ಮಳಲಿ ಪೇಟೆ ಮಸೀದಿ ವಿವಾದ; ಜು.22ಕ್ಕೆ ತೀರ್ಪು ಕಾಯ್ದಿರಿಸಿದ ಮಂಗಳೂರಿನ ಸಿವಿಲ್ ನ್ಯಾಯಾಲಯ

Update: 2022-07-06 17:12 GMT

ಮಂಗಳೂರು: ಮಳಲಿ ಪೇಟೆ ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ತನ್ನ ತೀರ್ಪನ್ನು ಜು.22ಕ್ಕೆ ಕಾಯ್ದಿರಿಸಿದೆ.

ಮಳಲಿಯ ಧನಂಜಯ ಮತ್ತು ಮನೋಜ್ ಕುಮಾರ್ ಎಂಬವರು ದಾಖಲಿಸಿದ್ದ ಅರ್ಜಿಗೆ ಸಂಬಂಧಿಸಿ ಮಂಗಳೂರಿನ ಮೂರನೇ ಸಿವಿಲ್ ನ್ಯಾಯಾಲಯವು ವಿಚಾರಣೆ ನಡೆಸಿತ್ತು. ಈ ಸಂದರ್ಭ ಮಸೀದಿಯ ಪರ ವಕಾಲತ್ತು ನಡೆಸಿದ್ದ ವಕೀಲರು ಪ್ರಕರಣವು ಸಿವಿಲ್ ನ್ಯಾಯಾಲಯ ವ್ಯಾಪ್ತಿಗೆ ಬರುವುದಿಲ್ಲ. ಮಸೀದಿಯು ವಕ್ಫ್ ಆಸ್ತಿಯಾಗಿರುವುದರಿಂದ ವಕ್ಫ್ ನ್ಯಾಯಾಲಯ ವ್ಯಾಪ್ತಿಗೆ ಬರುತ್ತದೆ ಎಂದು ವಾದಿಸಿದ್ದರು.

ಹಾಗಾಗಿ ಈ ಪ್ರಕರಣವು ಸಿವಿಲ್ ನ್ಯಾಯಾಲಯದ ಪರಿಧಿಯಲ್ಲಿದೆಯೇ ಅಥವಾ ವಕ್ಫ್ ನ್ಯಾಯಾಲಯದ ಅಧೀನಕ್ಕೆ ಬರುತ್ತದೆಯೇ ಎಂಬ ಬಗ್ಗೆ ತೀರ್ಪು ನೀಡುವುದಾಗಿ ಸಿವಿಲ್ ನ್ಯಾಯಾಲಯ ಘೋಷಿಸಿತ್ತು. ಈ ಮಧ್ಯೆ ಧನಂಜಯ ಮತ್ತಿತರರು ಪ್ರಕರಣ ಸಂಬಂಧ ಯಾವುದೇ ಆದೇಶಗಳನ್ನು ನೀಡದಂತೆ ಸಿವಿಲ್ ನ್ಯಾಯಾಲಯಕ್ಕೆ ಸೂಚನೆ ನೀಡಬೇಕೆಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಹೈಕೋರ್ಟ್‌ಗೆ ದಾಖಲಾಗಿರುವ ಅರ್ಜಿಯ ವಿಚಾರಣೆ ನಡೆದು ವಿವಾದ ಸಂಬಂಧ ಆದೇಶ ನೀಡುವಂತೆ ಸಿವಿಲ್ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿತ್ತು.

ಆ ಹಿನ್ನೆಲೆಯಲ್ಲಿ ಆದೇಶ ತಡೆಹಿಡಿದ್ದ ಸಿವಿಲ್ ನ್ಯಾಯಾಲಯವು ಹೈಕೋರ್ಟ್ ತೀರ್ಪು ಬಾರದಿರುವ ಹಿನ್ನೆಲೆಯಲ್ಲಿ ತೀರ್ಪನ್ನು ಜು.22ರಂದು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News