ಉಪ್ಪಿನಂಗಡಿಗೆ ಆಗಮಿಸಿದ ಸಿಎಂ ಬೊಮ್ಮಾಯಿ; ಕುಮಾರಧಾರ ನದಿ, ಸುತ್ತಲಿನ ಪ್ರದೇಶ ವೀಕ್ಷಣೆ

Update: 2022-07-12 15:16 GMT

ಉಪ್ಪಿನಂಗಡಿ: ಮಳೆ ಹಾನಿ ಕುರಿತು ವೀಕ್ಷಣೆಗಾಗಿ ದ.ಕ. ಜಿಲ್ಲೆಗೆ ಮಂಗಳವಾರ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿಯವರು ಸುಳ್ಯದಲ್ಲಿ ವೀಕ್ಷಣೆ ನಡೆಸಿದ ಬಳಿಕ ಉಪ್ಪಿನಂಗಡಿಗೆ ಆಗಮಿಸಿ, ಇಲ್ಲಿನ ಕುಮಾರಧಾರ ನದಿ ಹಾಗೂ ಸುತ್ತಲಿನ ಪ್ರದೇಶಗಳನ್ನು ವೀಕ್ಷಿಸಿದರು.

ಸಂಜೆ 5:30ರ ಸುಮಾರಿಗೆ ಪುತ್ತೂರು ಮಾರ್ಗವಾಗಿ ಬಂದ ಸಿಎಂ ಅವರು ಕುಮಾರಧಾರ ನದಿಯ ಸೇತುವೆಯ ಬದಿ ಬಂದು ಇಳಿದರು. ಅಲ್ಲಿಂದಲೇ ಕಾಲ್ನಡಿಗೆಯ ಮೂಲಕ ಸೇತುವೆಯ ಮೇಲೆ ಹೋಗಿ ಸೇತುವೆಯ ಇಕ್ಕೆಲಗಳಲ್ಲಿ ನಿಂತು ನದಿಯನ್ನು ಹಾಗೂ ಅಲ್ಲಿಗೆ ಕಾಣುವ ನದಿ ಪಾತ್ರದ ಪರಿಸರವನ್ನು ವೀಕ್ಷಿಸಿ ಕಾರು ಹತ್ತಿ ಬಂಟ್ವಾಳ ಕಡೆಗೆ ತೆರಳಿದರು. ಸುಮಾರು 10 ನಿಮಿಷಗಳಷ್ಟು ಸಮಯ ಮಾತ್ರ ಅವರು ಇಲ್ಲಿದ್ದರು.

ಸರಿಯಾದ ಮಾಹಿತಿಯಿಲ್ಲ: ಸಂಗಮ ಕ್ಷೇತ್ರಕ್ಕೆ ಬಂದು ನದಿ ವೀಕ್ಷಣೆ ಹಾಗೂ ಬೆಳೆ ಹಾನಿ ಪ್ರದೇಶಗಳ ವೀಕ್ಷಣೆ ಅಷ್ಟು ಮಾಹಿತಿ ಬಿಟ್ಟರೆ, ಮುಖ್ಯಮಂತ್ರಿಯವರು ಎಲ್ಲಿ ಇಳಿಯುತ್ತಾರೆ. ಯಾವ ಪ್ರದೇಶವನ್ನು ವೀಕ್ಷಿಸುತ್ತಾರೆ ಎಂದು ಸರಿಯಾದ ಮಾಹಿತಿ ಜನರಿಗಾಗಲಿ, ಬಿಜೆಪಿ ಮುಖಂಡರು ಸೇರಿದಂತೆ ಅಧಿಕಾರಿಗಳಿಗೂ ಇರಲಿಲ್ಲ. ದೇವಸ್ಥಾನದ ಬಳಿಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಮಾರಧಾರ ಸೇತುವೆ ಇರುವುದರಿಂದ ಬರುವ ದಾರಿಯಲ್ಲಿಯೇ ಅವರನ್ನು ಸ್ವಾಗತಿಸಲು ಪಕ್ಷದ ಮುಖಂಡರು ಸೇರಿದಂತೆ ಜನರು ನಿಂತಿದ್ದರು. ಇನ್ನೊಂದೆಡೆ ದೇವಾಲಯದ ಬಳಿಯೂ ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಅಣಿಯಾಗಿತ್ತು. ಅಲ್ಲಿಯೂ ಒಂದಷ್ಟು ಜನರಿದ್ದರು. ಇನ್ನು ಗಾಂಧಿಪಾರ್ಕ್, ಕೂಟೇಲು ಬಳಿಯೂ ಮುಖ್ಯಮಂತ್ರಿಯವರು ಬೆಳೆ ಹಾನಿ ವೀಕ್ಷಣೆಗೆ ಇಲ್ಲಿಗೆ ಬರಬಹುದೆಂಬ ನಿರೀಕ್ಷೆಯಿಂದ ಅಲ್ಲಿಯೂ ಸೇರಿದ್ದರು. ಆದರೆ ಮುಖ್ಯಮಂತ್ರಿಯವರು ಸೇತುವೆಯಿಂದಲೇ ವಾಪಸಾದರು.

ಬಿ.ಸಿ.ರೋಡು - ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಚರಂಡಿಗೆ ಮಣ್ಣು ಬಿದ್ದು ಇದ್ದ ಚರಂಡಿಯಲ್ಲಿ ಸರಿಯಾಗಿ ನೀರು ಹೋಗುತ್ತಿರಲಿಲ್ಲ. ನಟ್ಟಿಬೈಲ್‍ನಲ್ಲಿ ಇದು ಕೃತಕ ನೆರೆಗೂ ಕಾರಣವಾಗಿತ್ತು. ಮುಖ್ಯಮಂತ್ರಿಯವರು ಬರುತ್ತಾರೆಂದು  ಕಾಮಗಾರಿಯ ಗುತ್ತಿಗೆದಾರರ ತಂಡವು ಮಂಗಳವಾರ ಬೆಳಗ್ಗೆಯಿಂದಲೇ ಜೆಸಿಬಿ ಮೂಲಕ ಚರಂಡಿಯನ್ನು ಬಿಡಿಸಿಕೊಡುತ್ತಿತ್ತು. ಅಲ್ಲದೇ, ಕುಮಾರಧಾರ ಸೇತುವೆಯಿಂದ ಬಸ್ ನಿಲ್ದಾಣಕ್ಕೆ ತಿರುಗುವ ಹೆದ್ದಾರಿ ತನಕ ರಸ್ತೆ ಬದಿ ಹಾಕಲಾಗಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸಿತ್ತು. ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಗುರುವಾಯನಕೆರೆ ರಾಜ್ಯ ಹೆದ್ದಾರಿಗೆ ತಿರುಗುವಲ್ಲಿದ್ದ ಹೊಂಡ- ಗುಂಡಿಗಳನ್ನು ಸಿಮೆಂಟ್ ಮಿಶ್ರಣ ಬಳಸಿ ಇಂದು ಮುಚ್ಚಲಾಗಿತ್ತು. ಮುಖ್ಯಮಂತ್ರಿಯವರು ಉಪ್ಪಿನಂಗಡಿಗೆ ಬಂದಿದ್ದರಿಂದ ಇಷ್ಟಾದರೂ ಲಾಭವಾಯಿತು ಎನ್ನುವ ಮಾತು ಸಾರ್ವಜನಿಕರಲ್ಲಿ ಕೇಳಿ ಬಂತು.

ಶಾಸಕ ಸಂಜೀವ ಮಠಂದೂರು ಇಲ್ಲಿನ ನದಿ ಪ್ರವಾಹದ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದರು. ಮುಖ್ಯಮಂತ್ರಿಯವರೊಂದಿಗೆ ಕಂದಾಯ ಸಚಿವ ಆರ್. ಅಶೋಕ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್. ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು. 

ಮುಖ್ಯಮಂತ್ರಿಯವರು ಉಪ್ಪಿನಂಗಡಿಗೆ ಆಗಮಿಸುತ್ತಿದ್ದಂತೆ ಕುಮಾರಧಾರಾ ಸೇತುವೆ ಬಳಿಯಲ್ಲಿ ಬಿಜೆಪಿ ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ಎನ್. ಉಮೇಶ್ ಶೆಣೈ, ಸುನಿಲ್ ಕುಮಾರ್ ದಡ್ಡು, ರಾಮಚಂದ್ರ ಮಣಿಯಾಣಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾ ಚಂದ್ರ ಮುಳಿಯ, ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಸುರೇಶ್ ಅತ್ರಮಜಲು, ಧನಂಜಯ ಕುಮಾರ್, ಲೋಕೇಶ್ ಬೆತ್ತೋಡಿ, ಯು.ಟಿ. ತೌಸೀಫ್, ಯು.ಕೆ. ಇಬ್ರಾಹಿಂ, ಶ್ರೀಮತಿ ಶೋಭಾ, ವನಿತಾ, ಹಿರೇಬಂಡಾಡಿ ಗ್ರಾಮ ಪಂಚಾಯತ್ ಸದಸ್ಯ ಶೌಕತ್ ಅಲಿ, ನಿತಿನ್, ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ,  ಸದಸ್ಯ ಸಂತೋಷ್,  ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಮುಕುಂದ ಬಜತ್ತೂರು, ಲಕ್ಷ್ಮಣ ಗೌಡ, ಚಂದಪ್ಪ ಮೂಲ್ಯ ಮತ್ತಿತರರು ಸ್ವಾಗತಿಸಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಎಸ್.ಪಿ. ಋಷಿಕೇಶ್ ಸೋನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಕೆ., ಪುತ್ತೂರು ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ತಹಶೀಲ್ದಾರ್ ನಿಸರ್ಗ ಪ್ರೀಯ, ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News