ಕೇಂದ್ರ ಸರಕಾರದಿಂದ ರೈತರ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆ: ಕುರುಬೂರು ಶಾಂತಕುಮಾರ್

Update: 2022-07-27 12:41 GMT
(ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ರೈತ ಮುಖಂಡರು)

ಬೆಂಗಳೂರು, ಜು.27: ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಆ.22ರಂದು ದಿಲ್ಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ರೈತರ ಕಿಸಾನ್ ಮಹಾ ಪಂಚಾಯತ್ ನಡೆಸಲಾಗುತ್ತಿದ್ದು, ರಾಜ್ಯದಿಂದಲೂ ಸಾವಿರಾರು ರೈತರು ಭಾಗವಹಿಸಲು ತೀರ್ಮಾನಿಸಲಾಗಿದೆ ಎಂದು ದಕ್ಷಿಣ ಭಾರತ ರಾಜ್ಯಗಳ(ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ) ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.  

ಬುಧವಾರ ನಗರದ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿ ಉತ್ಪನ್ನಗಳಿಗೆ ಖಾತರಿ ಕನಿಷ್ಠ ಬೆಂಬಲ ಬೆಲೆ ಕಾಯಿದೆ ಜಾರಿ ಬಗ್ಗೆ ರಚಿಸಿರುವ 26 ಜನರ ಸಮಿತಿಗೆ ಅಧ್ಯಕ್ಷರೇ ಇಲ್ಲ, ವರದಿ ನೀಡಲು ನಿರ್ದಿಷ್ಟ ಕಾಲಾವಧಿಯು ಇಲ್ಲ, ಬಹುತೇಕ ಸದಸ್ಯರು ಸರಕಾರದ ಪರವಾಗಿವಾದ ಮಾಡುವವರೇ ಆಗಿದ್ದಾರೆ ಎಂದರು.

ಹೋರಾಟನಿರತ ರೈತರ ಬೇಡಿಕೆಯನ್ನು ವಿರೋಧಿಸುತ್ತಿದ್ದವರೆ ಈ ಸಮಿತಿಯ ಸದಸ್ಯರಾಗಿದ್ದಾರೆ. ಒಂದು ವರ್ಷ ಹೋರಾಟ ಮಾಡಿದ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ವತಿಯಿಂದ ಮೂರು ಜನ ಮಾತ್ರ ಸಮಿತಿಗೆ ಬನ್ನಿ ಎಂದು ಕರೆಯುತ್ತಿರುವುದು ರೈತರ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆಯಾಗಿದೆ. ಆದುದರಿಂದ, ಈ ಸಮಿತಿಯ ರಚನೆಯನ್ನು ನಾವು ಬಹಿಷ್ಕರಿಸುತ್ತೇವೆ, ವಿರೋಧಿಸುತ್ತಿದ್ದೇವೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ಕಬ್ಬಿನ ದರ ನಿಗದಿ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದು ಖಂಡಿಸಿ ರಾಜ್ಯ ಸರಕಾರಕ್ಕೆ ಆ.5 ರವರಗೆ ಅಂತಿಮ ಗಡುವು ನೀಡಲಾಗಿದೆ. ನಿರ್ಲಕ್ಷ್ಯ ಮುಂದುವರೆದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ರಾಜ್ಯ ಸರಕಾರ ಮಳೆ ಹಾನಿ ಬೆಳೆನಷ್ಟ ಮಾನದಂಡ ಬದಲಿಸದೆ ಹೋದರೆ, ರೈತರಿಗೆ ನ್ಯಾಯ ಸಿಗುವುದಿಲ್ಲ. ಮಳೆ ಹಾನಿ ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಎಸ್‍ಡಿಆರ್‍ಎಫ್ ಹಾಗೂ ಎನ್‍ಡಿಆರ್‍ಎಫ್ ಮಾನದಂಡಗಳು ಬದಲಾಗಬೇಕು. ಅಲ್ಲದೆ, ತಕ್ಷಣವೆ ರಾಜ್ಯಾದ್ಯಂತ ಮಳೆಯಿಂದಾಗಿ ಸಂಭವಿಸಿರುವ ಬೆಳೆನಷ್ಟಕ್ಕೆ ಪರಿಹಾರ ಕೊಡಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ವಿ.ಎಚ್.ನಾರಾಯಣರೆಡ್ಡಿ, ಉಪಾಧ್ಯಕ್ಷ  ತೇಜಸ್ವಿ ಪಟೇಲ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ್, ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಯತಿರಾಜ್ ನಾಯ್ಡು, ಹೈಕೋರ್ಟ್ ವಕೀಲ ಭೀಮಯ್ಯ, ಮುಖಂಡರಾದ ಪ್ರೇಮಾ, ಎಂ.ಜಿ.ಸಿಂದಗಿ, ದೇವಕುಮಾರ್, ಹತ್ತಳ್ಳಿ ದೇವರಾಜ್, ಬಸವರಾಜ ಪಾಟೀಲ್, ಸುರೇಶ್ ಪಾಟೀಲ್, ಗುರುಸಿದ್ದಪ್ಪ, ಮಂಜುನಾಥ್, ತಮ್ಮಯ್ಯಪ್ಪ, ಬರದನಪುರ ನಾಗರಾಜ್, ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು.

'ವಿನಾಯಿತಿ-ಜಿಎಸ್ಟಿ ವಸೂಲಿ '

ರೈತರ ಕೃಷಿ ಉತ್ಪನ್ನಗಳು, ಮಜ್ಜಿಗೆ, ಮೊಸರು, ಅಪ್ಪಳ, ರಸಗೊಬ್ಬರ, ಕೀಟನಾಶಕಗಳಿಗೆ ಜಿಎಸ್ಟಿ ವಿಧಿಸುವುದು, ಕುದುರೆ ಜೂಜು ಬೆಟ್ಟಿಂಗ್, ಕ್ಯಾಸಿನೋಗಳಿಗೆ, ಪೆಟ್ರೋಲ್, ಡೀಸೆಲ್‍ಗಳಿಗೆ ವಿನಾಯಿತಿ ನೀಡುವುದು ಸಮಂಜಸವಲ್ಲ. ರೈತರಿಗೆ ಒಂದು ಕಡೆ ಸಹಾಯಧನ ನೀಡಿ, ಮತ್ತೊಂದು ಕಡೆ ಜಿಎಸ್ಟಿ ವಿಧಿಸಿ ಅದನ್ನು ವಸೂಲಿ ಮಾಡುತ್ತಿರುವುದು ಸರಕಾರದ ದ್ವಂದ್ವ ನೀತಿಯಲ್ಲವೇ?

-ಕುರುಬೂರು ಶಾಂತಕುಮಾರ್, ರೈತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News