ಭಾರತದಲ್ಲಿ ಜಿ-20 ಶೃಂಗ ಸಭೆ 2023; ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಆಯೋಜನೆ: ಸಿಎಂ ಬೊಮ್ಮಾಯಿ

Update: 2022-06-27 16:43 GMT

ಬೆಂಗಳೂರು, ಜೂ. 27: ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಭಾರತದಲ್ಲಿ ಜಿ-20 ಶೃಂಗಸಭೆ 2023 ಆಯೋಜಿಸಲಾಗಿದ್ದು, ಇಡೀ ವಿಶ್ವಕ್ಕೆ ಭಾರತವನ್ನು ಪ್ರಬಲವಾಗಿ ಬಿಂಬಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಮೋದಿ @ 20: ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2023ರ ಜಿ 20 ಸಭೆಯನ್ನು ಭಾರತ ದೇಶ ಆಯೋಜಿಸಲಿದೆ. ವಿಶ್ವದ 20 ಪ್ರಮುಖ ರಾಷ್ಟ್ರಗಳ ಸಮ್ಮೇಳನ ಈ ಬಾರಿ ಭಾರತದಲ್ಲಿ ನಡೆಯಲಿದ್ದು, ಬೆಂಗಳೂರಿನಲ್ಲಿಯೂ ಜಿ-20ಯ 9 ಸಭೆಗಳು ನಡೆಯಲಿದೆ ಎಂದು ತಿಳಿಸಿದರು.

ಚಿರಸ್ಮರಣೀಯರು: ಸದಾಕಾಲ ಜನರ ಹೃದಯದಲ್ಲಿ ಸ್ಥಾನ ಗಳಿಸಲು ಜನನಾಯಕನಿಂದ ಮಾತ್ರ ಸಾಧ್ಯ. 130 ಕೋಟಿ ಜನಸಂಖ್ಯೆ, ಸಾವಿರಾರು ಜಾತಿಗಳು, ಹಲವಾರು ಸಂಸ್ಕøತಿಗಳ, ನೂರಾರು ಭಾಷೆಗಳಿರುವ ಭಾರತ ದೇಶದಲ್ಲಿ ಎಲ್ಲರ ಮಧ್ಯೆ ಭರವಸೆ ಹುಟ್ಟಿಸಿ, ಅದಕ್ಕೆ ತಕ್ಕಂತೆ ಕೆಲಸ ಮಾಡಿರುವುದು ಸುಲಭದ ಕೆಲಸವಲ್ಲ. ಮೋದಿಜಿಯವರು ಭಾರತವನ್ನು ಕಠಿಣ ನಿರ್ಣಯ, ಕರಾರುವಾಕ್ಕು ಕಾರ್ಯಕ್ರಮಗಳು, ದಿಟ್ಟತನದ ನಾಯಕತ್ವ, ಬಡವರಿಗಾಗಿ ವಿಶೇಷ ಕಾರ್ಯಕ್ರಮ, ಆರ್ಥಿಕ, ಸಾಮಾಜಿಕ ಬದಲಾವಣೆಯನ್ನು ತರುವ ಕೆಲಸವನ್ನು   ಮಾಡಿದ್ದಾರೆ. 

ಕೇಂದ್ರ ಸರಕಾರದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ವಿಶೇಷ ನೀತಿಯನ್ನು ರೂಪಿಸಿ 66 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಪರಿಸರ ಸಂರಕ್ಷಣೆ ಹಾಗೂ ನವೀಕರಿಸಬಹುದಾದ ಇಂಧನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಥನಾಲ್ ಉತ್ಪಾದಿಸಲಾಗುತ್ತಿದೆ. ಮಾಲಿನ್ಯ ತಗ್ಗುವುದಲ್ಲದೇ, ಇಂಧನ ಆಮದನ್ನು ನಿಯಂತ್ರಿಸಬಹುದಾಗಿದೆ. ಜನಸಂಖ್ಯೆಯೇ ಭಾರತ ದೇಶಕ್ಕೆ ಶಾಪ ಎಂದು ಪರಿಗಣಿಸಲಾಗುತ್ತಿತ್ತೋ, ಮೋದಿಯವರು ಅದನ್ನು ವರವಾಗಿ ಪರಿಣಮಿಸಿದರು. ಶೇ. 46ರಷ್ಟು ಯುವಜನತೆ ಭಾರತ ದೇಶದ ಶಕ್ತಿಯಾಗಿ ಪರಿಚಯಿಸಿದರು ಎಂದರು. ಹೀಗೆ ದೂರದೃಷ್ಟಿಯ ಚಿಂತನೆ ಪ್ರಧಾನಿ ಮೋದಿಯವರದ್ದು ಎಂದರು.

ಕನ್ನಡಾನುವಾದ ಜನರಿಗೆ ತಲುಪಿಸಲಾಗುವುದು: ಮೋದಿಯವರ ವಿಚಾರಗಳು ಮೋದಿ @ 20 ಪುಸ್ತಕದಲ್ಲಿ ನಮೂದಿಸಲಾಗಿದೆ. ಸುಧಾಮೂರ್ತಿ, ಡಾ.ದೇವಿಶೆಟ್ಟಿ, ಕ್ರೀಡಾಪಟು ಪಿ.ವಿ.ಸಿಂಧೂ ಸೇರಿದಂತೆ ಹಲವಾರು ಸಾಧಕರು ಈ ಪುಸ್ತಕಕ್ಕೆ ಬರೆದಿದ್ದಾರೆ. ಕರ್ನಾಟಕದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಪ್ರಧಾನಿ ಮೋದಿಯವರು ಕನ್ನಡ ನೆಲ, ಜಲ, ಉದ್ಯಮ, ಹೊಸ ತಂತ್ರಜ್ಞಾನ ಬಗೆಗೆ ಅಭಿಮಾನ ಹೊಂದಿದ್ದಾರೆ. ಅವರ ವಿಚಾರಧಾರೆಗಳನ್ನು ಕರ್ನಾಟಕದಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಅವರ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ರಾಜ್ಯದ್ಯಂತ ಹಂಚುವ ಕೆಲಸವನ್ನು ಮಾಡಲಾಗುವುದು ಎಂದರು.

ಭಾರತಕ್ಕೆ ವಿಶ್ವದಲ್ಲಿ ಅಗ್ರಮಾನ್ಯ ಸ್ಥಾನ: ಸಾರ್ವಜನಿಕ ಮೌಲ್ಯಗಳನ್ನು, ಆದರ್ಶಗಳನ್ನು ಸ್ಥಾಪನೆ ಮಾಡುವ ಮೂಲಕ ಮೋದಿಯವರು ದೇಶಕ್ಕೆ ಉತ್ತಮ ಚಾರಿತ್ರ್ಯವನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಜನರ ಎಲ್ಲ ಭರವಸೆಗಳನ್ನು ಯಶಸ್ವಿಯಾಗಿ ಈಡೇರಿಸಿದ್ದಾರೆ. ಸಮರ್ಥ ನಾಯಕತ್ವ, ಮಾನವೀಯ ಆಡಳಿತ, ಮೌಲ್ಯಯುತ ರಾಜಕಾರಣ ನೀಡುತ್ತಿರುವ ಮೋದಿಯವರ ಅವಶ್ಯಕತೆ ಭಾರತ ದೇಶಕ್ಕಿದೆ. ಭಾರತ ಇಡೀ ವಿಶ್ವದಲ್ಲಿ ಅಗ್ರಮಾನ್ಯ ಸ್ಥಾನ ಪಡೆಯುವಂತಾಗಲು ಶ್ರಮ ವಹಿಸುತ್ತಿದ್ದಾರೆ. ಮೋದಿಯವರ ವಿಚಾರಧಾರೆಗಳನ್ನು, ಕಾರ್ಯಕ್ರಮಗಳನ್ನು ಒಪ್ಪಿ ಬೆಂಬಲಿಸುವ ಅವಶ್ಯಕತೆ ಇದೆ ಎಂದರು.

ನಿಜನಾಯಕ: ತನಗಾಗಿ ಬದುಕುವುದು ಸಹಜ, ಆದರೆ, ಇತರರಿಗೆ ಬದುಕುವುದು ದೊಡ್ಡ ಗುಣ. ಅಧಿಕಾರ ಬಂದಾಗ ದೇಶ, ನಾಡು, ಬಡವರ ಬಗ್ಗೆ ಚಿಂತೆ ಮಾಡುವವರು ನಿಜ ನಾಯಕ. ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಹಾಗೂ ಬಂದ ನಂತರ ಮೋದಿಯವ ವಿಚಾರಧಾರೆ, ಆದರ್ಶ ಬದುಕು ಬದಲಾವಣೆಯಾಗಿಲ್ಲ. ಎಲ್ಲವೂ ಇದ್ದಾಗ, ಸರಳತೆ, ಸಾಮಾನ್ಯ ಮನುಷ್ಯನ ರೀತಿಯಲ್ಲಿ ಬದುಕುವುದು ಮುಖ್ಯ ಮತ್ತು ಅಧಿಕಾರದ ಬಲದಿಂದ ಇತತರಿಗೆ ಸಹಾಯ ಮಾಡುವ ಗುಣ ನಾಯಕನಿಗೆ ಅಗತ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News