×
Ad

ಅಮಾಯಕರ ಕೊಲೆ, ಸರಕಾರದ ನಡೆ, ಸಿಎಂ ಪಕ್ಷಪಾತಿ ಧೋರಣೆಗೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡನೆ

Update: 2022-07-30 12:30 IST
ಇಬ್ರಾಹಿಂ ಸಾಹೇಬ್ ಕೋಟ

ಉಡುಪಿ : ಕಳೆದ ಕೆಲವು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕ ಯುವಕರಾದ ಮಸೂದ್, ಪ್ರವೀಣ್ ಹಾಗೂ ಪಾಝಿಲ್‌ರವರ ಕೊಲೆ ನಡೆದಿರುವುದು ಖಂಡನೀಯ. ಇಂತಹ ರಾಕ್ಷಸೀ ಕೃತ್ಯ ಹಾಗೂ ಬಿಜೆಪಿ ಸರಕಾರದ ನಡೆ, ಮುಖ್ಯಮಂತ್ರಿಯ ಪಕ್ಷಪಾತಿ ಧೋರಣೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಕೆಲವು ಸಮಯಗಳಿಂದ ರಾಜ್ಯದಲ್ಲಿ ಹಲವಾರು ಅಮಾಯಕ ಯುವಕರ ಕೊಲೆಗಳು ನಡೆಯುತ್ತಿದ್ದು ಬಿಜೆಪಿ ಸರಕಾರದ ಮುಖ್ಯಮಂತ್ರಿ ಬೊಮ್ಮಾಯಿ ಯವರು ಶವದ ಮೇಲೆ ಆಡಳಿತವನ್ನು ನಡೆಸುತ್ತಿದ್ದಾರೆ. ಸರಕಾರ ಮೊದಲ ಘಟನೆ ನಡೆದ ಕೂಡಲೆ ಸೂಕ್ತ ಕ್ರಮ ಕೈಗೊಂಡಿದ್ದರೆ ಮುಂದೆ ಇಂತಹ ಘಟನೆಗಳು  ಮರುಕಳಿಸುತ್ತಿರಲಿಲ್ಲ. ಆದರೆ ಸರಕಾರದ ಪಕ್ಷಪಾತದ ಧೋರಣೆ ಬಿಜೆಪಿಯ ನಾಯಕರ ಉದ್ರೇಕ ಹೇಳಿಕೆಗಳ ಪರಿಣಾಮವಾಗಿ ದಿನನಿತ್ಯ ಅಮಾಯಕ ಯುವಕರು ಕೊಲೆಯಾಗುತಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಗುರುವಾರ ಕೊಲೆಯಾದ ಪ್ರವೀಣನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಚೆಕ್ ವಿತರಿಸಿದರು. ಆದರೆ ಅದೇ ಊರಿನಲ್ಲಿ ಅದಕ್ಕಿಂತ ಮುಂಚೆ ಕೊಲೆಯಾದ ಮಸೂದನ ಮನೆಗೆ ಭೇಟಿ ನೀಡದೆ ಬೆಂಗಳೂರಿಗೆ ವಾಪಾಸಾದರು. ರಾಜ್ಯದ ಒಬ್ಬ ಮುಖ್ಯಮಂತ್ರಿಯ ಈ  ರೀತಿಯ ಪಕ್ಷಪಾತದ ನಡತೆ ಯಾವ ನಾಗರಿಕ ಸಮಾಜ ಸಹ ಒಪ್ಪುವುದಿಲ್ಲ.

ಸರಕಾರದ ಇಂತಹ ಮನಸ್ಥಿತಿಯ ಪರಿಣಾಮವಾಗಿ ರಾಜ್ಯದಲ್ಲಿ ಇಂದು ಕೊಲೆ ಹಿಂಸೆ ತಾಂಡವವಾಡುತ್ತಿದೆ. ಆದ್ದರಿಂದ ಸರಕಾರ ಈ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಂಡು ಸಮಾಜದಲ್ಲಿ ಶಾಂತಿ ಸಮಾಧಾನ ನೆಲೆಸುವಂತೆ ಪ್ರಯತ್ನಿಸಬೇಕು. ಹಾಗೆಯೇ ಸಾರ್ವಜನಿಕರು ಯಾವುದೇ ಪ್ರಚೋದನೆಗೆ ಒಳಗಾಗದೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡ ಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News