ಪ್ರಧಾನಿ ಮೋದಿಯ ವ್ಯಕ್ತಿತ್ವ, ಜೀವನದ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Update: 2022-06-27 16:43 GMT

ಬೆಂಗಳೂರು, ಜೂ.27: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಾಲ್ಯದಿಂದ ದೇಶದ ಪ್ರಧಾನಿಯಾಗುವವರೆಗಿನ ಪ್ರಯಾಣವು ಕಷ್ಟಗಳು ಮತ್ತು ಕಠಿಣ ಪರಿಶ್ರಮದಿಂದ ಕೂಡಿದೆ. ಪ್ರತಿಯೊಬ್ಬ ವ್ಯಕ್ತಿಯೂ ನರೇಂದ್ರ ಮೋದಿಯ ವ್ಯಕ್ತಿತ್ವ ಮತ್ತು ಜೀವನದಿಂದ ಸ್ಫೂರ್ತಿ ಪಡೆಯಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಮೋದಿ @ 20 ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರೂಪಾ ಪಬ್ಲಿಕೇಷನ್ ತಂದಿರುವ ‘ಮೋದಿ @ 20 ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕವನ್ನು ಅಧ್ಯಯನ ಮಾಡುವ ಮೂಲಕ, ನರೇಂದ್ರ ಮೋದಿ ಅವರು ರಾಷ್ಟ್ರದ ಏಕತೆ-ಸಮಗ್ರತೆ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯವಾದಿ ಚಿಂತನೆಯೊಂದಿಗೆ ಮಾಡಿದ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯುತ್ತೀರಿ. ದೇಶದ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿ ಜನರ ಚಿಂತನೆಯಲ್ಲಿ ಬದಲಾವಣೆ ಆಗಲಿದೆ ಎಂದು ಅವರು ಹೇಳಿದರು.

ಧಾರ್ಮಿಕ, ಆಧ್ಯಾತ್ಮಿಕ ಮತ್ತು ರಾಷ್ಟ್ರೀಯ ಚಿಂತನೆಯ ವ್ಯಕ್ತಿ, ಆತ್ಮಸಾಕ್ಷಿಯ, ಪ್ರಾಮಾಣಿಕ, ಅಸಾಧಾರಣ ವಾಕ್ಚಾತುರ್ಯ ಹೊಂದಿರುವ, ಸಾಮರಸ್ಯ ವ್ಯಕ್ತಿತ್ವ, ಶಿಸ್ತಿನ ಜೀವನ, ತ್ವರಿತ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ, ದೂರದೃಷ್ಟಿ, ಸಮರ್ಥ ನಾಯಕತ್ವ, ನಮ್ರತೆ ಮತ್ತು ಹೋರಾಟ, ಸಕಾರಾತ್ಮಕತೆ ಮತ್ತು ಧೈರ್ಯದ ಸಂಕೇತವಾಗಿರುವ ನರೇಂದ್ರ ಮೋದಿ ಜಾಗತಿಕ ವೇದಿಕೆಯಲ್ಲಿ ಭಾರತದ ಗುರುತನ್ನು ಶಕ್ತಿಯುತ ದೇಶವಾಗಿ ಮಾಡಿದವರು ಎಂದು ರಾಜ್ಯಪಾಲ ಮೆಚ್ಚುಗೆ ವ್ಯಕ್ತಪಡಿಸಿದರು.
ನರೇಂದ್ರ ಮೋದಿ 12 ವರ್ಷಗಳ ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಮತ್ತು ಅವರ ಪರಿಣಾಮಕಾರಿ ಕಾರ್ಯಶೈಲಿ, ಸೇವಾ ಆಧಾರಿತ ಕೆಲಸಗಳಿಂದಾಗಿ ಅವರು ಗುಜರಾತ್ ರಾಜ್ಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮೊದಲ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡರು. ಅವರ ಅಭಿವೃದ್ಧಿ ಮಂತ್ರ, ಅವರನ್ನು ಗುಜರಾತ್ ರಾಜ್ಯಕ್ಕೆ ರಾಯಭಾರಿ(ಬ್ರಾಂಡ್ ಅಂಬಾಸಿಡರ್)ಯನ್ನಾಗಿ ಮಾಡಿತು ಮತ್ತು ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಗುಜರಾತ್ ಮಾದರಿ ಅಭಿವೃದ್ಧಿ ಎಂದು ಖ್ಯಾತಿಯನ್ನು ಗಳಿಸಿವೆ. ಇಂದು ಗುಜರಾತ್ ಮಾದರಿ ಅಭಿವೃದ್ಧಿ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.

1990ರಲ್ಲಿ ನರೇಂದ್ರ ಮೋದಿ ಮಧ್ಯಪ್ರದೇಶದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆಗಿನಿಂದಲೂ ನನಗೆ ಅವರ ಪರಿಚಯವಿದೆ. 2013 ರಲ್ಲಿ ನಡೆದ ಸಂಸತ್ತಿನ ಮಂಡಳಿಯ ಸಭೆಯಲ್ಲಿ, 2014ರ ಲೋಕಸಭೆ ಚುನಾವಣೆಯನ್ನು ನರೇಂದ್ರ ಮೋದಿ ನೇತೃತ್ವದಲ್ಲಿ ಎದುರಿಸಲಾಗುವುದು ಮತ್ತು ಅವರು ಪ್ರಧಾನಿ ಅಭ್ಯರ್ಥಿ ಎಂದು ನಿರ್ಧರಿಸಲಾಯಿತು. ಈ ನಿರ್ಧಾರದಲ್ಲಿ, ಸಂಸತ್ತಿನ ಮಂಡಳಿಯ ಸದಸ್ಯನಾಗಿ ನಾನು ಭಾಗಿಯಾಗಿದ್ದೆ ಎಂದು ಥಾವರ್‍ಚಂದ್ ಗೆಹ್ಲೋಟ್ ಸ್ಮರಿಸಿದರು.

ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ತ್ರಿವಳಿ ತಲಾಖ್ ರದ್ದತಿ, ಆರ್ಟಿಕಲ್ 370 ರದ್ದತಿ, ಜಿಎಸ್‍ಟಿ ಕಾನೂನು ಜಾರಿ, ನೋಟ್ ಬ್ಯಾನ್ ಇತ್ಯಾದಿ ಸೇರಿದಂತೆ ಹಲವು ಪ್ರಮುಖ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದೇಶದ ವಿವಿಧ ಸಮಸ್ಯೆಗಳು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಇತ್ಯಾದಿಗಳನ್ನು ಪರಿಹರಿಸಲು ಪ್ರಧಾನಿ ಮೋದಿ ಅನೇಕ ಪ್ರಮುಖ ಯೋಜನೆಗಳನ್ನು ಮಾಡಿದರು, ಇದರಿಂದಾಗಿ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಪ್ರಯೋಜನ ಪಡೆದಿದ್ದಾರೆ ಎಂದು ಅವರು ಹೇಳಿದರು.

ಮೋದಿ ಅವರು ಸಂಪುಟ ಸಭೆಗಳಲ್ಲಿ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದರ ಫಲಿತಾಂಶ ಇಂದು ಜನರ ಮುಂದಿದೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮತ್ತು ‘ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್’ ಅವರ ಚಿಂತನೆಯು ಇಂದು ಭಾರತವನ್ನು ವಿಶ್ವದ ದೊಡ್ಡ ಶಕ್ತಿಗಳಲ್ಲಿ ಸೇರಿಸಿದೆ ಎಂದ ಅವರು, ಮೋದಿಯವರ ನಾಯಕತ್ವದಲ್ಲಿ, ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಲಸಿಕೆಗಳನ್ನು ತಯಾರಿಸುವ ಮೂಲಕ ಮತ್ತು ದೇಶ ಮತ್ತು ವಿದೇಶಗಳಲ್ಲಿ ಬಳಕೆಗೆ ಲಸಿಕೆಗಳನ್ನು ಲಭ್ಯವಾಗುವಂತೆ ಮಾಡುವ ಮೂಲಕ ಭಾರತವು ‘ವಸುದೈವ ಕುಟುಂಬಕಂ’ ಚಿಂತನೆಯಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಮೋದಿಯವರ ನೇತೃತ್ವದಲ್ಲಿ ರಚಿತವಾದ ಕೇಂದ್ರ ಸರಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಸ್ಥಾನ ನೀಡಲಾಯಿತು. ಅವರ ಮಾರ್ಗದರ್ಶನ ಮತ್ತು ದಕ್ಷ ನಾಯಕತ್ವದಲ್ಲಿ, ದುರ್ಬಲ ವರ್ಗಗಳು, ಹಿರಿಯರು, ತೃತೀಯಲಿಂಗಿಗಳು ಮತ್ತು ದಿವ್ಯಾಂಗರ ಸಬಲೀಕರಣಕ್ಕಾಗಿ ನಾನು 7 ವರ್ಷಗಳ ಕಾಲ ಅನೇಕ ಮಹತ್ವದ ಕೆಲಸಗಳನ್ನು ಮಾಡಿದ್ದೇನೆ ಮತ್ತು ಆ ಸಮಯದಲ್ಲಿ 10 ಗಿನ್ನೆಸ್ ವಿಶ್ವ ದಾಖಲೆಗಳನ್ನು ಸಚಿವಾಲಯವು ಮಾಡಿದೆ ಎಂದು ರಾಜ್ಯಪಾಲ ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆಯ ರಾಜ್ಯ ಸಚಿವ ಲೋಗನಾಥನ್ ಮುರುಗನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ವಿ.ಸೋಮಣ್ಣ, ಬಿ.ಸಿ.ಪಾಟೀಲ್, ವಿ.ಸುನೀಲ್ ಕುಮಾರ್, ಶಾಸಕ ಉದಯ್ ಬಿ.ಗರುಡಾಚಾರ್, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ, ಇನ್ಫೋಸಿಸ್ ಸಹ ಸಂಸ್ಥಾಪಕಿ ಡಾ.ಸುಧಾ ಮೂರ್ತಿ, ವಾರ್ತಾ ಇಲಾಖೆಯ ಆಯುಕ್ತ ಡಾ.ಪಿ.ಎಸ್ ಹರ್ಷ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News