ಸಂಪಾಜೆ | ಭಾರೀ ಮಳೆಗೆ ಮನೆ, ತೋಟಗಳು ಜಲಾವೃತ: ಗುಡ್ಡ ಕುಸಿದು ಮನೆಗಳಿಗೆ ಹಾನಿ

Update: 2022-07-02 05:18 GMT

ಸುಳ್ಯ, ಜು.1: ಶುಕ್ರವಾರ ರಾತ್ರಿಯಿಂದ ಬಳಿಕ ಭಾರೀ ಮಳೆಯಾಗುತ್ತಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದೆ. ಸಂಪಾಜೆ ಗ್ರಾಮದಲ್ಲಿ ಅಲ್ಲಲ್ಲಿ ಬರೆ ಕುಸಿತ ಉಂಟಾಗಿದ್ದು, ಗೂನಡ್ಕ ದರ್ಖಾಸಿನ ಗಣೇಶ್ ಭಟ್ ಎಂಬವರ ಮನೆಗೆ ಹಾನಿಯಾಗಿದೆ. ಧರಣಿ ದಯಾನಂದ ಎಂಬವರ ಮನೆ ಜಲಾವೃತವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ.

ಸಂಪಾಜೆ ಜ್ಯೂನಿಯರ್ ಕಾಲೇಜಿನ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೆ ಕುಸಿತ ಉಂಟಾಗಿದೆ. ಪಯಸ್ವಿನಿ ನದಿ ಹಾಗೂ ಇತರ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಪೇರಡ್ಕ-ದರ್ಕಾಸ್ ಸಂಪರ್ಕ ಕಡಿತಗೊಂಡಿದೆ. ಅಲ್ಲಲ್ಲಿ ತೋಟಗಳಿಗೆ ನೀರು ನುಗ್ಗಿದೆ. ಅಬೂಸಾಲಿ, ಜಿ.ಜಿ.ಶಿವಾನಂದ, ಜಿ.ಜಿ.ಹಿಮಕರ, ಚಂದ್ರ ಅವರ ತೋಟಗಳು ಸೇರಿ ಹಲವು ತೋಟಗಳಿಗೆ, ಕೃಷಿ ಭೂಮಿಗೆ, ನದೀ ಪಾತ್ರದ ಪ್ರದೇಶಗಳು ಜಲಾವೃತವಾಗಿದೆ. ಹಲವು ಕಡೆಗಳಲ್ಲಿ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ.

ಕಳೆದ ಕೆಲವು ದಿನಗಳಿಂದ ಆಗಾಗ್ಗೆ ಸಂಭವಿಸುತ್ತಿರುವ ಭೂ ಕಂಪನದಿಂದ ಆತಂಕಿತರಾಗಿರುವ ಸಂಪಾಜೆಯಲ್ಲಿ ಈಗ ಮಳೆ ಆವಾಂತರ ಸೃಷ್ಟಿಸಿದೆ. ಊರುಬೈಲು ಭಾಗದಲ್ಲಿಯೂ ಬರೆ ಕುಸಿತ ಉಂಟಾಗಿದ್ದು, ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News