ಮುಂದಿನ ರಾಷ್ಟ್ರಪತಿ ಅಭ್ಯರ್ಥಿ ರಬ್ಬರ್ ಸ್ಟ್ಯಾಂಪ್: ಪ್ರೊ.ರವಿವರ್ಮ ಕುಮಾರ್

Update: 2022-06-25 17:03 GMT
ಪ್ರೊ.ರವಿವರ್ಮ ಕುಮಾರ್

ಬೆಂಗಳೂರು, ಜೂ.25: ಮುಂದಿನ ರಾಷ್ಟ್ರಪತಿ ಅಭ್ಯರ್ಥಿಯನ್ನು ರಬ್ಬರ್ ಸ್ಟ್ಯಾಂಪ್ ಮಾಡಿಕೊಳ್ಳಲು ಆಯ್ಕೆ ಮಾಡಿಕೊಂಡಂತಿದೆ ಎಂದು ಪರೋಕ್ಷವಾಗಿ ಎನ್‍ಡಿಎ ಅಭ್ಯರ್ಥಿಯನ್ನು ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ಟೀಕಿಸಿದರು.

ಶನಿವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಿಂದ ಏರ್ಪಡಿಸಿದ್ದ ‘ತುರ್ತು ಪರಿಸ್ಥಿತಿ ನೆನಪಿನಲ್ಲಿ ಸಂವಿಧಾನ ಅವಲೋಕನ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 

ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೂ ಸ್ಫೂರ್ತಿ ತುಂಬುವ ಮಾತನಾಡಲಿಲ್ಲ. ಇದೀಗ ಮುಂದಿನ ರಾಷ್ಟ್ರಪತಿ ಅಭ್ಯರ್ಥಿಯನ್ನು ರಬ್ಬರ್ ಸ್ಟ್ಯಾಂಪ್ ಮಾಡಿಕೊಳ್ಳಲು ಆಯ್ಕೆ ಮಾಡಿಕೊಂಡಂತಿದೆ. ಅಷ್ಟೇ ಅಲ್ಲದೆ, ಬಿಜೆಪಿಯವರು ಇತಿಹಾಸವನ್ನೇ ಬುಡಮೇಲು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಈ ಹಿಂದಿನ ತುರ್ತು ಪರಿಸ್ಥಿತಿಗಿಂತಲೂ ಈಗಿನ ಸ್ಥಿತಿ ಭೀಕರವಾಗಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ರಾಷ್ಟ್ರದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದ್ದು, ಈ ವ್ಯವಸ್ಥೆಯನ್ನೇ ನಾಶಪಡಿಸುವ ಹುನ್ನಾರಗಳೂ ನಡೆಯುತ್ತಿವೆ. ಜತೆಗೆ, ಜಮ್ಮು–ಕಾಶ್ಮೀರದಲ್ಲಿ ಪರಿಸ್ಥಿತಿ ಸರಿ ದಾರಿಗೆ ಬಂದಿಲ್ಲ, ಇದಕ್ಕೆ ನ್ಯಾಯಾಂಗವೂ ಸ್ಪಂದಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‍ದಾಸ್ ಮಾತನಾಡಿ, ಈಗಿನ ವಿದ್ಯಮಾನ ಗಮನಿಸಿದರೆ ಆರ್ಥಿಕ ತುರ್ತು ಪರಿಸ್ಥಿತಿ ಹೇರುವ ದಿನಗಳೂ ದೂರವಿಲ್ಲ ಎನಿಸುತ್ತಿದೆ. ಜತೆಗೆ, ಹಿಂದಿಗಿಂತಲೂ ನೂರುಪಟ್ಟು ಸಮಸ್ಯೆಗಳಿವೆ. ಆದರೂ ಚಳವಳಿ ನಡೆಯುತ್ತಿಲ್ಲ. ಗುಲಾಮರಂತೆ ಜೀವಿಸುವ ಸ್ಥಿತಿಯಿದೆ ಎಂದು ನುಡಿದರು.

ಒಮ್ಮೆಯೂ ದೇಶ ಆರ್ಥಿಕ ತುರ್ತು ಪರಿಸ್ಥಿತಿಗೆ ಒಳಗಾಗಿಲ್ಲ. ಅಷ್ಟೇ ಅಲ್ಲದೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ವ್ಯವಸ್ಥೆಯನ್ನು ಪ್ರಶ್ನಿಸಿದರೆ ದೇಶದ್ರೋಹದ ಅಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಸಮಾಜವಾದಿ ಪ.ಮಲ್ಲೇಶ್ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಎಳೆಯ ಮಕ್ಕಳ ಮೇಲೆ ಹಿಂದುತ್ವ ಹೇರುವ ಹುನ್ನಾರ ನಡೆಯುತ್ತಿದೆ. ಬಿಜೆಪಿ ಆಡಳಿತದಿಂದ ಇಡೀ ದೇಶದಲ್ಲಿ ತಲ್ಲಣದ ವಾತಾವರಣವಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಚಾಮರಾಜನಗರ ಅಮೃತಭೂಮಿ ಇಂಟರ್‍ನ್ಯಾಷನಲ್ ಸೆಂಟರ್‍ನ ನಿರ್ದೇಶಕಿ ಚುಕ್ಕಿ ನಂಜುಂಡಸ್ವಾಮಿ, ಬರಹಗಾರ ಮಂಗ್ಳೂರ ವಿಜಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News