ಪರಿಷತ್ ಮಾಜಿ ಸದಸ್ಯ ಶ್ರೀನಾಥ್ ಕಾಂಗ್ರೆಸ್ ಸೇರ್ಪಡೆ

Update: 2022-07-03 14:11 GMT

ಬೆಂಗಳೂರು, ಜು. 3: ಮಾಜಿ ಸಂಸದ ಎಚ್.ಜಿ.ಶ್ರೀರಾಮುಲು ಅವರ ಪುತ್ರ ಹಾಗೂ ಪರಿಷತ್ ಮಾಜಿ ಸದಸ್ಯ ಶ್ರೀನಾಥ್ ಅವರು ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರ ಮುಖಂಡರ ಸಮ್ಮುಖದಲ್ಲಿ ಜೆಡಿಎಸ್ ತೊರೆದು ರವಿವಾರ ಕಾಂಗ್ರೆಸ್ ಪಕ್ಷಕ್ಕೆ ವಿದ್ಯುಕ್ತವಾಗಿ ಸೇರ್ಪಡೆಯಾದರು.

ಶ್ರೀನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ‘ಇಂದು ಕೊಪ್ಪಳ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷವಾದ ದಿನ. ಗಾಂಧಿ ಕುಟುಂಬದ ಜತೆ ಎಚ್.ಜಿ. ರಾಮುಲು ಅವರ ಕುಟುಂಬದ ಅತ್ಯುತ್ತಮ ಬಾಂಧವ್ಯ ಹೊಂದಿದ್ದು, ಇಂದಿರಾ ಗಾಂಧಿ ಅವರು ಅನೇಕ ಬಾರಿ ಇವರ ಮನೆಗೆ ಭೇಟಿ ನೀಡಿದ್ದಾರೆ. ಆದರೆ, ಕೆಲವು ವರ್ಷಗಳ ಹಿಂದೆ ಕಾರಣಾಂತರಗಳಿಂದ ಅವರು ಪಕ್ಷ ತೊರೆದಿದ್ದರು' ಎಂದು ಸ್ಮರಿಸಿದರು.

‘ಏಳೆಂಟು ತಿಂಗಳ ಹಿಂದೆ ನಾನು ಶ್ರೀನಾಥ್ ಅವರ ತಂದೆ ರಾಮುಲು ಅವರನ್ನು ಭೇಟಿ ಮಾಡಿ ಹಳೇ ಕಹಿ ಘಟನೆಗಳನ್ನು ಮರೆತು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರಬೇಕೆಂದು ಕೇಳಿದ್ದೆ. ಎಸ್ಸೆಂ ಕೃಷ್ಣ ಅವರು ಸಿಎಂ ಆಗುವ ಮುನ್ನ ಸೋನಿಯಾ ಗಾಂಧಿ ಅವರು ನನಗೆ ಮೂರು ಕುಟುಂಬಗಳನ್ನು ಭೇಟಿ ಮಾಡಲು ಸೂಚಿಸಿದ್ದರು. ಅವುಗಳಲ್ಲಿ ಒಂದು ಎಚ್.ಜಿ ರಾಮುಲು ಅವರ ಕುಟುಂಬವೂ ಒಂದು. ನಾನು ಮತ್ತು ಕೃಷ್ಣ ಅವರು ಇವರ ಮನೆಗೆ ಭೇಟಿ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದೆವು. ಇವರ ಕುಟುಂಬದ ಜತೆಗೆ ಉಳಿದ ಎರಡು ಕುಟುಂಬಗಳೆಂದರೆ ಮುರುಘಾ ಗೋವಿಂದ ರೆಡ್ಡಿ ಹಾಗೂ ಸಚ್ಚಿದಾನಂದ ಸ್ವಾಮಿ ಅವರ ಕುಟುಂಬ. ನಾವು ಇವರ ಮನೆಗೂ ಹೋಗಿದ್ದೆವು. ಗಾಂಧಿ ಕುಟುಂಬಕ್ಕೂ ಈ ಕುಟುಂಬಗಳಿಗೂ ಅತ್ಯುತ್ತಮ ಸಂಬಂಧ ಇತ್ತು' ಎಂದು ತಿಳಿಸಿದರು.

‘ಇಂದು ಶ್ರೀನಾಥ್ ಅವರು ಯಾವ ಷರತ್ತೂ ಇಲ್ಲದೇ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂಬ ಒಂದು ಷರತ್ತನ್ನು ಮಾತ್ರ ನಾವು ಹಾಕಿದ್ದೇವೆ. ಮಲ್ಲಿಕಾರ್ಜುನ ನಾಗಪ್ಪ ಅವರು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಶ್ರೀನಾಥ್ ಅವರು ಪರಿಷತ್ ಸದಸ್ಯರಾಗಬೇಕೆಂದು ಕೇಳಿರಲಿಲ್ಲ. ಆದರೂ ಅವರ ಮನೆ ಬಾಗಿಲಿಗೆ ಅಧಿಕಾರ ಹುಡುಕಿಕೊಂಡು ಹೋಗಿತ್ತು. ಶ್ರೀನಾಥ್ ಹಾಗೂ ಅವರ ಬೆಂಬಲಿಗರ ಸೇರ್ಪಡೆಗೆ ಹೈಕಮಾಂಡ್ ಒಪ್ಪಿದೆ. ಅಲ್ಲಂ ವೀರಭದ್ರಪ್ಪರ ಸಮಿತಿಯೂ ಎಲ್ಲರ ಜತೆ ಮಾತನಾಡಿದೆ. ನಾನು ಜಿಲ್ಲಾಧ್ಯಕ್ಷರು, ಇಕ್ಬಾಲ್ ಅನ್ಸಾರಿ ಅವರ ಜತೆ ಮಾತುಕತೆ ನಡೆಸಿ, ಎಲ್ಲರ ಒಮ್ಮತದಿಂದ ಶ್ರೀನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ' ಎಂದು ಅವರು ತಿಳಿಸಿದರು.

‘ನಮ್ಮ ಸಮೀಕ್ಷೆ ಪ್ರಕಾರ ಈ ಬಾರಿ ಕೊಪ್ಪಳ ಜಿಲ್ಲೆಯ ಐದಕ್ಕೆ ಐದು ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಲಿದೆ. ಇದನ್ನು ನಿಜ ಮಾಡಲು ನೀವೆಲ್ಲರೂ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ, ಸೋನಿಯಾ ಗಾಂಧಿ ಅವರ ಪರವಾಗಿ ಜಿಲ್ಲಾ ಮುಖಂಡರಾದ ಇಕ್ಬಾಲ್ ಅನ್ಸಾರಿ ಸಮ್ಮುಖದಲ್ಲಿ ಶ್ರೀನಾಥ್ ಹಾಗೂ ಅವರ ಕುಟುಂಬ, ಬೆಂಬಲಿಗರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ಕೊಪ್ಪಳದಲ್ಲಿ ಸಮಾವೇಶ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಆಲೋಚನೆ ಇತ್ತು. ಸದ್ಯಕ್ಕೆ ಪಕ್ಷ ಸೇರ್ಪಡೆ ಆಗಲಿ. ಇವರ ಸೇರ್ಪಡೆ ವಿಚಾರವಾಗಿ ಎಲ್ಲೂ ಭಿನ್ನಾಭಿಪ್ರಾಯ ಇಲ್ಲ' ಎಂದು ಅವರು ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಶಿವರಾಜ್ ತಂಗಡಗಿ, ಮಲ್ಲಿಕಾರ್ಜುನ ನಾಗಪ್ಪ, ಶಾಸಕರಾದ ಹುಲಗೇರಿ, ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ್, ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News