ಪಿಲಿಕುಳ ಉದ್ಯಾನವನದಲ್ಲಿ 38 ಕಾಳಿಂಗ ಸರ್ಪಗಳ ಜನನ
ಮಂಗಳೂರು: ಪಿಲಿಕುಳ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಕೃತಕ ಕಾವು ಪಡೆದು 38 ಕಾಳಿಂಗ ಸರ್ಪದ ಮರಿಗಳು ಮೊಟ್ಟೆಯೊಡೆದು ಹೊರಬಂದಿವೆ.
ಸಂಪಾಜೆ ಪರಿಸರದಲ್ಲಿ ಸೆರೆ ಹಿಡಿದು ತಂದಿದ್ದ 8 ವರ್ಷದ ನಾಗಿಣಿ ಹಾಗೂ ಪಿಲಿಕುಳದಲ್ಲೇ ಹುಟ್ಟಿದ್ದ 10 ವರ್ಷದ ನಾಗೇಂದ್ರ ಈ ಮರಿಗಳ ತಂದೆ ತಾಯಿ. ಇಲ್ಲಿನ ಸಂತಾನೋತ್ಪತ್ತಿ ಕೇಂದ್ರದಲ್ಲಿ ನಾಗಿಣಿ ಮೊಟ್ಟೆ ಇಟ್ಟಿದೆ. ಆ ಮೊಟ್ಟೆಗಳನ್ನು ಇನ್ಕ್ಯುಬೇಟರ್ನಲ್ಲಿಟ್ಟ 76 ದಿನಗಳ ನಂತರ ಮರಿಗಳು ಹೊರ ಬಂದಿವೆ.
೨೦೧೦-೧೧ರಲ್ಲಿ ಇಲ್ಲಿ ವಿಶ್ವದಲ್ಲೇ ಪ್ರಥಮ ಬಾರಿಗೆ ಅಸಾಧ್ಯವೆಂದು ಪರಿಗಣಿಸಲಾಗಿದ್ದ ಸಂರಕ್ಷಿತ ಪರಿಸರದಲ್ಲಿನ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಮಾಡಿದ ದಾಖಲೆ ಪಿಲಿಕುಳ ಉದ್ಯಾನಕ್ಕಿದೆ. 100 ಕಾಳಿಂಗ ಸರ್ಪದ ಮರಿಗಳನ್ನು ಕೃತಕ ಕಾವು ಮೂಲಕ ಮರಿ ಮಾಡಲಾಗಿತ್ತು. ಮೂರು ಹಾವುಗಳು 100 ಮೊಟ್ಟೆ ಇಟ್ಟಿದ್ದವು. ಈ ಪೈಕಿ 35 ಮರಿಗಳನ್ನು ಪ್ರಾಣಿಗಳ ವಿನಿಮಯ ಯೋಜನೆಯಡಿ ದೇಶದಾದ್ಯಂತ ವಿವಿಧ ಮೃಗಾಲಯಗಳಿಗೆ ಕಳುಹಿಸಲಾಗಿತ್ತು. ಉಳಿದ 65ನ್ನು ಕಾಡಿಗೆ ಬಿಡಲಾಗಿತ್ತು. ಈ ವರ್ಷ ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರವು ಪಿಲಿಕುಳ ಮೃಗಾಲಯಕ್ಕೆ ಕಾಳಿಂಗ ಸರ್ಪ ಮತ್ತು ಮಲಬಾರ್ ಕೆಂಚಳಿಲಿನ ಸಂತಾನೋತ್ಪತ್ತಿ ಯೋಜನೆ ನೀಡಿತ್ತು. ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಸದ್ಯ 14 ಕಾಳಿಂಗ ಸರ್ಪಗಳಿವೆ. ಅವುಗಳ ಪೈಕಿ 9 ಗಂಡು ಹಾಗೂ 5 ಹೆಣ್ಣು ಸರ್ಪಗಳಿವೆ.