ಸತ್ಯಾಗ್ರಹ ನಿಲ್ಲಿಸುವಂತೆ ವಾಲ್ಮೀಕಿ ಗುರು ಪೀಠದ ಶ್ರೀಗಳಿಗೆ ಎಚ್‍ಡಿಕೆ ಮನವಿ

Update: 2022-08-03 17:28 GMT

ಬೆಂಗಳೂರು, ಆ.3: ಪರಿಶಿಷ್ಟ ವರ್ಗದ ಮೀಸಲು ಸೌಲಭ್ಯ ಹೆಚ್ಚಿಸಲು ಒತ್ತಾಯಿಸಿ ಕಳೆದ 175 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಭೇಟಿ ಮಾಡಿ ಚರ್ಚೆ ನಡೆಸಿ ಧರಣಿ ಕೈಬಿಡುವಂತೆ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸ್ವಾಮೀಜಿಗಳು 175 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಈ ಸರಕಾರದಲ್ಲಿ ಮುಖ್ಯಮಂತ್ರಿ ಆಗಲಿ ಅಥವಾ ಮಂತ್ರಿಗಳು ಆಗಲಿ ಇಲ್ಲವೇ? ಯಾವುದೇ ಸಚಿವರು ಸ್ವಾಮೀಜಿ ಅವರನ್ನು ಭೇಟಿಯಾಗಿಲ್ಲ. ಇದು ಸ್ವಾಮೀಜಿಯೊಬ್ಬರನ್ನು ನಡೆಸಿಕೊಳ್ಳುವ ರೀತಿ ಇದೇನಾ? ಅವರು ಕಿಡಿಕಾರಿದರು.

ಹಿಂದೆ ಇದೇ ಬಿಜೆಪಿಯ ಕೆಲ ನಾಯಕರು ನನ್ನ ಸರಕಾರದ ವಿರುದ್ದ ವಾಲ್ಮೀಕಿ ಮಠದ ಶ್ರೀಗಳನ್ನ ಎತ್ತಿ ಕಟ್ಟಿದ್ದರು. ಇವತ್ತು ಬಿಜೆಪಿ ಅವರು ಸ್ವಾಮೀಜಿ ಅವರಿಗೆ ಕೊಟ್ಟ ಗೌರವ ಏನು? ಎಂದು ಪ್ರಶ್ನಿಸಿದ ಅವರು, ಸ್ವಾಮೀಜಿ ಕೂಡಲೇ ಧರಣಿ ವಾಪಸ್ ಪಡೆಯಬೇಕು. ಹಠ ಮಾಡಬೇಡಿ. ನಿಮ್ಮ ಹೋರಾಟದ ಬಗ್ಗೆ ಕುಳಿತು ಮಾತನಾಡೋಣ. ನಿಮ್ಮ ಆರೋಗ್ಯ ಮುಖ್ಯ. ಮುಂದಿನ ದಿನಗಳಲ್ಲಿ ನಮ್ಮ ಸರಕಾರ ಬಂದರೆ ಮೊದಲು ನಿಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಮಾತು ಕೊಟ್ಟು ಉಳಿಸಿಕೊಂಡಿಲ್ಲ. ಕೂಡಲೇ ಸಚಿವರು ಸ್ಥಳಕ್ಕೆ ಹೋಗಿ ಸ್ವಾಮೀಜಿ ಅವರ ಬೇಡಿಕೆ ಕೇಳಬೇಕು. ಕೂಡಲೇ ಶ್ರೀಗಳು ಧರಣಿ ಕೈ ಬಿಡಬೇಕು ಎಂದು ಕುಮಾಋಸ್ವಾಮಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಂ.ರಮೇಶ್ ಗೌಡ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News