ಬೆಂಗಳೂರು | ಟೀಸ್ಟಾ ಸೆಟಲ್ವಾಡ್ ಬಂಧನ ಖಂಡಿಸಿ ಪ್ರತಿಭಟನೆ
ಬೆಂಗಳೂರು, ಜೂ.26: ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ಪತ್ರಕರ್ತೆ ಟೀಸ್ಟಾ ಸೆಟಲ್ವಾಡ್ ಬಂಧನ ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರು, ಚಿಂತಕರು ರವಿವಾರ ನಗರದ ಪುರಭವನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪುರಭವನದ ಎದುರು ಜಮಾಯಿಸಿದ ಹೋರಾಟಗಾರರು, ಸರ್ವಾಧಿಕಾರ ಸಲ್ಲದು ಸಲ್ಲದು ಸಲ್ಲದು,
ಹಲವರನ್ನು ಕಳೆದುಕೊಂಡಿದ್ದೇವೆ. ಟೀಸ್ಟಾ ಅವರನ್ನು ಉಳಿಸಿಕೊಳ್ಳಲೇಬೇಕು ಎಂದು ಘೋಷಣೆ ಕೂಗಿದರು.
ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಳಗಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಬಳಗ ಸೇಡಿನ ರಾಜಕಾರಣ ಪ್ರಾರಂಭಿಸಿದೆ. ಸುಳ್ಳು ಆರೋಪದ ಮೇಲೆ ಟೀಸ್ಟಾ ಅವರನ್ನು ವಿಚಾರಣೆ ಹೆಸರಲ್ಲಿ ಕಸ್ಟಡಿಗೆ ತೆಗೆದುಕೊಂಡಿದೆ. ಇದು ಘೋರ ಅನ್ಯಾಯ. ಸರ್ವಾಧಿಕಾರಿ ದಬ್ಬಾಳಿಕೆ ಎಂದು ಹೋರಾಟಗಾರರು ಹೇಳಿದರು.
ಆನಂದ್ ತೇಲ್ತುಂಬ್ಡೆ ಆದಿಯಾಗಿ ಅನೇಕ ಹೋರಾಟಗಾರರು ವರ್ಷಗಟ್ಟಲೆ ಜೈಲಿನಲ್ಲಿದ್ದಾರೆ. ಫಾ. ಸ್ಟ್ಯಾನ್ ಸ್ವಾಮಿಯವರನ್ನು ಶಾಶ್ವತವಾಗಿ ಕಳೆದುಕೊಂಡಿದ್ದೇವೆ. ಈಗ ಟೀಸ್ಟಾ ಸರದಿ. ನಾವು ಅವರನ್ನು ಕಳೆದುಕೊಳ್ಳುವಂತಿಲ್ಲ. ಈ ಸರ್ವಾಧಿಕಾರವನ್ನು ಸಹಿಸಿಕೊಳ್ಳುವಂತಿಲ್ಲ ಎಂದು ಚಿಂತಕರು ತಿಳಿಸಿದರು.