ವರ್ಷದೊಳಗೆ ವಿಧಾನಸೌಧದ ಮುಂದೆ ಕೆಂಪೇಗೌಡರ ಪ್ರತಿಮೆ ಸ್ಥಾಪನೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-06-27 13:08 GMT

ಬೆಂಗಳೂರು, ಜೂ.27: ‘ಮುಂದಿನ ವರ್ಷದೊಳಗೆ ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದ ಮುಂದೆ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 513ನೆ ಜಯಂತಿ ಮತ್ತು ಕೆಂಪೇಗೌಡ ಅಂತರ್‍ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ತನ್ನ ಬದುಕಿನ ಆದರ್ಶಗಳಿಂದಾಗಿ ಕೆಂಪೇಗೌಡರು ‘ನಾಡಪ್ರಭು’ ಎಂಬ ಬಿರುದನ್ನು ಪಡೆದು, ನಾಡಿನ ಸಮಗ್ರ ಚಿಂತನೆ ಮಾಡುವ ಮೂಲಕ ಪ್ರತಿ ಜನರ ಬದುಕಿಗೂ ಕೊಡುಗೆ ನೀಡಿದ್ದಾರೆ' ಎಂದು ಸ್ಮರಿಸಿದರು.

‘ವಿಜಯನಗರ ಸಾಮ್ರಾಜ್ಯ, ಜನರನ್ನು ನಾಡು ಕಟ್ಟಲು ಬಳಕೆ ಮಾಡಿದ ಸುವರ್ಣ ಯುಗ. ಸಕಾರಾತ್ಮಕ ಧೋರಣೆಯಿಂದ ನಾಡನ್ನು ಕಟ್ಟಿದ ಶ್ರೇಯಸ್ಸು ಕೆಂಪೇಗೌಡರಿಗೆ ಸಲ್ಲುತ್ತದೆ. ಕೆಂಪೇಗೌಡರು ಹಾಕಿರುವ ಯೋಜನೆಗಳು, ಕನಸುಗಳು, ಅವರು ಕಟ್ಟಿರುವ ನಾಡನ್ನು ನಾವು ಬೆಳೆಸಿರುವ ಬಗ್ಗೆ ಸಿಂಹಾವಲೋಕನ ಮಾಡುವ ಸಂದರ್ಭವಿದು. ಬೆಂಗಳೂರು ಅಂತರರಾಷ್ಟ್ರೀಯ ನಗರ. ಕೆಂಪೇಗೌಡರು ಕೆರೆಕಟ್ಟೆಗಳನ್ನು, ಗ್ರಾಮಗಳನ್ನು ಕಟ್ಟಿದ್ದಾರೆ. ಸಮುದಾಯಗಳಿಗೆ ಹಾಗೂ ವ್ಯಾಪಾರಗಳಿಗೆ ಅವಕಾಶಗಳನ್ನು ಪೂರೈಸಿದ ದೂರದೃಷ್ಟಿಯ ನಾಯಕರಾಗಿದ್ದರು' ಎಂದು ಅವರು ತಿಳಿಸಿದರು.

ಮೂಲಭೂತ ಸೌಕರ್ಯ ಪೂರೈಕೆ: ‘ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಇದರ ಬಗ್ಗೆ ಸ್ಪಷ್ಟತೆ ಪಡೆದು ಕೆಲಸ ಮಾಡಿದರೆ ಯಾವುದೇ ಸಮಸ್ಯೆಯನ್ನೂ ಪರಿಹರಿಸಬಹುದು. ಸಮಸ್ಯೆಗಳನ್ನು ಆಯಾ ಕಾಲದಲ್ಲಿಯೇ ಪರಿಹರಿಸಬೇಕು. ಪ್ರತಿನಿತ್ಯ 5 ಸಾವಿರಕ್ಕಿಂತ ಹೆಚ್ಚು ಹೊಸ ವಾಹನಗಳು ರಸ್ತೆಗೆ ಇಳಿಯುತ್ತವೆ. ಬೆಂಗಳೂರಿನಲ್ಲಿ ಜನರಿಗಿಂತ ವಾಹನಗಳ ಸಂಖ್ಯೆ ಜಾಸ್ತಿಯಾಗಿದ್ದು, ಈ ನಗರಬಹಳಷ್ಟು ವಿಸ್ತರಣೆ ಆಗಿದೆ. ಬೆಳೆದಿರುವ ನಗರದಲ್ಲಿನ ಜನತೆಗೆ ರಸ್ತೆ, ನೀರು, ಮೂಲಭೂತ ಸೌಕರ್ಯಗಳನ್ನು ಪೂರೈಸಬೇಕಿದೆ. ಸಮಸ್ಯೆಯನ್ನು ಗುರುತಿಸಿ ಪರಿಹಾರ ನೀಡಬೇಕಿದೆ. ಬೆಂಗಳೂರಿಗೆ ಮುಂದಿನ 40 ವರ್ಷಗಳವರೆಗೂ ಬಳಸಬಹುದಾದಂತಹ ಉತ್ತಮ ಸಾರಿಗೆ ವ್ಯವಸ್ಥೆ, ಗುಣಮಟ್ಟದ ರಸ್ತೆ, ಮೂಲಭೂತ ಸೌಕರ್ಯ ಹಾಗೂ ಸ್ಯಾಟಿಲೈಟ್ ಟೌನ್‍ಗಳನ್ನು ನಿರ್ಮಿಸುವ ಮೂಲಕ ನಗರದಲ್ಲಿ ಸಾರಿಗೆಯನ್ನು ಸರಾಗಗೊಳಿಸಿ, ನಗರವನ್ನು ಅಭಿವೃದ್ಧಿಗೊಳಿಸಲು ಚಿಂತಿಸಲಾಗುತ್ತಿದೆ' ಎಂದು ಅವರು ತಿಳಿಸಿದರು.

ನಾಲ್ಕು ದಿಕ್ಕುಗಳಿಂದಲೂ ಅಭಿವೃದ್ಧಿ: ಬೆಂಗಳೂರಿನಲ್ಲಿ ವಿವಿಧ ರಂಗಗಳಿಗೆ ಸಂಬಂಧಿಸಿದ 400 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳಿವೆ. 400ಕ್ಕೂ ಹೆಚ್ಚು ಫಾರ್ಚೂನ್ ಕಂಪೆನಿಗಳಿವೆ. ಶೇ.43ರಷ್ಟು ಎಫ್‍ಡಿಐ ಕರ್ನಾಟಕದಲ್ಲಿ ಆಗುತ್ತಿದೆ. ಇವುಗಳಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ನೀಡುವ ಮೂಲಕ ಆಧುನಿಕ ಬೆಂಗಳೂರನ್ನು ನಿರ್ಮಿಸಲು ಸಾಧ್ಯ. ಬೆಂಗಳೂರಿನಲ್ಲಿನ ನಮ್ಮತನವನ್ನು ಉಳಿಸಿಕೊಂಡು ನಗರವನ್ನು ಅಭಿವೃದ್ಧಿಗೊಳಿಸುವ ದೃಷ್ಟಿಕೋನವಿರಬೇಕು' ಎಂದು ಅವರು ಪ್ರತಿಪಾದಿಸಿದರು.

‘ಬೆಂಗಳೂರು ನಾಲ್ಕು ದಿಕ್ಕುಗಳಿಂದಲೂ ಬೆಳೆಯಬೇಕೆಂಬುದು ಕೆಂಪೇಗೌಡರ ಉದ್ದೇಶ ಆಗಿತ್ತು. ಇದೆ ಮಾದರಿಯಲ್ಲಿ ಎಲ್ಲ ಸವಲತ್ತುಗಳಿರುವ ನಗರವನ್ನು ಅಭಿವೃದ್ಧಿಪಡಿಸುವ ಸರಕಾರದ ಚಿಂತನೆ ಕೆಂಪೇಗೌಡರೇ ಪ್ರೇರಣೆಯಾಗಿದ್ದಾರೆ' ಎಂದ ಅವರು, ‘ಕೆಂಪೇಗೌಡರ ಪ್ರಶಸ್ತಿಗೆ ಮಹತ್ವವನ್ನು ತಂದುಕೊಡುವ ಕೆಲಸ ಎಸ್ಸೆಂ ಕೃಷ್ಣ ಅವರಿಂದಾಗಿದೆ. ಐಟಿ ಕ್ಷೇತ್ರವನ್ನು ಉತ್ಕಷ್ಟ ಮಟ್ಟಕ್ಕೆ ತಂದವರು ಅವರು. ಬೆಂಗಳೂರನ್ನು ಸಿಂಗಪೂರ್ ಮಾಡುವುದಾಗಿ ಅಂದು ಅವರು ಹೇಳಿದ್ದರು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿದ್ದರೆ ಬೆಂಗಳೂರನ್ನು ಸಿಂಗಾಪುರ ಮಾದರಿಯಲ್ಲಿ ಬೆಳೆಸಬಹುದಾಗಿತ್ತು' ಎಂದು ತಿಳಿಸಿದರು.

ಇತಿಹಾಸ ಉಳಿಸುತ್ತೇವೆ: ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಟರ್ಮಿನಲ್-2 ಉದ್ಘಾಟನೆ ಸಂದರ್ಭದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಾಗುವುದು. ಪ್ರಧಾನಿ ಮೋದಿಯವರಿಂದ ಉದ್ಘಾಟನೆ ಮಾಡಿಸುವ ಉದ್ದೇಶವಿದೆ. ಪ್ರತಿಮೆ ಕಾರ್ಯಕ್ಕೆ ಈಗಾಗಲೇ 85 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ 23 ಕೋಟಿ ರೂ.ಗಳನ್ನು ಇನ್ನಿತರ ಕಾಮಗಾರಿಗಳಿಗೆ ಒದಗಿಸಲಾಗಿದೆ. ಕೆಂಪೇಗೌಡರ ಇತಿಹಾಸವನ್ನು ಬಿಂಬಿಸುವ ಕೆಲಸವನ್ನೂ ಇದು ಒಳಗೊಂಡಿದೆ' ಎಂದು ಅವರು ವಿವರಿಸಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಸಿದ್ಧವಾದಾಗ ದೇಶದಲ್ಲಿಯೇ ಅತ್ಯುತ್ತಮ ವಿಮಾನ ನಿಲ್ದಾಣವಾಗಲಿದೆ. ಆ ಸಂದರ್ಭದಲ್ಲಿ ಕೆಂಪೇಗೌಡದ ಹೆಸರು ಶಾಶ್ವತವಾಗಿ ಉಳಿಯುವಂಥ ಕೆಲಸವಾಗಿದೆ. ನಾಡುಕಟ್ಟಿದ ಕೆಂಪೇಗೌಡರ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವ ಕೆಲಸವಾಗಿದೆ' ಎಂದು ಅವರು ನುಡಿದರು.

ಶಿಕ್ಷಣ ಮತ್ತು ಉದ್ಯೋಗಕ್ಕೆ ಮಹತ್ವ: ‘ಮಾಗಡಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಇತಿಹಾಸ ಬಿಂಬಿಸುವ ಕೆಲಸವಾಗುತ್ತಿದೆ. ಬೆಂಗಳೂರು ವಿವಿಯಲ್ಲಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕೆಂದು 50 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಒಟ್ಟು 100ಕೋಟಿ ರೂ.ಗಳ ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣ ಮಾಡುತ್ತೇವೆ. ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 150ಕೋಟಿ ರೂ.ಅನುದಾನ ನೀಡಲಾಗಿದೆ.  ಸಮುದಾಯವನ್ನು ಕಟ್ಟಲೆಂದು ಯುವಕರ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಹತ್ವ ನೀಡಲಾಗುತ್ತಿದೆ. ಇದರ ರೂಪುರೇಷೆಗಳನ್ನು ಸಿದ್ಧಪಡಿಸಿ ಜುಲೈ ತಿಂಗಳಲ್ಲಿ ಅದಕ್ಕೆ ಚಾಲನೆ ನೀಡಲಾಗುವುದು ಎಂದು ಸಿಎಂ ಹೇಳಿದರು.

ಪ್ರಶಸ್ತಿ ಪ್ರದಾನ: ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ಕೆಂಪೇಗೌಡ ಅಂತರ್‍ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯೂ 5ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿತ್ತು. ಎಸ್ಸೆಂ ಕೃಷ್ಣ, ಇನ್ಫೋಸಿಸ್ ನಾರಾಯಣಮೂರ್ತಿ ಪರವಾಗಿ ಅವರ ಪತ್ನಿ ಸುಧಾಮೂರ್ತಿ ಹಾಗೂ ಪಡುಕೋಣೆ ಪರವಾಗಿ ಅವರ ಪುತ್ರ ವಿಮಲ್ ಪ್ರಶಸ್ತಿ ಸ್ವೀಕರಿಸಿದರು.

ಸಮಾರಂಭದಲ್ಲಿ ಸಚಿವರಾದ ಆರ್.ಅಶೋಕ್, ಡಾ.ಅಶ್ವತ್ಥ ನಾರಾಯಣ, ಆರ್.ಅಶೋಕ್, ಮುನಿರತ್ನ, ಕೆ.ಗೋಪಾಲಯ್ಯ, ಸುನಿಲ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ವೈ.ಎ.ನಾರಾಯಣಸ್ವಾಮಿ, ಅ.ದೇವೇಗೌಡ, ಗೋವಿಂದರಾಜು, ನಾಗರಾಜ್ ಯಾದವ್, ನಿರ್ಮಲಾನಂದನಾಥ ಸ್ವಾಮಿ, ನಂಜಾವಧೂತ ಸ್ವಾಮಿ, ಚಂದ್ರಶೇಖರನಾಥ ಸ್ವಾಮಿ ಪಾಲ್ಗೊಂಡಿದ್ದು, ಶಾಸಕ ರಿಝ್ವಾನ್ ಅರ್ಶದ್ ಅಧ್ಯಕ್ಷತೆ ವಹಿಸಿದ್ದರು.

‘ಕೆಂಪೇಗೌಡರು ಇಡೀ ನಾಡಿಗೆ ಸೇರಿದವರು. ಅವರ ಕೀರ್ತಿ, ಶ್ರೇಯಸ್ಸಿಗೆ ಇನ್ನಷ್ಟು ಮೆರಗು ಕೊಡುವ ರೀತಿಯಲ್ಲಿ ಕರ್ನಾಟಕವನ್ನು ಕಟ್ಟಬೇಕಿದೆ. ಆಡಳಿತ ಮಾಡುವ ಸಂದರ್ಭದಲ್ಲಿ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ. ಹಲವು ಸವಾಲುಗಳಿವೆ. ಸವಾಲುಗಳನ್ನೆ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ರಾಜ್ಯದ ಅಭಿವೃದ್ಧಿ ಮಾಡುತ್ತೇವೆ. ನವ ಕರ್ನಾಟಕದಿಂದ ನವ ಭಾರತದ ಅಭಿವೃದ್ಧಿ ಮಾಡುತ್ತೇವೆ'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News