ಬಿ.ಸಿ.ನಾಗೇಶ್ ಸಚಿವರಾದ ಬಳಿಕ ಶಿಕ್ಷಣ ಇಲಾಖೆ ಸಂಪೂರ್ಣ ಗೊಂದಲಮಯವಾಗಿದೆ: ರಮೇಶ್ ಬಾಬು

Update: 2022-07-27 12:50 GMT
ಬಿ.ಸಿ.ನಾಗೇಶ್ - ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು

ಬೆಂಗಳೂರು, ಜು.27: ರಾಜ್ಯ ಸರಕಾರ ನಿನ್ನೆ ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ಆರು ವರ್ಷ ಪೂರ್ಣವಾಗಿರಬೇಕು ಎಂಬ ಹೊಸ ಆದೇಶವನ್ನು ಹೊರಡಿಸಿದೆ. ಬಿ.ಸಿ.ನಾಗೇಶ್ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ನಂತರ ಇಲಾಖೆ ಸಂಪೂರ್ಣ ಗೊಂದಲಮಯವಾಗಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆ, ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಣೆ ವಿಚಾರ, ಮೌಲ್ಯ ಮಾಪನ ಮಾಡುವವರಿಗೆ ಭತ್ತೆ ವಿಚಾರ, ಶಿಕ್ಷಕರ ವರ್ಗಾವಣೆ ವಿಚಾರ, ಮಕ್ಕಳ ಬಿಸಿ ಊಟ, ಮೊಟ್ಟೆ ವಿತರಣೆ ವಿಚಾರವಿರಬಹುದು ಎಲ್ಲ ವಿಚಾರಗಳಲ್ಲಿ ಅವಾಂತರಗಳನ್ನು ಸೃಷ್ಟಿಸಲಾಗಿದೆ ಎಂದು ಕಿಡಿಗಾರಿದರು.

 (ರಮೇಶ್ ಬಾಬು- ಕೆಪಿಸಿಸಿ ವಕ್ತಾರ)


ಶಿಕ್ಷಣ ಇಲಾಖೆ ಕಳೆದ ಮೇ ತಿಂಗಳಿಂದಲೇ ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಘೋಷಿಸಿದ್ದು, ಈಗಾಗಲೇ ತ್ರೈಮಾಸಿಕ ಅವಧಿ ಮುಕ್ತಾಯವಾಗಿದೆ. ಆದರೆ ಈಗ ಈ ಆದೇಶವನ್ನು ನೀಡಿದ್ದಾರೆ. ಈ ಆದೇಶ ಈ ವರ್ಷದಿಂದಲೇ ಜಾರಿಗೆ ಅಥವಾ ಮುಂದಿನ ವರ್ಷಕ್ಕೆ ಜಾರಿಯಾಗುವುದೇ ಎಂಬ ಸ್ಪಷ್ಟನೆ ನೀಡಿಲ್ಲ. ಇಂತಹ ಗೊಂದಲಮಯ ಆದೇಶವನ್ನು ಯಾಕೆ ನೀಡಲಾಗಿದೆ ಎಂಬ ಮಾಹಿತಿಯು ಪ್ರಸ್ತಾಪವಾಗಿಲ್ಲ ಎಂದು ರಮೇಶ್ ಬಾಬು ಹೇಳಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಾಲ್ಕು ವಿಭಾಗಗಳಲ್ಲಿ ವರ್ಗೀಕರಣ ಮಾಡಲಾಗಿದೆ. 1-5 ಪ್ರಾಥಮಿಕ ಶಿಕ್ಷಣ, 6-8 ಒಂದು ಹಂತ, 9-11 ಮತ್ತೊಂದು ಹಂತ ಹಾಗೂ ಪದವಿಯನ್ನು ನಾಲ್ಕು ವರ್ಷಗಳ ಕಾಲ ಮಾಡಲು ತೀರ್ಮಾನ ಮಾಡಲಾಗಿದೆ. ಇಡೀ ದೇಶದಲ್ಲಿ ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ವಯೋಮಿತಿ ಇಟ್ಟುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. 

ಪ್ರಸ್ತುತ ಇರುವ ಕಾನೂನು ಪ್ರಕಾರ ಐದು ವರ್ಷ ಐದು ತಿಂಗಳ ಮಗು ಶಾಲೆಗೆ ದಾಖಲಾತಿ ಪಡೆಯಬಹುದು. ಈಗಾಗಲೆ ರಾಜ್ಯದಲ್ಲಿ ಸರಕಾರಿ, ಅರೆ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಸಂದರ್ಭದಲ್ಲಿ ಕೇವಲ ಎರಡು ದಿನಗಳಲ್ಲಿ ಈ ವಿಚಾರವಾಗಿ ಆದೇಶ ಹೊರಡಿಸಲಾಗಿದೆ ಎಂದು ರಮೇಶ್ ಬಾಬು ಹೇಳಿದರು.

ಯಾವುದೇ ವಿಮರ್ಶೆ ಮಾಡದೆ, ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸದೆ ಈ ಆದೇಶ ಹೊರಡಿಸಲಾಗಿದೆ. ಇದರಿಂದ ಪೋಷಕರು, ಶಿಕ್ಷಕರು ಹಾಗೂ ಮಕ್ಕಳು ಗೊಂದಲಕ್ಕೀಡಾಗಿದ್ದಾರೆ. ಸರಕಾರದ ಈ ಆದೇಶವನ್ನು ಹಾಗೂ ಶಿಕ್ಷಣ ಸಚಿವರ ನಡೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರ ನಿನ್ನೆ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ ಅವರು, ಸರಕಾರ ಇನ್ನಾದರೂ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ರಾಜ್ಯ ಪರೀಕ್ಷಾ ಮಂಡಳಿಯ ಮೂಲಕ ಬೆಂಗಳೂರಿನ ಖಾಸಗಿ ಸಂಸ್ಥೆಯನ್ನು ಬಳಸಿಕೊಂಡು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಗೆ ಶಿಕ್ಷಣ ಇಲಾಖೆಯಿಂದ ಹಣ ಪಾವತಿಸಲಾಗುತ್ತಿದೆ. ಸಚಿವರು ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಈ ಸಂಸ್ಥೆಯನ್ನು ಬಳಸಿಕೊಂಡಿದ್ದರೆ ಯಾವುದೇ ಆಕ್ಷೇಪ ಇರುತ್ತಿರಲಿಲ್ಲ. ಆದರೆ, ಇಲಾಖೆಯ ಹಣದಲ್ಲಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣ ಖಾತೆ ಹಾಗೂ ಪಕ್ಷದ ವಿಚಾರಗಳನ್ನು ಹಂಚಲು ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ಈ ಸಂಬಂಧ ರಾಜ್ಯ ಸರಕಾರ ತನಿಖೆ ನಡೆಸಿ ಸಚಿವರಿಂದ ಸಂಬಂಧಪಟ್ಟ ಹಣವನ್ನು ಹಿಂಪಡೆಯಬೇಕು ಎಂದು ಪಕ್ಷದ ಪರವಾಗಿ ರಮೇಶ್ ಬಾಬು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News