ಬೆಂಗಳೂರು; 30 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶಕ್ಕೆ ಪಡೆದ BDA
Update: 2022-07-08 15:59 GMT
ಬೆಂಗಳೂರು, ಜು.8: ಬಿಟಿಎಂ ಬಡಾವಣೆ ನಿರ್ಮಾಣಕ್ಕೆಂದು ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಮುಕ್ಕಾಲು ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಬಿಡಿಎ ವಿಶೇಷ ಕಾರ್ಯಪಡೆ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮತ್ತು ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ಬಿಡಿಎ ಅಧಿಕಾರಿಗಳು ಶುಕ್ರವಾರ ಒತ್ತುವರಿಯನ್ನು ತೆರವುಗೊಳಿಸಿ ಜಾಗವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಿಳೇಕಹಳ್ಳಿಯ ಸರ್ವೆ ಸಂಖ್ಯೆ 172/2ಎ ನಲ್ಲಿ ಸುಮಾರು 30 ಕೋಟಿ ರೂ. ಬೆಲೆಬಾಳುವ ಮುಕ್ಕಾಲು ಎಕರೆ ಪ್ರದೇಶದಲ್ಲಿ ಒತ್ತುವರಿದಾರರು ಒಂದು ತಾತ್ಕಾಲಿಕ ಶೆಡ್, ನರ್ಸರಿ ಮತ್ತು ಕಟ್ಟಡ ನಿರ್ಮಾಣ ಸರಕುಗಳನ್ನು ತುಂಬಿದ್ದರು. ಹಲವು ಬಾರಿ ಬಿಡಿಎ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ಒತ್ತುವರಿದಾರರು ಶೆಡ್ ಮತ್ತು ಇತರೆ ನಿರ್ಮಾಣಗಳನ್ನು ತೆರವುಗೊಳಿಸಿರಲಿಲ್ಲ. ಇತ್ತೀಚೆಗೆ ಸುಪ್ರೀಂಕೋರ್ಟ್ ಬಿಡಿಎ ಪರ ತೀರ್ಪು ನೀಡಿದ್ದರಿಂದ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು ಅನುಮತಿ ನೀಡಿತ್ತು.