ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಮಾದರಿ ಶಾಲೆಗಳ ಸ್ಥಾಪನೆ- ಸಚಿವ ಎಸ್. ಅಂಗಾರ

Update: 2022-07-02 17:33 GMT

ಪುತ್ತೂರು: ಶಿಕ್ಷಣ ಎಂಬುದು ಬದುಕಿಗೆ ಬೆಳಕು ನೀಡುವ ಕ್ಷೇತ್ರವಾಗಿದೆ. ಅಲ್ಪ ಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು ಮೌಲಾನಾ ಅಝಾದ್‍ನಂತಹ ಮಾದರಿ ಶಾಲೆಗಳನ್ನು ಸ್ಥಾಪಿಸಿ ಮುನ್ನಡೆಸುತ್ತಿದೆ ಎಂದು ರಾಜ್ಯ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.

ಅವರು ಶನಿವಾರ ಪುತ್ತೂರು ನಗರದ ಪಡೀಲ್‍ನಲ್ಲಿ ರೂ. 2.35 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಮೌಲಾನಾ ಆಝಾದ್ ಮಾದರಿ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ 2017-18ನೇ ಸಾಲಿನಲ್ಲಿ 100 ಹಾಗೂ 2018-19ನೇ ಸಾಲಿನಲ್ಲಿ 100 ಮೌಲಾನಾ ಅಝಾದ್ ಮಾದರಿ ಶಾಲೆ ಸೇರಿದಂತೆ ಒಟ್ಟು 200 ಶಾಲೆಗಳನ್ನು ಆರಂಭಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ 8 ಶಾಲೆಗಳಿದ್ದು, 2400 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯಿಂದಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರವು ಇಂತಹ ಶಾಲೆಗಳನ್ನು ಸ್ಥಾಪಿಸಿ ಮುನ್ನಡೆಸುತ್ತಿದೆ. ವಿದ್ಯಾರ್ಥಿ ಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. 

ದೇಶದ ಸ್ವಾತಂತ್ರ್ಯದ ಹಿಂದೆ ಅನೇಕರ ಶ್ರಮವಿದೆ. ಇಂತಹ ಮಹಾನ್ ವ್ಯಕ್ತಿಗಳೇ ದೇಶವನ್ನು ಸೃಷ್ಠಿ ಮಾಡಿದ ವ್ಯಕ್ತಿಗಳು. ಅಂತಹವರಲ್ಲಿ ಒಬ್ಬರಾದ ಮೌಲಾನಾ ಅಝಾದ್ ಅವರ ಹೆಸರಿನಲ್ಲಿ ಆರಂಭಿಸಲಾದ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರದೊಂದಿಗೆ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ ಸರ್ವ ಜನಾಂಗದ ಶಾಂತಿಯ ತೋಟವೆನಿಸಿರುವ ಭಾರತದಲ್ಲಿನ 130 ಕೋಟಿ ಜನರು ದೇಶಕ್ಕಾಗಿ ಬದುಕಬೇಕು. ಅದಕ್ಕಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ರಾಷ್ಟ್ರಾಭಿಮಾನ ಮೂಡಿಸುವ ಶಿಕ್ಷಣ ಸಿಗಬೇಕು. ಇದೀಗ ಮೌಲಾನಾ ಆಝಾದ್ ಹೆಸರಿನಲ್ಲಿ  ಶಾಲೆಯನ್ನು ಸರ್ಕಾರ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಎಪಿಜೆ ಅಬ್ದುಲ್ ಕಲಾಂ ಹೆಸರಿನಲ್ಲಿ ಸರ್ಕಾರಿ ಮಾದರಿ ಶಾಲೆಗಳನ್ನು ಆರಂಭಿಸಲಾಗುವುದು. ಈ ಶಾಲೆಯಲ್ಲಿ ಕಲಿತ ಮಕ್ಕಳು ಮೌಲಾನಾ ಅಝಾದ್, ಎಪಿಜೆ ಅಬ್ದುಲ್ ಕಲಾಂ, ಜಾಕೀರ್ ಹುಸೇನ್, ಕಬೀರ್‍ದಾಸ್‍ರಂತೆ ದೇಶಪ್ರೇಮವನ್ನು ಮೂಡಿಸಬೇಕು ಎಂದರು. 

ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಮೂಲಕ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಮಾಡುತ್ತಿರುವ ಸರ್ಕಾರವು ಮುಂದಿನ ದಿನಗಳಲ್ಲಿ ಹೋಬಳಿಗೊಂದು ಮಾದರಿ ಶಾಲೆಗಳನ್ನು ಆರಂಭಿಸಲಿದೆ. ಅಲ್ಪ ಸಂಖ್ಯಾತ ಸಮುದಾಯದ ಶಿಕ್ಷಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಅಲ್ಲದೆ ಅಲ್ಪ ಸಂಖ್ಯಾತ ನಿಗಮ ಮಂಡಳಿಗಳಿಗೆ ಹಾಗೂ ಉರ್ದು ಅಕಾಡಮಿಗೆ ಕೋಟ್ಯಾಂತರ ಅನುದಾನ ಒದಗಿಸುತ್ತಿದೆ. ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಡ್ರೋಣ್ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸಿ ಆಸ್ತಿಗಳ ರಕ್ಷಣಾ ಕಾರ್ಯ ನಿರ್ವಹಿಸುತ್ತಿದೆ. ಶ್ರಮಶಕ್ತಿ ಯೋಜನೆಯ ಮೂಲಕ ಜನರ ಆರ್ಥಿಕ ಅಭಿವೃದ್ಧಿಗಾಗಿ ಯೋಜನೆ ರೂಪಿಸಿದೆ ಎಂದರು. 

ಈ ಸಂದರ್ಭ ಸಚಿವ ಎಸ್. ಅಂಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‍ಎಸ್‍ಎಲ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶಾಲೆಯ ವಿದ್ಯಾರ್ಥಿಗಳನ್ನು ಸಚಿವ ಅಂಗಾರ ಮತ್ತು ಶಾಸಕ ಸಂಜೀವ ಮಠಂದೂರು ಅವರು ಸನ್ಮಾನಿಸಿ ಗೌರವಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲಾಯಿತು. 

ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ತಹಸೀಲ್ದಾರ್ ನಿಸರ್ಗಪ್ರಿಯ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ದ.ಕ.ಜಿಲ್ಲಾ ಅಧಿಕಾರಿ ಅಂಜನಪ್ಪ ಎಸ್, ತಾಲೂಕು ವಿಸ್ತರಣಾಧಿಕಾರಿ ವೀರಭದ್ರಪ್ಪ ಬಿ.ಎಸ್, ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರು ಅವಿನಾಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿದರು. ಶಿಕ್ಷಕ ಮಹಮ್ಮದ್ ತೌಸೀಫ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News