. ಆ ಚುನಾವಣೆಯಲ್ಲಿ ಜನತಾ ಪಕ್ಷ ಗರಿಷ್ಠ ಸ್ಥಾನ ಪಡೆದು ಅಧಿಕಾರ ಪಡೆದು ಕರಾಳ ಛಾಯೆಗೆ ಮುಕ್ತಿ ಕೊಟ್ಟಿತು ಎಂದು ಸದಾನಂದಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಪಿ.ಸಿ.ಮೋಹನ್ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ. ಮಂಜುನಾಥ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News