ಬೆಂಗಳೂರು | ಸಿಇಟಿ ಫಲಿತಾಂಶದಲ್ಲಿ ಅನ್ಯಾಯ: ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಪ್ರತಿಭಟನೆ
Update: 2022-08-01 15:36 GMT
ಬೆಂಗಳೂರು, ಆ.1: ಸಿಇಟಿ ಅಂಕದ ಜತೆ ಪಿಯುಸಿ ಅಂಕ ಸೇರಿಸದೆ ಅನ್ಯಾಯ ಮಾಡಲಾಗಿದೆ ಎಂದು ಸಿಇಟಿ ಮರುಪರೀಕ್ಷಾ(ರಿಪೀಟರ್ಸ್) ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಸೋಮವಾರ ನಗರದ ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿ ಮುಂದೆ ಜಮಾಯಿಸಿದ ಸಿಇಟಿ ಮರುಪರೀಕ್ಷಾ(ರಿಪೀಟರ್ಸ್) ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಘೋಷಣೆ ಕೂಗಿ, ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಬಾರಿ ಕೋವಿಡ್ ಹಿನ್ನೆಲೆ ಪಿಯುಸಿ ಪರೀಕ್ಷೆ ರದ್ದಾಗಿತ್ತು. ಆಗ ಕೇವಲ ಸಿಇಟಿ ಅಂಕ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಆದರೆ, ಈ ವರ್ಷ ಸಿಇಟಿ ಜತೆ ಪಿಯುಸಿ ಅಂಕವನ್ನು ಪರಿಗಣಿಸುವಂತೆ ಪ್ರತಿಭಟನಾ ವಿದ್ಯಾರ್ಥಿಗಳು ಆಗ್ರಹಿಸಿದರು.
ಹಿಂದೆ 90 ಅಂಕ ಪಡೆದವರಿಗೂ 15,000 ಒಳಗೆ ರ್ಯಾಂಕ್ ದೊರೆತಿತ್ತು. ಆದರೆ, ಈ ಬಾರಿ 98 ಅಂಕ ಪಡೆದಿದ್ದರೂ, ಸಹ 1 ಲಕ್ಷದ ಮೇಲೆ ರ್ಯಾಂಕಿಂಗ್ ದೊರೆತಿದೆ. ಈ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಒತ್ತಾಯ ಮಾಡಿದರು.