×
Ad

ಬಂಟ್ವಾಳ; ಗೂಡಿನಬಳಿಯಲ್ಲಿ ಗುಡ್ಡ ಕುಸಿಯುವ ಭೀತಿ

Update: 2022-07-11 16:52 IST

ಬಂಟ್ವಾಳ, ಜು.11: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನಬಳಿಯ ಟಿಪ್ಪು ರಸ್ತೆ ಎಂಬಲ್ಲಿ ಗುಡ್ಡ ಕುಸಿದು ಇಲ್ಲಿನ ಮನೆಗಳ ಜನರು ತೀವ್ರ ಅಪಾಯವನ್ನು ಎದುರಿಸುತ್ತಿದ್ದಾರೆ‌. 

ವರ್ಷದ ಹಿಂದೆಯೇ ಗುಡ್ಡ ಸ್ವಲ್ಪ ಮಟ್ಟಿಗೆ ಕುಸಿದಿತ್ತು. ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದ ರಿಂದ ರವಿವಾರ ಗುಡ್ಡ ಮತ್ತಷ್ಟು ಕುಸಿದಿದೆ. ಇದರಿಂದ ಟಿಪ್ಪು ರಸ್ತೆ ಸಂಪೂರ್ಣ ಹಾನಿಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ.

ಗುಡ್ಡ ಕುಸಿದ ಭಾಗ ಮಳೆಯಿಂದ ಮೃದುವಾಗಿ ಸ್ವಲ್ಪ ಸ್ವಲ್ಪ ಮಣ್ಣು ಜಾರುತ್ತಿದ್ದು ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿಯುವ ಅಪಾಯ ಇದೆ. ಗುಡ್ಡ ಕುಸಿದ ಭಾಗದ ನೇರ ಕೆಳಗೆ ಎರಡು ಮನೆಗಳು ಇದ್ದು ಮನೆಮಂದಿ ಅಪಾಯವನ್ನು ಎದುರಿಸುತ್ತಿದ್ದಾರೆ.

ನಾಲ್ಕು ದಿನಗಳ ಹಿಂದೆ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಗುಡ್ಡ ಕುಸಿದು ಮೂವರು ಮೃತಪಟ್ಟಿದ್ದು ಇದೇ ಮಾದರಿಯ ಭೀತಿಯನ್ನು ಗೂಡಿನಬಳಿ ಟಿಪ್ಪು ರಸ್ತೆಯ ಕೆಳಭಾಗದ ಜನತೆ ಎದುರಿಸುತ್ತಿದ್ದಾರೆ. 

ಗುಡ್ಡೆ ಕುಸಿತದಿಂದ ರಸ್ತೆ ಸಂಪೂರ್ಣವಾಗಿ ಕಡಿದು ಹೋಗಿದ್ದು 75ಕ್ಕೂ ಅಧಿಕ ಮನೆಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಇನ್ನಷ್ಟು ಕುಸಿದರೆ ಇಲ್ಲಿಂದ ಹಾದುಹೋದ ಬಂಟ್ವಾಳ ಪುರಸಭಾ ವ್ಯಾಪ್ತಿಯ 27 ವಾರ್ಡ್ ಗಳಿಗೆ ಕುಡಿಯುವ ನೀರು ಪೂರೈಸುವ ಪೈಪ್ ಗೆ ಹಾನಿಯಾಗಲಿದ್ದು 27 ವಾರ್ಡ್ ಗಳಿಗೂ ಕುಡಿಯುವ ನೀರು ಪೂರೈಕೆ ಕಡಿತಗೊಳ್ಳಲಿದೆ.

ಗುಡ್ಡ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯ ಪುರಸಭಾ ಸದಸ್ಯೆಯ ನಿಯೋಗದಿಂದ ಜಿಲ್ಲಾಧಿಕಾರಿ, ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದೆ. ಶಾಸಕರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

"ಗುಡ್ಡ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ ಪುರಸಭೆಯ ಸ್ವಲ್ಪ ಅನುದಾನ ಸಾಕಾಗುತ್ತಿಲ್ಲ. ಹಾಗಾಗಿ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು ಅವರು ಭರವಸೆ ನೀಡಿದ್ದಾರೆ. ಗುಡ್ಡ ಇನ್ನಷ್ಟು ಕುಸಿದರೆ ಭಾರೀ ಕಷ್ಟ ನಷ್ಟ ಸಂಭವಿಸುವ ಅಪಾಯ ಇದೆ. ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಕೂಡಾ ಕಡಿತಗೊಳ್ಳಲಿದೆ. ಹಾಗಾಗಿ ಜಿಲ್ಲಾಡಳಿತ ಇದಕ್ಕೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಆಗ್ರಹಿಸುತ್ತೇನೆ". 

- ಝೀನತ್ ಫೈರೋಝ್, 
ಪುರಸಭಾ ಸದಸ್ಯೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News