ತುರ್ತು ಪರಿಸ್ಥಿತಿಯಲ್ಲಿಯೂ ದೇಶದ ರಾಜಕಾರಣವನ್ನು ಬದಲಾಯಿಸಿದ್ದು ಜನಶಕ್ತಿ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-06-25 18:27 GMT

ಬೆಂಗಳೂರು, ಜೂನ್ 25: ತುರ್ತು ಪರಿಸ್ಥಿತಿಯಲ್ಲಿಯೂ  ಇಡೀ ದೇಶದ ರಾಜಕಾರಣ ಹಾಗೂ ಪ್ರಜಾಪ್ರಭುತ್ವವನ್ನು  ದೊಡ್ಡ ಪ್ರಮಾಣದಲ್ಲಿ ಬದಲಾಯಿಸಿದ್ದು ಜನಶಕ್ತಿ ಎಂದು ಮುಖ್ಯಮಂತ್ರಿ ಬಸವರಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತುರ್ತು ಪರಿಸ್ಥಿತಿ ಕರಾಳ ದಿನಾಚರಣೆಯ ಪ್ರಯುಕ್ತ ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿ ಮಾತನಾಡುತ್ತಿದ್ದರು.

ದೇಶದಲ್ಲಿ ಇಂಥದ್ದು ಘಟಿಸಿತ್ತು ಹಾಗೂ ಈ ದೇಶವನ್ನು ಉಳಿಸುವ ಶಕ್ತಿ ಜನಸಾಮಾನ್ಯರಿಗಿದೆ ಎನ್ನುವುದನ್ನು ತಿಳಿಸಲೆಂದು  ಕರಾಳ ದಿನಾಚರಣೆಯನ್ನು  ನಾವು ಆಚರಿಸಬೇಕಿದೆ. ಅಧಿಕಾರ ಎಂಬುದು ಸರ್ವ ಗುಣಧರ್ಮಗಳನ್ನು ಮರೀಚಿಕೆಯಾಗಿ  ಮಾಡಿ ತಾನು ತನ್ನದು, ತನ್ನ ಕುಟುಂಬ ಎನ್ನುವಂಥ ಜಗತ್ತಿನ ಭ್ರಮೆಯನ್ನು ಹುಟ್ಟಿಸಿ, ಅಧಿಕಾರವನ್ನು  ದುರುಪಯೋಗಪಡಿಸಿಕೊಳ್ಳುವ ಸ್ಥಿತಿ ದೇಶಕ್ಕೆ ಬಂದಿದ್ದು ದುರ್ದೈವದ ಸಂಗತಿ. ತಮ್ಮ  ಕುರ್ಚಿಯನ್ನು ಉಳಿಸಿಕೊಳ್ಳಲು ಅಲಹಾಬಾದಿನ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ತೀರ್ಪು ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯಾಗಿ ಉಳಿಯುವುದಿಲ್ಲ ಎಂದು ತಿಳಿದು ರಾತ್ರೋರಾತ್ರಿ ತುರ್ತು ಪರಿಸ್ಥಿತಿಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂದಿ ಹೇರಿದರು.

 ಪ್ರತಿರೋಧದ ಒಂದು ಶಬ್ಧವೂ ಬರಬಾರದೆಂದು ತುರ್ತು ಪರಿಸ್ಥಿತಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಜೈಲಿನಲ್ಲಿಟ್ಟಿದ್ದರು. ಎಲ್ಲಾ ರಾಜಕೀಯ ಸಂಘಟನೆಗಳ ಪ್ರಮುಖರನ್ನೂ ಜೈಲಿಗೆ ಕಳುಹಿಸಲಾಯಿತು. ಅವರ ಪಕ್ಷದಲ್ಲಿ  ಇದು ಸರಿಯಿಲ್ಲ ಎಂದವರನ್ನೂ ಜೈಲಿನಲ್ಲಿಟ್ಟಿದ್ದರು. ಜನ ಏನೂ ಮಾತನಾಡುವ ಪರಿಸ್ಥಿತಿ ಇರಲಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.  

ಜೆ.ಪಿ. ಚಳವಳಿಯಿಂದ ದೇಶದ ರಾಜಕಾರಣ ಬದಲಾವಣೆ: ಈ ದೇಶದ ರಾಜಕಾರಣ ಬದಲಾವಣೆಯಾಗಿದ್ದು, ಜೆ.ಪಿ. ಚಳವಳಿಯಿಂದ ಹಲವಾರು ಯುವಕರು ಈ ಚಳವಳಿಯಲ್ಲಿ ಧುಮುಕಿದ್ದರು. ಇಡೀ ದೇಶ ಒಂದಾಗಿತ್ತು.  ಕಾಂಗ್ರೆಸ್ ಪಕ್ಷದ ಬಗ್ಗೆ  ಅಭಿಮಾನದಿಂದ ಮಾತನಾಡುವವರೂ ಕೂಡ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದವರೇ.  ಒಂದು ರೀತಿಯಲ್ಲಿ ಇಡೀ ಸಂವಿಧಾನಕ್ಕೆ ಸವಾಲಾಗಿತ್ತು ತುರ್ತು ಪರಿಸ್ಥಿತಿ. ಸಂವಿಧಾನವನ್ನು ತಿರುಚುವ ರೀತಿ ಕಾರ್ಯಾಚರಣೆ ಮಾಡಿದರು. ತುರ್ತು ಪರಿಸ್ಥಿತಿ  ದೇಶಕ್ಕೆ ಮತ್ತು ಸಂವಿಧಾನಕ್ಕೆ ಸವಾಲಾಗಿತ್ತು. ಸಂಪೂರ್ಣ ಕ್ರಾಂತಿಯ ಜೊತೆಗೆ ಜನಶಕ್ತಿ ಮತ್ತು ರಾಜ್ಯ ಶಕ್ತಿಯ ನಡುವೆ ಸಂಘರ್ಷ ಉಂಟಾಗಿ,   ಇದರಲ್ಲಿ ಜನಶಕ್ತಿಯೇ ಗೆಲ್ಲಬೇಕು. ಜನಶಕ್ತಿಯ ಮುಂದೆ ದೈತ್ಯಶಕ್ತಿಯೂ ತಲೆಬಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.  

ಜನಶಕ್ತಿಯ ಧ್ವನಿಗೆ ಗೆಲುವು: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿದ್ದ ಕಿಚ್ಚು ತುರ್ತು ಪರಿಸ್ಥಿತಿಯಲ್ಲಿತ್ತು. ಹೀಗಾಗಿ ಜನಶಕ್ತಿಯ ಧ್ವನಿಯೇ ಯಾವಾಗಲೂ ಗೆಲ್ಲುವುದೆಂದು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕರಾಳ ದಿನಗಳು ಈ ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದೆ. ಇನ್ನೆಂದೂ ತುರ್ತು ಪರಿಸ್ಥಿತಿ ದೇಶದಲ್ಲಿ ಬರಬಾರದೆಂದು ಅನುಚ್ಛೇದವನ್ನು ಕಿತ್ತೊಗೆಯಲಾಯಿತು.  ತುರ್ತು ಪರಿಸ್ಥಿತಿಯಲ್ಲಿ ಕರ್ನಾಟಕದ ಪಾತ್ರ ದೊಡ್ಡದಿದೆ.  ಸಂಘದ ಪ್ರಮುಖರಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅದ್ವಾನಿ, ನಮ್ಮ ನಾಯಕರಾದ ಯಡಿಯೂರಪ್ಪನವರೂ ಕೂಡ ಜೈಲಿನಲ್ಲಿದ್ದರು.  ಆದರೆ ಯಾರೂ ಜಾಮೀನನ್ನೂ ಕೇಳಲಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.  

 ಪ್ರಜಾಪ್ರಭುತ್ವ ಯಶಸ್ವಿಯಾಗಬೇಕು: ದೇಶಕ್ಕಾಗಿ ಬದುಕಬೇಕು, ದುಡಿಯಬೇಕು, ದೇಶವನ್ನು ಕಟ್ಟಬೇಕು. ನಾವು ಉಳಿಸಿರುವ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕು.  ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಇಡೀ ಜಗತ್ತಿನ ವ್ಯವಸ್ಥೆಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು.  ಬದಲಾಗುತ್ತಿರುವ   ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಸಂವಿಧಾನ ರಚನೆಯಾಗಿದೆ. ಆ ಬದಲಾವಣೆ ಮಾಡುವ ಅಧಿಕಾರವೂ ಕೂಡ ಸಂವಿಧಾನದಲ್ಲಿದೆ. ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ಅದರಲ್ಲಿದೆ. ಸಂವಿಧಾನ ಯಶಸ್ವಿಯಾಗಬೇಕಿರುವುದು ಬಹಳ ಮುಖ್ಯ.  ಪ್ರಜಾಪ್ರಭುತ್ವ ಉಳಿಸಬೇಕಾದರೆ ಅದರ ಆಗುಹೋಗುಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

ದೇಶ ಕಟ್ಟಲು ಎಲ್ಲರೂ  ಭಾಗೀದಾರರಾಗಬೇಕು: ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಕಟ್ಟಲು ಎಲ್ಲರೂ ಭಾಗೀದಾರರಾಗಬೇಕು ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.  ನೀತಿ ಆಯೋಗ, ರಾಜ್ಯಗಳು ಶಕ್ತಿಯುತವಾಗಬೇಕು.  ಆರ್ಥಿಕ ಬಲವನ್ನು ತುಂಬಿದ್ದಾರೆ.ಜನ್ಧನ್, ಸ್ವಚ್ಛ ಭಾರತ್, ಡಿಬಿಟಿ ವ್ಯವಸ್ಥೆ,  ಜಲ್ ಜೀವನ್ ಮಿಷನ್,ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದಾರೆ. ಜನಕಲ್ಯಾಣದ ಗುರಿ, ಹೊಸ ದಿಕ್ಸೂಚಿಯನ್ನು ತಂದು ಭಾರತವನ್ನು ವಿಶ್ವನಾಯಕವಾಗುಸುವತ್ತ ಮುನ್ನೆಡೆಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News